ಮನಿ ಲಾಂಡ್ರಿಂಗ್: EDಯಿಂದ ವಿಚಾರಣೆಗೆ ಹಾಜರಾದ ಅಭಿಷೇಕ್ ಬ್ಯಾನರ್ಜಿ
ನವದೆಹಲಿ, ಮಾರ್ಚ್ 21: ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ, ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಮತ್ತೊಮ್ಮೆ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಿದ್ದಾರೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದ ಅಭಿಷೇಕ್ ಸೋಮವಾರದಂದು ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದಾರೆ.
ತಮ್ಮ ಮತ್ತು ಅವರ ಪತ್ನಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಬಿಜೆಪಿ ತನ್ನ ಎಲ್ಲಾ ಶಕ್ತಿಗಳ ಹೊರತಾಗಿಯೂ ಚುನಾವಣಾ ಮತ್ತು ಪ್ರಜಾಸತ್ತಾತ್ಮಕವಾಗಿ ಟಿಎಂಸಿಯನ್ನುಸೋಲಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ನಮ್ಮ ವಿರುದ್ಧ ಏಜೆನ್ಸಿಗಳನ್ನು ಬಳಸುತ್ತಿದೆ" ಎಂದು ಹೇಳಿದರು.
ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ಇಬ್ಬರೂ ಮಾರ್ಚ್ 21 ಮತ್ತು 22 ರಂದು ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ಎದುರಿಸಲಿದ್ದಾರೆ.
ಬ್ಯಾನರ್ಜಿ ಮತ್ತು ಅವರ ಪತ್ನಿ ಈ ಹಿಂದೆ ದೆಹಲಿಗೆ ಇಡಿ ಸಮನ್ಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು, ಇಬ್ಬರೂ ಪಶ್ಚಿಮ ಬಂಗಾಳದ ನಿವಾಸಿಗಳಾಗಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಅವರ ಮುಂದೆ ಹಾಜರಾಗಲು ಸಂಸ್ಥೆಯು ಅವರನ್ನು ಕರೆಯಬಾರದು ಎಂದು ಹೇಳಿದ್ದಾರೆ. ಮಾರ್ಚ್ 11 ರಂದು ದೆಹಲಿ ಹೈಕೋರ್ಟ್ ಅವರ ಮನವಿಯನ್ನು ವಜಾಗೊಳಿಸಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಇಡಿ ಅಧಿಕಾರಿಗಳು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಅಭಿಷೇಕ್ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ್ದರು. ರಾಜ್ಯದ ಅಸನ್ಸೋಲ್ ಸುತ್ತಮುತ್ತ ಕುನುಸ್ಟೋರಿಯಾ ಮತ್ತು ಕಜೋರಾ ಪ್ರದೇಶಗಳಲ್ಲಿನ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದಂತೆ ಬಹುಕೋಟಿ ಕಲ್ಲಿದ್ದಲು ಕಳ್ಳತನವಾಗಿದೆ ಎಂದು ಆರೋಪಿಸಿ ಸಿಬಿಐ ದಾಖಲಿಸಿದ ನವೆಂಬರ್ 2020 ರ ಎಫ್ಐಆರ್ ಆಧರಿಸಿ ಹಣ ವರ್ಗಾವಣೆ ತಡೆ ಕಾಯ್ದೆ, 2002 ರ ನಿಬಂಧನೆಗಳ ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿದೆ.
