ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಸ್ಯಾಹಾರದ ಜತೆಗೆ ಬಾಡೂಟ
ನವದೆಹಲಿ, ಮೇ 29: ಎರಡನೆಯ ಅವಧಿಗೆ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರ ಸಮಾರಂಭಕ್ಕೆ 6 ರಿಂದ 7 ಸಾವಿರ ಗಣ್ಯ ವ್ಯಕ್ತಿಗಳು ಹಾಜರಾಗುವ ನಿರೀಕ್ಷೆ ಇದೆ.
ರಾಷ್ಟ್ರಪತಿ ಭವನದಲ್ಲಿ ನಡೆಯುವ ಈ ಕಾರ್ಯಕ್ರಮ, ಅತ್ಯಂತ ದೊಡ್ಡ ಸಮಾರಂಭಗಳಲ್ಲಿ ಒಂದು ಎನಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ಅಮೋಘ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಗಣ್ಯರ ಸಂಖ್ಯೆ ಬೃಹತ್ ಪ್ರಮಾಣದಲ್ಲಿದ್ದರೂ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಯಕೆಯಂತೆ ಸರಳ ಹಾಗೂ ಗೌರವಯುತವಾಗಿ ನಡೆಯಲಿದೆ.
ರಾಷ್ಟ್ರಪತಿ ಭವನದ ಮುಖ್ಯದ್ವಾರ ಮತ್ತು ಮುಖ್ಯ ಕಟ್ಟಡದ ನಡುವಿನ ಅಂಗಳದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಜರುಗಲಿದೆ. ಸಾಮಾನ್ಯವಾಗಿ ಈ ಜಾಗದಲ್ಲಿ ದೇಶ ವಿದೇಶಗಳಿಂದ ಬರುವ ಸರ್ಕಾರದ ಮುಖ್ಯಸ್ಥರನ್ನು ಸ್ವಾಗತಿಸಲು ಮತ್ತು ಗೌರವ ನೀಡಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಕೇವಲ ಅಂದಾಜು 500 ಮಂದಿ ಮಾತ್ರವೇ ಸೇರಲು ಅವಕಾಶವಿರುವ ದರ್ಬಾರ್ ಹಾಲ್ ಬದಲು ರಾಷ್ಟ್ರಪತಿ ಭವನದ ಅಂಗಳದಲ್ಲಿ ಪ್ರಧಾನಿಯೊಬ್ಬರು ಪ್ರಮಾಣವಚನ ಸ್ವೀಕರಿಸುತ್ತಿರುವುದು ಇದು ನಾಲ್ಕನೆಯ ಬಾರಿ.
1990ರಲ್ಲಿ ಚಂದ್ರಶೇಖರ್ ಅವರು ಈ ಅಂಗಳದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಮೊದಲ ಪ್ರಧಾನಿಯಾಗಿದ್ದಾರೆ. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಕೂಡ ಇಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದರು. 2014ರಲ್ಲಿ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದ ಸಂದರ್ಭದಲ್ಲಿಯೂ ಪ್ರಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿತ್ತು. ಆಗ ಸಾರ್ಕ್ ದೇಶಗಳ ಮುಖ್ಯಸ್ಥರು ಸೇರಿದಂತೆ ಸುಮಾರು 4,000 ಮಂದಿ ಹಾಜರಾಗಿದ್ದರು.

ಹೆಚ್ಚು ಜನರು ಸೇರಲು ಅವಕಾಶ
ಈ ಸಮಾರಂಭವನ್ನು ಕೆಲವೇ ಜನರಿಗೆ ಸೀಮಿತಗೊಳಿಸುವ ಬದಲು ಹೆಚ್ಚು ಜನರು ಸೇರಲು ಅನುಕೂಲವಾಗುವಂತೆ ಆಯೋಜನೆ ಮಾಡಲಾಗಿದೆ. 14 ದೇಶಗಳ ಮುಖ್ಯಸ್ಥರು ವಿವಿಧ ದೇಶಗಳ ರಾಯಭಾರಿಗಳು, ಬುದ್ಧಿಜೀವಿಗಳು, ರಾಜಕೀಯ ಕಾರ್ಯಕರ್ತರು, ಸಿನಿಮಾ ತಾರೆಯರು ಮತ್ತು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರನ್ನು ಕೂಡ ಆಹ್ವಾನಿಸಲಾಗಿದೆ.

