ಮೋದಿಗೆ ಪಟ್ಟ ಯಾರು ಏನಂತಾರೆ?
ನವದೆಹಲಿ, ಸೆ.14 : ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರನ್ನು 2014ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಶುಕ್ರವಾರ ಸಂಜೆ ಅಧಿಕೃತವಾಗಿ ಘೋಷಿಸಲಾಗಿದೆ. ಬಿಜೆಪಿ ಇದನ್ನು ಸ್ವಾಗತಸಿದ್ದರೆ, ವಿವಿಧ ಪಕ್ಷಗಳು ಹಲವು ರೀತಿ ವಿಶ್ಲೇಷಿಸಿವೆ.
ಬಿಜೆಪಿ ವರಿಷ್ಠ ನಾಯಕ ಎಲ್.ಕೆ.ಅಡ್ವಾಣಿ ಅವರು ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಆಗಮಿಸದೆ, ತಮ್ಮ ಪ್ರತಿರೋಧ ತೋರಿದರೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು.
ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಈ ಘೋಷಣೆ ಅಗತ್ಯವಿತ್ತು ಎಂದು ವಿಶ್ಲೇಷಿಸಿದರು.
ದೇಶದ ವಿವಿಧ ಪಕ್ಷಗಳ ನಾಯಕರು ನರೇಂದ್ರ ಮೋದಿ ಪರ ಮತ್ತು ವಿರೋಧವಾಗಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಇದು ಬೆಜೆಪಿಯ ಆಂತರಿಕ ವಿಚಾರ ಎಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ವಿವಿಧ ನಾಯಕರು ಪ್ರತಿಕ್ರಿಯೆಗಳು ಹೀಗಿವೆ.
ಯಾರ ವಿರೋಧವೂ ಇಲ್ಲ
ಪಕ್ಷದ ಸಂಸದೀಯ ಮಂಡಳು ಸಭೆ ನಿರ್ಧಾರ ಸಂತಸ ತಂದಿದೆ. ನರೇಂದ್ರ ಮೋದಿ ಅವರ ಆಯ್ಕೆಗೆ ಪಕ್ಷದ ಯಾವ ನಾಯಕರು ವಿರೋಧ ವ್ಯಕ್ತಪಡಿಸಿರಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಬೇಗ ದೀಪಾವಳಿ ಆಚರಿಸಲಿ
ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಅವರಿಗೆ ಬೇಗ ದೀಪಾವಳಿ ಆಚರಿಸಬೇಕು ಎಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಸರಿಯಾದ ಸಮಯಕ್ಕೆ ದೀಪಾವಳಿ ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ದೇಶ ಬಯಸಿದ್ದನ್ನು ಅವರು ಕೊಡುತ್ತಾರೆ
ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅತ್ಯುತ್ತಮ ಆಯ್ಕೆ. ಕೇಂದ್ರ ಯುಪಿಎ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ದೇಶಕ್ಕೆ ಪರ್ಯಾಯ ನಾಯಕತ್ವದ ಅವಶ್ಯಕತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ದೇಶದ ಜನರು ಬಯಸಿದ ನಾಯಕತ್ವವನ್ನು ಕೊಡುವ ಅರ್ಹತೆ ಮೋದಿ ಅವರಿಗೆ ಇದೆ ಎಂದು ಹೇಳಿದ್ದಾರೆ.
ಅಡ್ವಾಣಿ ಆಶೀರ್ವಾದವಿದೆ
ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಪಕ್ಷದ ಯಾವ ನಾಯಕರು ವಿರೋಧವಿಲ್ಲ. ವರಿಷ್ಠ ಎಲ್.ಕೆ.ಅಡ್ವಾಣಿ ಸಹ ಮೋದಿಗೆ ಆಶೀರ್ವಾದ ಮಾಡಿದ್ದಾರೆ. ನಾವೆಲ್ಲರೂ 2014ರ ಲೋಸಕಭೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲಿದ್ದೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿದ್ದಾರೆ.
ಮೋದಿ ವಿರುದ್ಧ ಹೋರಾಟವಲ್ಲ
ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂಬುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ವಿಷಯವಲ್ಲ. ನಾವು ವ್ಯಕ್ತಿಯ ಪರವಾಗಿ ಹೋರಾಟ ಮಾಡುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಜಾತಿ ಆಧಾರದಲ್ಲಿ ದೇಶವನ್ನು ಒಡೆಯುವ ಶಕ್ತಿಯ ವಿರುದ್ಧ ನಮ್ಮ ಹೋರಾಟ ಎಂದು ಸಿಂಗ್ ವಿಶ್ಲೇಷಿಸಿದ್ದಾರೆ.
