ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ, ಅಧಿಕೃತ ಘೋಷಣೆ
ನವದೆಹಲಿ, ಆಗಸ್ಟ್ 20: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗೆ ಹಲವು ಹೆಸರುಗಳ ಪಟ್ಟಿಯೇ ಸಿದ್ಧವಾಗಿತ್ತು. ಆದರೆ ಕೊನೆಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಧಿಕೃತವಾಗಿ ಘೋಷಿಸಿದ್ದಾರೆ.
ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಸಮಯದಲ್ಲಿ ಕರಾವಳಿಗೆ ಮೋಸವಾದರೂ, ಪಕ್ಷದ ಅಧ್ಯಕ್ಷ ಸ್ಥಾನದ ಮೂಲಕ ಕೇಂದ್ರದ ನಾಯಕರು ಸಿಹಿ ಸುದ್ದಿ ನೀಡಿದ್ದಾರೆ.
ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಸಂಪುಟ ವಿಸ್ತರಣೆಯ ಸಮಯದಲ್ಲಿ ಮಂತ್ರಿಸ್ಥಾನ ನೀಡದಿರುವುದರಿಂದ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಬಹುದು ಎನ್ನಲಾಗಿತ್ತು. ಜೊತೆಗೆ ಈ ಸ್ಥಾನದ ಆಕಾಂಕ್ಷಿಗಳಲ್ಲಿ ಸಿಟಿ ರವಿ ಅವರೂ ಅಗ್ರಪಂಕ್ತಿಯಲ್ಲೇ ಇದ್ದರು.

ಆದರೆ ರಾಜ್ಯ ರಾಜಕಾರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ ಪ್ರಬಲರಾಗಿರುವುದರಿಂದ ಅವರಿಗೆ ಪ್ರತಿಸ್ಪರ್ಧಿಯಾಗುವಂಥವರನ್ನು ಆ ಸ್ಥಾನಕ್ಕೆ ತಂದರೆ ರಾಜ್ಯದಲ್ಲಿ ನಾಯಕರ ಬಂಡಾಯ ಆರಂಭವಾಗಬಹುದು ಎಂಬ ಅತಂಕವೂ ಬಿಜೆಪಿ ಕೇಂದ್ರ ನಾಯಕರಿಗಿತ್ತು. ಆದ್ದರಿಂದ ಸಂಘಪರಿವಾರದ ಹಿನ್ನೆಲೆಯಿಂದ ಬಂದ, ಸಂಭಾವಿತ ನಾಯಕರಾದ ನಳಿನ್ ಕುಮಾರ್ ಕಟೀಲ್ ಅವರನ್ನೇ ಈ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಬೆಳಗ್ಗೆಯೆಲ್ಲ ಸಂಪುಟ ರಚನೆಯ ನಂತರ ಕರಾವಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುತ್ತಿದ್ದವರು ಕೊಂಚ ನಿರಾಳರಾಗಿದ್ದಾರೆ.












Click it and Unblock the Notifications