ಸ್ಥಳೀಯ ಕಲ್ಲಿದ್ದಲು ನಿರ್ವಾಹಕ ಅನುಪ್ ಮಾಝಿ ಅಲಿಯಾಸ್ ಲಾಲಾ ಪ್ರಕರಣದ ಪ್ರಮುಖ ಶಂಕಿತ ಎಂದು ಆರೋಪಿಸಲಾಗಿದೆ. ಟಿಎಂಸಿ ಸಂಸದರು ಈ ಅಕ್ರಮ ವಹಿವಾಟಿನಿಂದ ಪಡೆದ ಹಣದ ಫಲಾನುಭವಿ ಎಂದು ಇಡಿ ಹೇಳಿದೆ. ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿ ಗಣೇಶ್ ಬಗಾಡಿಯಾ ಮತ್ತು ಹಗರಣದ ಪ್ರಮುಖ ಆರೋಪಿ ಆಗಿರುವ ಅನುಪ್ ಮಾಜಿ ಅಲಿಯಾಸ್ ಲಾಲಾ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ಬಿಡುಗಡೆಯಾಗಿದೆ. ಈ ಆಡಿಯೋ ಸಂಭಾಷಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿಗೆ ಹಣ ಹೇಗೆ ಸೇರುತ್ತಿತ್ತು ಎಂಬುದರ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರಿಗೆ ಆರಂಭದಲ್ಲಿ 15 ರಿಂದ 20 ಕೋಟಿ ರೂಪಾಯಿ ಕಳುಹಿಸಿ ಕೊಡಲಾಗುತ್ತಿತ್ತು. ಎರಡರಿಂದ ಮೂರು ವರ್ಷಗಳ ನಂತರ ಪ್ರತಿ ತಿಂಗಳು 15 ರಿಂದ 20 ಕೋಟಿ ರೂಪಾಯಿ ಹಣವನ್ನು ನೀಡಲಾಗುತ್ತಿತ್ತು ಎಂಬ ಬಗ್ಗೆ ಸರ್ಕಾರಿ ಅಧಿಕಾರಿ ಗಣೇಶ್ ಬಗಾಡಿಯಾ ಮತ್ತು ಅನುಪ್ ಮಾಜಿ ಚರ್ಚಿಸಿದ್ದಾರೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಆಡಿಯೋ ಸಂಭಾಷಣೆ ಬಿಡುಗಡೆ ಆಗುತ್ತಿದ್ದಂತೆ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಟಿಎಂಸಿ ವಿರುದ್ಧ ಬಿಜೆಪಿ ನಾಯಕರು ಮೇಲಿಂದ ಮೇಲೆ ಮುಗಿಬೀಳುತ್ತಿದ್ದರು. ಸಿಎಂ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಜೊತೆಗೆ ಅಪ್ತರಾಗಿ ಗುರುತಿಸಿಕೊಂಡಿರುವ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಕಾನೂನು ಅಡಿ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆಗ್ರಹಿಸಿದ್ದರು.
ಕಲ್ಲಿದ್ದಲ್ಲು ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪತ್ನಿ ರುಜಿರಾ ಬ್ಯಾನರ್ಜಿ, ರುಜಿರಾ ಬ್ಯಾನರ್ಜಿಯ ಸಹೋದರಿ ಹಾಗೂ ತಾಯಿಯನ್ನು ಕೂಡಾ ವಿಚಾರಣೆಗೆ ಒಳಪಡಿಸಲಾಗಿತ್ತು.
ಕೋಲ್ಕತ್ತಾದಿಂದ ದೆಹಲಿಗೆ ಹೊರಡುವಾಗ, ಬ್ಯಾನರ್ಜಿ, "ನಾನು ಜನರ ಶಕ್ತಿಯ ಮುಂದೆ ತಲೆಬಾಗಲು ಸಿದ್ಧನಿದ್ದೇನೆ ಆದರೆ ಅಧಿಕಾರದಲ್ಲಿರುವ ಜನರ ಮುಂದೆ ಅಲ್ಲ. ನಾನು ನೋಟಿಸ್ ಅನ್ನು ಭೌತಿಕವಾಗಿ ಸ್ವೀಕರಿಸಲಿಲ್ಲ, ಆದರೆ ಮೌಖಿಕವಾಗಿ ಕರೆದಿದ್ದೇನೆ." ಎಂದಿದ್ದರು.