Breaking: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಬಂಧನ
ನವದೆಹಲಿ, ಮೇ 30: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಮತ್ತೊಬ್ಬ ಸಚಿವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಸೋಮವಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
Breaking; ಆರೋಗ್ಯ ಸಚಿವರನ್ನು ವಜಾಗೊಳಿಸಿದ ಪಂಜಾಬ್ ಸಿಎಂ!
ಕಳೆದ 2015-16ನೇ ಸಾಲಿನಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ.
ಹವಾಲಾ ವ್ಯವಸ್ಥೆ ಎಂದರೆ ಇಬ್ಬರು ವ್ಯಕ್ತಿಗಳ ನಡುವೆ ಹಣದ ವಹಿವಾಟು ಬ್ಯಾಂಕ್ ಮೂಲಕ ನಡೆಯುವುದಿಲ್ಲ. ಅದರ ಬದಲಿಗೆ ಮಧ್ಯವರ್ತಿ ಏಜೆಂಟ್ ಮೂಲಕ ಹಣವನ್ನು ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.
4.81 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು; ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಅವರ ಕುಟುಂಬದ ಒಡೆತನದಲ್ಲಿ ಇರುವ ಒಟ್ಟು 4.81 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಸುಮಾರು ಎರಡು ತಿಂಗಳ ನಂತರದಲ್ಲಿ ಈ ಬಂಧನವನ್ನು ಮಾಡಲಾಗಿದೆ.
ಕೇಜ್ರಿವಾಲ್ ಹೇಳಿಕೆ; ಈ ವರ್ಷದ ಜನವರಿಯಲ್ಲಿ ನಡೆದ ಮೆರವಣಿಗೆಯೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ತಮ್ಮ ಸಹೋದ್ಯೋಗಿ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ ಎಂದಿದ್ದರು.
"ನಮ್ಮ ಮೂಲಗಳ ಪ್ರಕಾರ, ಪಂಜಾಬ್ ಚುನಾವಣೆಗೆ ಮುಂಚೆಯೇ, ಮುಂಬರುವ ಕೆಲವೇ ದಿನಗಳಲ್ಲಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಿದೆ ಎಂದು ನಮಗೆ ತಿಳಿದಿದೆ. ಅವರಿಗೆ ಸ್ವಾಗತವಿದೆ. ಈ ಹಿಂದೆಯೂ, ಕೇಂದ್ರವು ಸತ್ಯೇಂದ್ರ ಜೈನ್ ಮೇಲೆ ದಾಳಿ ನಡೆಸಿತ್ತು, ಆದರೆ ಏನೂ ಸಿಕ್ಕಿರಲಿಲ್ಲ," ಎಂದು ಕೇಜ್ರಿವಾಲ್ ತಿಳಿಸಿದ್ದರು.