ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸಿನ ಬಗ್ಗೆ ರಾಹುಲ್ ಗಾಂಧಿ ಮಾತು!
ದೆಹಲಿ, ಡಿಸೆಂಬರ್.05: ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ದೇಶಕ್ಕೆ ದೇಶವೇ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಬಿಜೆಪಿ ನಾಯಕರಿಗೆ ಇದ್ಯಾವುದರ ಅರಿವು ಆಗುತ್ತಿಲ್ಲ ಎಂದು ಕಾಂಗ್ರೆಸ್ ದೂರಿದೆ.
ಕಳೆದ ಏಳು ತ್ರೈಮಾಸಿಕದಲ್ಲೇ ಮೊದಲ ಬಾರಿಗೆ ಭಾರತದ ಆರ್ಥಿಕ ಪ್ರಗತಿ ಪಾತಾಳಕ್ಕೆ ಕುಸಿದಿದೆ. ದೇಶದಲ್ಲಿ ಉತ್ಪಾದನಾ ಪ್ರಮಾಣ ದಿನೇ ದಿನೆ ಕುಸಿಯುತ್ತಿದೆ. ಹೀಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಬೆಳವಣಿಗೆಗಳ ಬಗ್ಗೆ ಅರಿವಿಗೆ ಬರುತ್ತಿಲ್ಲವೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಕಳೆದ ನವೆಂಬರ್.29ರಂದು ಜುಲೈ-ಸೆಪ್ಟಂಬರ್ ತ್ರೈಮಾಸಿಕ ಅವಧಿಯ ಭಾರತದ ಜಿಡಿಪಿಯನ್ನು ಪ್ರಕಟಿಸಲಾಯಿತು. ಈ ವೇಳೆ ಏಳು ತ್ರೈಮಾಸಿಕ ಅವಧಿಯಲ್ಲೇ ಮೊದಲ ಬಾರಿಗೆ ಪ್ರಗತಿ ದರವು ಶೇ.4.5ಕ್ಕೆ ಕುಸಿದಿರುವುದು ತಿಳಿದು ಬಂದಿದೆ. ಈ ಹಿಂದೆ 2012-13ನೇ ಸಾಲಿನಲ್ಲಿ ಜಿಡಿಪಿ ದರ ಶೇ.4.3ಕ್ಕೆ ಕುಸಿದಿದ್ದೇ ಅತಿದೊಡ್ಡ ಕುಸಿತ ಎನ್ನಲಾಗಿತ್ತು. ಅದಾದ ನಂತರ ಈಗ ಮತ್ತೆ ದೇಶದ ಆರ್ಥಿಕ ಪ್ರಗತಿಯಲ್ಲಿ ಭಾರಿ ಕುಸಿತ ಕಂಡು ಬಂದಿತ್ತು.

ಪ್ರಧಾನಿ ಕನಸಿನ ಬಗ್ಗೆ ರಾಹುಲ್ ಗಾಂಧಿ ಮಾತು
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುತ್ತಿದ್ದರೂ ಸರ್ಕಾರ ನಡೆಸುವ ನಾಯಕರಿಗೆ ಅದರ ಅರಿವು ಆಗುತ್ತಿಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮದೇ ಆದ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದಾರೆ. ಕನಸು ಕಾಣುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ದೂಷಿಸಿದರು.

ಉಭಯ ನಾಯಕರು ಹೊರ ಪ್ರಪಂಚದ ನಂಟನ್ನೇ ಕಳೆದುಕೊಂಡು ಬಿಟ್ಟಿದ್ದಾರೆ. ತಮ್ಮ ಪ್ರಪಂಚದಲ್ಲೇ ತಾವು ಕನಸು ಕಾಣುತ್ತಾ ಹಾಯಾಗಿದ್ದಾರೆ. ಇದರಿಂದ ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಗಳಿಗೆ ಅರ್ಥವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.












Click it and Unblock the Notifications