ಮಾದಕದ್ರವ್ಯ ಸಮಸ್ಯೆ ರಾಜ್ಯಸಭೆಯಲ್ಲಿ ರಾಜೀವ್ ಚಂದ್ರಶೇಖರ್ ಪ್ರಸ್ತಾವ
ನವದೆಹಲಿ, ಜುಲೈ 19: ಬೆಂಗಳೂರಿನ ಮಕ್ಕಳ ಪಾಲಿಗೆ ದೊಡ್ಡ ಆತಂಕವಾಗಿ ಪರಿಣಮಿಸುತ್ತಿರುವ ಮಾದಕದ್ರವ್ಯದ ಸಮಸ್ಯೆ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಗುರುವಾರ ಶೂನ್ಯವೇಳೆಯಲ್ಲಿ ಪ್ರಸ್ತಾವ ಮಾಡಿದರು.
ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆಯಾದ ಮಾದಕದ್ರವ್ಯ ಜಾಲದ ಬಗ್ಗೆ ಮತ್ತಷ್ಟು ಗಮನ ಸೆಳೆಯುತ್ತಿದ್ದೇನೆ. ಬೆಂಗಳೂರನ್ನು ದಕ್ಷಿಣ ಭಾರತದ ಮಾದಕದ್ರವ್ಯ ರಾಜಧಾನಿ ಅಂತಲೇ ಕರೆಯಲಾಗುತ್ತದೆ. ಈ ಸಮಸ್ಯೆ ತಡೆಯಲು ಗೂಂಡಾ ಕಾಯ್ದೆ ಹಾಕುವ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಮೊಬೈಲ್ ಗಿಫ್ಟ್ ವಾಪಸ್ ಕೊಟ್ಟ ಸಂಸದ ರಾಜೀವ್
ಇಂದಿರಾಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಮತ್ತು ನಿಮ್ಹಾನ್ಸ್ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಇತ್ತೀಚೆಗೆ ಅಲ್ಲಿಗೆ ಬರುತ್ತಿರುವ ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ವ್ಯಸನದ ಬಗ್ಗೆ ತಿಳಿಸಲಾಗಿದೆ. ನಾರ್ಕೋಟಿಕ್ಸ್ ಕ್ರೈಂ ಬ್ಯುರೋ (ಎನ್ ಸಿಬಿ) ನೀಡಿದ ಮಾಹಿತಿಯಲ್ಲಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮಾದಕವಸ್ತುಗಳ ವ್ಯಸನದ ಬಗ್ಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದರು.
ಎನ್ ಸಿಬಿಯ ಬೆಂಗಳೂರು ವಲಯದಿಂದ ಬಸ್ ನಿಲ್ದಾಣವೊಂದರಲ್ಲಿ 36.6 ಕೇಜಿ ಮರಿಜುವಾನ, ಮತ್ತೊಂದು ಬಸ್ ನಿಲ್ದಾಣದಲ್ಲಿ 28.060 ಕೇಜಿಯಷ್ಟು ವಶಪಡಿಸಿಕೊಳ್ಳಲಾಗಿದೆ. ಇದು ಬೆಂಗಳೂರಿನಲ್ಲಿ ಇತ್ತೀಚೆಗೆ ದಾಖಲಾದ ಪ್ರಕರಣಗಳಷ್ಟೇ. ಎನ್ ಸಿಬಿ ಅಧಿಕಾರಿಗಳ ಪ್ರಕಾರ, ಯುವಜನರಲ್ಲೇ ಮಾದಕ ವ್ಯಸನ ಹೆಚ್ಚು. ಅಂಥ ವಸ್ತುಗಳನ್ನು ಮಾರುವವರಿಗೆ ಯುವಜನರೇ ಬಲಿ ಎಂದು ಹೇಳಿದ್ದಾರೆ.
ಮಾದಕವಸ್ತು ಮಾರಾಟ ಜಾಲ ಬರೀ ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ಇತರ ನಗರಗಳಿಗೂ ಹಬ್ಬಿದೆ. ಅಷ್ಟೇ ಅಲ್ಲ, ದಕ್ಷಿಣ ಭಾರತದ ಇತರ ನಗರಗಳಿಗೂ ಪಸರಿಸಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ, ಒಂದಿಡೀ ತಲೆಮಾರಿನ ಮಕ್ಕಳು ವ್ಯಸನಿಗಳಾಗುವ ಮುಂಚೆ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.
ಇದರ ವಿರುದ್ಧ ರಾಷ್ಟ್ರಮಟ್ಟದ ಅಭಿಯಾನ ಆಗಬೇಕಿದೆ. ಅದರಲ್ಲಿ ಮಾದಕ ವಸ್ತು ಉತ್ಪಾದಿಸುವವರು, ಮಾರಾಟಗಾರರು, ತೆಗೆದುಕೊಳ್ಳುವವರು ಎಲ್ಲರಿಗೂ ಕಠಿಣ ಶಿಕ್ಷೆ ಆಗುವಂಥ ಕಾನೂನು ರೂಪಿಸಬೇಕು ಎಂದು ಕೇಂದ್ರ ಸರಕಾರದಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.