ಅರ್ನಬ್ ಗೋಸ್ವಾಮಿ 'ನೇಷನ್ ವಾಂಟ್ಸ್ ಟು ನೋ' ಎನ್ನಲು ಅಡ್ಡಿಯಿಲ್ಲ!: ಹೈಕೋರ್ಟ್
ನವದೆಹಲಿ, ಅಕ್ಟೋಬರ್ 24: ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ತಮ್ಮ ವಾಹಿನಿಯಲ್ಲಿ ಚರ್ಚೆಗಳು ಮತ್ತು ಸುದ್ದಿಗಳನ್ನು ಪ್ರಸ್ತುತಪಡಿಸುವ ವೇಳೆ 'ನೇಷನ್ ವಾಂಟ್ಸ್ ಟು ನೋ' ಎಂಬ ಟ್ಯಾಗ್ ಲೈನ್ ಬಳಸಲು ಸ್ವತಂತ್ರರಾಗಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಆದರೆ ರಿಪಬ್ಲಿಕ್ ಟಿವಿಯು 'ನ್ಯೂಸ್ ಅವರ್' ಅಥವಾ ಅದನ್ನೇ ಹೋಲುವಂತಹ ಯಾವುದೇ ಇತರೆ ಮುದ್ರೆಯನ್ನು ಬಳಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದೆ.
ರಿಪಬ್ಲಿಕ್ ಟಿವಿಯ ಮಾಲೀಕತ್ವ ಹೊಂದಿರುವ ಎಆರ್ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಚರ್ಚಾ ಕಾರ್ಯಕ್ರಮವೊಂದಕ್ಕೆ 'ನ್ಯೂಸ್ ಅವರ್' ಎಂಬ ಹೆಸರು ಇರಿಸಿರುವುದನ್ನು ತೆಗೆದುಹಾಕಬೇಕು ಮತ್ತು ಅರ್ನಬ್ ಗೋಸ್ವಾಮಿ ತಮ್ಮ ಕಾರ್ಯಕ್ರಮಗಳಲ್ಲಿ ನೇಷನ್ ವಾಂಟ್ಸ್ ಟು ನೋ ಎಂಬ ಟ್ಯಾಗ್ ಲೈನ್ ಬಳಸದಂತೆ ನಿರ್ಬಂಧಿಸಬೇಕು ಎಂದು ಕೋರಿ 'ಟೈಮ್ಸ್ ನೌ' ವಾಹಿನಿಯ ಬೆನೆಟ್ ಆಂಡ್ ಕೋಲ್ಮನ್ ಆಂಡ್ ಕಂಪೆನಿ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.

ಈ ಎರಡೂ ಪದಗಳನ್ನು ಬಳಕೆ ಮಾಡದಂತೆ ಅರ್ನಬ್ ಗೋಸ್ವಾಮಿ ಅವರ ವಾಹಿನಿಯ ಮೇಲೆ ಕಾಯಂ ನಿರ್ಬಂಧ ವಿಧಿಸುವಂತೆ ಟೈಮ್ಸ್ ನೌ ಕೋರಿತ್ತು. ಆದರೆ 'ನೇಷನ್ ವಾಂಟ್ಸ್ ಟು ನೌ' ಟ್ಯಾಗ್ ಲೈನ್ ಬಳಕೆ ನಿರ್ಬಂಧದ ಬಗ್ಗೆ ವಿವರವಾದ ಪರಿಶೀಲನೆ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ.
ಇಡೀ ಸಿಬ್ಬಂದಿ ವಿರುದ್ಧ ದೂರು
ನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮತ್ತು ಮುಂಬೈ ಪೊಲೀಸರ ನಡುವಿನ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿದೆ. ಮುಂಬೈ ಪೊಲೀಸರಿಗೆ ಮಾನಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ವಾಹಿನಿಯ ಎಲ್ಲ ಸಂಪಾದಕ ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಿಎಸ್ಐ ಶಶಿಕಾಂತ್ ಪವಾರ್ ಸಲ್ಲಿಸಿದ ದೂರಿನ ಅನ್ವಯ ಪೊಲೀಸ್ ಕಾಯ್ದೆ 1922 ಹಾಗೂ ಐಪಿಸಿ ಸೆಕ್ಷನ್ 500ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.












Click it and Unblock the Notifications