ದೇಶದ ಜನರ ಭಾವನೆಗೆ ಬಿಜೆಪಿ ಮನ್ನಣೆ
ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ದೇಶದ ಕೋಟ್ಯಾಂತರ ಜನರ ಭಾವನೆಗೆ ಬಿಜೆಪಿ ಬೆಂಬಲ ಬೀಡಿದೆ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಧಾರ ಮೊದಲೇ ಆಗಬೇಕಾಗಿತ್ತು. ದೇಶದ ಎಲ್ಲಾ ಸಮುದಾಯದವರು ಮೋದಿ ಅವರನ್ನು ಬೆಂಬಲಿಸುತ್ತಾರೆ. ನಾನು ಸಹ ಅವರಿಗೆ ಬೆಂಬಲ ನೀಡುತ್ತೇನೆ ಎಂದು ಘೋಷಿಸಿದ್ದಾರೆ.
ರಾವಣ ಆದರ್ಶ ಪುರುಷನಲ್ಲ
ನರಹತ್ಯೆ, ನಕಲಿ ಎನ್ಕೌಂಟರ್ಗಳ ರೂವಾರಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿರುವುದು ರಾಮರಾಜ್ಯದಲ್ಲಿ ರಾವಣನನ್ನು ಬಿಂಬಿಸಿದಂತಾಗಿದೆ. ಸಮಾಜದ ಶಾಂತಿ ಕದಡಿದ ವ್ಯಕ್ತಿಯನ್ನು ಪ್ರಧಾನಿಯಾಗಿ ಬಿಂಬಿಸಿರುವುದು ಬಿಜೆಪಿಯ ಅತಿದೊಡ್ಡ ದುರಂತ. ರಾವಣ ಆದರ್ಶ ಪುರುಷ ಎಂದು ದೇಶ ಒಪ್ಪುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಾವು ಬೆಂಬಲ ನೀಡುವುದಿಲ್ಲ
ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾದರೂ ನಾವು ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಿಲ್ಲ ಎಂದು ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಹೇಳಿದ್ದಾರೆ. ಪಕ್ಷದ ತತ್ವ ಸಿದ್ದಾಂತಕ್ಕೆ ವಿರುದ್ಧವಾಗಿ ನಾವು ಎಂದಿಗೂ ಕಾರ್ಯ ನಿರ್ವಹಿಸುವುದಿಲ್ಲ ಮೋದಿಗೆ ನಮ್ಮ ಬೆಂಬವಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಮೋದಿ ಮೋಡಿ
ದೇಶದ ಜನರಲ್ಲಿ ಈಗಾಗಲೇ ನರೇಂದ್ರ ಮೋದಿ ಪ್ರಧಾನಿ ಎಂಬ ಭಾವನೆ ಮೂಡಿದೆ. ಮೋದಿ ದೇಶದ ಮುಂದಿನ ಆಶಾಕಿರಣವಾಗಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ದೇಶದಲ್ಲಿ ಮೋದಿ ಮೋಡಿ ಮಾಡಿದ್ದು, ಭಾರತವನ್ನು ಅಭಿವೃದ್ಧಿ ಮಾಡುತ್ತಾರೆ ಎಂದರು.
ಮೋದಿ ಸೂಕ್ತ ವ್ಯಕ್ತಿ
ಮೋದಿ ಅವರು ದೇಶದ ಆಡಳಿತ ವ್ಯವಸ್ಥೆಗೆ ಮೆರುಗು ನೀಡಬಲ್ಲ ಮತ್ತು ಪ್ರಧಾನಮಂತ್ರಿ ಹುದ್ದೆಗೆ ಗೌರವ ನೀಡಬಲ್ಲ ವ್ಯಕ್ತಿ. ಕಾಂಗ್ರೆಸ್ ಪಕ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವವನ್ನು ಹಾಳುಗೆಡವಿದೆ. ಬಿಜೆಪಿ ಪಾರದರ್ಶಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆ ನೀಡಿ ಎಲ್ಲರ ಸಮ್ಮುಖದಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮಾಡಿದೆ ಎಂದು ಮಾಜಿ ಸದಾನಂದಗೌಡ ಹೇಳಿದ್ದಾರೆ.
ಮೋದಿಯನ್ನು ಅಡ್ವಾಣಿ ಬೆಂಬಲಿಸಲಿ
ನರೇಂದ್ರ ಮೋದಿ ಎಲ್ಲರ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ. ಅವರು ಪ್ರಧಾನಿ ಅಭ್ಯರ್ಥಿಯಾಬೇಕು ಎಂಬುದು ಜನರ ಆಶಯ. ಎಲ್.ಕೆ.ಅಡ್ವಾಣಿ ಅವರು ಮೋದಿ ಅವರಿಗೆ ಪ್ರಧಾನಿ ಅಭ್ಯರ್ಥಿಯಾಗಲು ಬೆಂಬಲ ನೀಡಬೇಕು ಎಂದು ಮಾಜಿ ಉಪ ಮಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅಡ್ವಾಣಿ ಮೋದಿ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಬೇಸರ ತಂದಿದೆ.