ದೇಶದಲ್ಲಿ ದ್ವೇಷ, ಕ್ರೌರ್ಯ ತುಳುಕುತ್ತಿದೆ: ನಾಸಿರುದ್ದೀನ್ ಶಾ ಮತ್ತೆ ವಾಗ್ದಾಳಿ
ನವದೆಹಲಿ, ಜನವರಿ 4: ದೇಶದಲ್ಲಿ ಜನರ ಸುರಕ್ಷತೆಯ ಕುರಿತು ಮಾತನಾಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದ ನಟ ನಾಸಿರುದ್ದೀನ್ ಶಾ, ಈಗ ದೇಶವು ಭಯಾನಕ ದ್ವೇಷ ಹಾಗೂ ಕ್ರೌರ್ಯದಿಂದ ತುಂಬಿ ತುಳುಕುತ್ತಿದೆ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆಮ್ನೆಸ್ಟಿ ಇಂಡಿಯಾ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ 2.14 ನಿಮಿಷದ ವಿಡಿಯೋ ದಲ್ಲಿ ಅವರ ಹೇಳಿಕೆಯು ದಾಖಲಾಗಿದೆ.
ಕಲಾವಿದರು ಮತ್ತು ನಟರನ್ನು ಹತ್ತಿಕ್ಕಲಾಗುತ್ತಿದೆ ಮತ್ತು ಪತ್ರಕರ್ತರು ಮೌನವಹಿಸಿದ್ದಾರೆ ಎಂದು ನಾಸಿರುದ್ದೀನ್ ಆರೋಪಿಸಿದ್ದಾರೆ.

ಧರ್ಮದ ಹೆಸರಿನಲ್ಲಿ ದ್ವೇಷ ಗೋಡೆಗಳನ್ನು ಸೃಷ್ಟಿಸಲಾಗುತ್ತಿದೆ. ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ನಮ್ಮ ದೇಶವು ಭೀಕರ ದ್ವೇಷ ಹಾಗೂ ಕ್ರೌರ್ಯದಿಂದ ತುಂಬಿ ತುಳುಕಾಡುತ್ತಿದೆ ಎಂದಿದ್ದಾರೆ.
ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಅವರ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತಿದೆ. ಅವರ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ. ಅವರ ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಸಹ ಆರೋಪಿಸಿದ್ದಾರೆ.
ಆಮ್ನೆಸ್ಟಿ ಇಂಡಿಯಾ ವಿಡಿಯೋದ ಜೊತೆ ಟ್ವಿಟ್ಟರ್ನಲ್ಲಿ ಪೋಸ್ಟ್ ಕೂಡ ಮಾಡಿದೆ. 2018ರಲ್ಲಿ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕು ಸಮರ್ಥಕರನ್ನು ಅಡಗಿಸಲಾಗಿದೆ. ಈ ವರ್ಷ ನಮ್ಮ ಸಾಂವಿಧಾನಿಕ ಮೌಲ್ಯಗಳಿಗಾಗಿ ಎದ್ದು ನಿಲ್ಲಬೇಕಿದೆ. ಈ ಹತ್ತಿಕ್ಕುವಿಕೆಯನ್ನು ಅಂತ್ಯಗೊಳಿಸಬೇಕು ಎಂಬುದನ್ನು ಸರ್ಕಾರಕ್ಕೆ ತಿಳಿಸಬೇಕಿದೆ ಎಂದು ಬರೆಯಲಾಗಿದೆ.












Click it and Unblock the Notifications