ಸಸ್ಯಾಹಾರ ಮತ್ತು ಮಾಂಸಾಹಾರ
ರಾಷ್ಟ್ರಪತಿ ಭವನವು ಆಹ್ವಾನಿತ ಗಣ್ಯರಿಗೆ ಸಂಜೆ ಏಳು ಗಂಟೆಯ ಸಮಾರಂಭದ ಬಳಿಕ ಲಘುವಾದ ಭೋಜನ ಪೂರೈಸಲಿದೆ. ಚಹಾ ಸಮಯದಲ್ಲಿ ಸಮೋಸಾ, ರಾಜ್ಭೋಗ್ ಮುಂತಾದ ಸಸ್ಯಾಹಾರಿ ತಿನಿಸುಗಳನ್ನು ಪೂರೈಕೆ ಮಾಡಲಿದೆ. ರಾತ್ರಿ ಭೋಜನದಲ್ಲಿ ಸಸ್ಯಾಹಾರದ ಊಟ ಮತ್ತು ಮಾಂಸಾಹಾರ ಎರಡೂ ಬಗೆಯ ತಿನಿಸುಗಳು ಇರಲಿವೆ.

ರಾಷ್ಟ್ರಪತಿ ಭವನದ ಸ್ಪೆಷನ್ 'ದಾಲ್ ರೈಸೀನಾ'
ವಿದೇಶಗಳಿಂದ ಬರುವ ಗಣ್ಯ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಪತಿ ಭವನದ ಅಡುಗೆ ಮನೆ ಆಹಾರ ತಯಾರಿಸಲಿದೆ. ಭೋಜನದ ಮುಖ್ಯ ತಿನಿಸು 'ದಾಲ್ ರೈಸೀನಾ'. ಇದನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ. ರಾಷ್ಟ್ರಪತಿ ಭವನದ ವೈಶಿಷ್ಟ್ಯವಾದ ಇದನ್ನು ತಯಾರಿಸಲು 48 ಗಂಟೆ ಬೇಕು. ಮಂಗಳವಾರ ರಾತ್ರಿಯಿಂದಲೇ ಈ ಅಡುಗೆಯ ಸಿದ್ಧಪಡಿಸುವ ಪ್ರಕ್ರಿಯೆ ನಡೆದಿದೆ.

ಒಂದು ಗಂಟೆ ತಡವಾಗಿ ಕಾರ್ಯಕ್ರಮ
2014ರಲ್ಲಿ ಸಂಜೆ 6 ಗಂಟೆಗೆ ಸಮಾರಂಭ ಆಯೋಜಿಸಿದ್ದರೂ, ಗಣ್ಯರು 4 ಗಂಟೆಯಿಂದಲೇ ಆಗಮಿಸಲು ಆರಂಭಿಸಿದ್ದರು. ಆಗ ಬಿಸಿಲ ಝಳ ಜೋರಾಗಿತ್ತು. ಭದ್ರತಾ ಕಾರಣಗಳಿಂದ ನೀರಿನ ಬಾಟಲಿಗಳನ್ನು ಒಳಗೆ ತರಲು ನಿರ್ಬಂಧವಿತ್ತು. ಹೀಗಾಗಿ ಆಹ್ವಾನಿತರು ಬಾಯಾರಿಕೆಯಿಂದ ಬಳಲಿದ್ದರು. ಹೀಗಾಗಿ ಈ ಬಾರಿ ಸಂಜೆ 7 ಗಂಟೆಗೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಜತೆಗೆ ಸಮಾರಂಭಕ್ಕೆ ಬರುವ ಎಲ್ಲರಿಗೂ ಸಾಕಷ್ಟು ನೀರು ಪೂರೈಕೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.












Click it and Unblock the Notifications