ಅಪಘಾತದತ್ತ ಸಾಗುತ್ತಿದೆ ಮೋದಿಯ 'ಮಾಂತ್ರಿಕ ರೈಲು': ರಾಹುಲ್
ನವದೆಹಲಿ, ಆಗಸ್ಟ್ 7: ನರೇಂದ್ರ ಮೋದಿ ನೇತೃತ್ವದ ಸರ್ಕಾರದಡಿ ಭ್ರಷ್ಟಾಚಾರ, ಆರ್ಥಿಕ ವೈಫಲ್ಯ, ಅದಕ್ಷತೆ ಮತ್ತು ಸಾಮಾಜಿಕ ವಿಭಜನೆ ಗರಿಷ್ಠಮಟ್ಟಕ್ಕೆ ತಲುಪಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ಭವನದಲ್ಲಿ ಮಂಗಳವಾರ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದ ಆಡಳಿತದ ವಿರುದ್ಧ ಆಕ್ರೋಶ ಮಡುಗಟ್ಟಿದ್ದು, ಮೋದಿ ಅವರ ಬೋಗಸ್ ಭರವಸೆ 'ಅಚ್ಛೇ ದಿನ್'ಗೆ ಪರ್ಯಾಯವಾಗಿ ಜನರಿಗೆ ನೀಡಲು ಪಕ್ಷದ ಸಂಸದರು ಕಠಿಣ ಶ್ರಮಪಡಬೇಕು ಎಂದು ಸೂಚನೆ ನೀಡಿದ್ದಾರೆ.
ಮೋದಿ ಸರ್ಕಾರವನ್ನು ಕಿತ್ತೊಗೆಯಲು ಸಹಾಯಕ್ಕಾಗಿ ಭಾರತದ ಜನರು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳತ್ತ ನೋಡುತ್ತಿದ್ದಾರೆ. ಅದರ ಜಾಗದಲ್ಲಿ ತಮ್ಮ ಮಾತನ್ನು ಕೇಳುವ, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಬಡತನ, ನಿರುದ್ಯೋಗ ಹಾಗೂ ಅಸಮಾನತೆಯನ್ನು ತಗ್ಗಿಸಲು ಪರಿಹಾರಗಳನ್ನು ಒದಗಿಸಲು ನೆರವು ಬಯಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ನಮ್ಮೆದುರು ಬೃಹತ್ ಜವಾಬ್ದಾರಿ
ಇಂದು ನಮ್ಮೆಲ್ಲರ ಎದುರು ಬೃಹತ್ ಜವಾಬ್ದಾರಿಯನ್ನು ಇರಿಸಲಾಗಿದೆ. ನಿರಂಕುಶಾಧಿಕಾರ ಮತ್ತು ಸಾಮಾಜಿಕ ಶ್ರೇಣಿಯ ಹಾಗೂ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಬಲಗಳ ನಡುವಣದ ಈ ಐತಿಹಾಸಿಕ ಸಂಘರ್ಷವನ್ನು ಗೆಲ್ಲುವ ಹೊಣೆಗಾರಿಕೆ ಇದೆ.
ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ದ್ವೇಷ, ವಿಭಜನೆ ಮತ್ತು ಹಿಂಸಾತ್ಮಕ ಶಕ್ತಿಗಳನ್ನು ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಲು ನಾವು ಪ್ರಯತ್ನಿಸಬೇಕು ಎಂದರು.

ಬಿಕ್ಕಟ್ಟಿಗೆ ಸಿಲುಕಿರುವ ಭಾರತ
'ನರೇಂದ್ರ ಮೋದಿ ಸರ್ಕಾರದ ಆಡಳಿತದ ಅಡಿಯಲ್ಲಿ ಭಾರತವು ಬಿಕ್ಕಟ್ಟಿನಲ್ಲಿ ಸಿಲುಕಿರುವ ಸಂದರ್ಭದಲ್ಲಿ ನಾವು ಸಭೆ ನಡೆಸುತ್ತಿದ್ದೇವೆ. ಭ್ರಷ್ಟಾಚಾರ, ಸಂಪೂರ್ಣ ಆರ್ಥಿಕ ವೈಫಲ್ಯ, ಅದಕ್ಷತೆ ಹಾಗೂ ಸಾಮಾಜಿಕ ವಿಭಜನೆಯನ್ನು ಹರಡುವ ಚಟುವಟಿಕೆಗಳು ತೀವ್ರ ಮಟ್ಟದಲ್ಲಿದೆ.
ಈಗಿನ ಆಡಳಿತದ ದುರವಸ್ಥೆ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಅವರಿಗೆ ಅರ್ಹವಾಗಿರುವ ಪರ್ಯಾಯ ಆಡಳಿತವನ್ನು ನೀಡಲು ನಾವೆಲ್ಲರೂ ಕಠಿಣ ಪರಿಶ್ರಮದಲ್ಲಿ ತೊಡಗಿಸಿಕೊಳ್ಳಬೇಕಿದೆ. ಮೋದಿಜಿ ಅವರು ನೀಡಿದ 'ಅಚ್ಛೇದಿನ್' ಸುಳ್ಳು ಭರವಸೆಗೆ ಪರ್ಯಾಯ ಬೇಕಿದೆ.
|
ಭರವಸೆ ತುಂಬುವ ಕೆಲಸ ಮಾಡಿ
ಭಾರತದ ರೈತರು ಮತ್ತು ಯುವಜನರ ಕಣ್ಣುಗಳಲ್ಲಿ ಭರವಸೆಯನ್ನು ಮರಳಿ ತುಂಬುವ ಕೆಲಸವನ್ನು ಪಕ್ಷದ ಸದಸ್ಯರು ಮಾಡಬೇಕು. ಮನೆಯ ಸಾಲ, ಅಗತ್ಯ ವಸ್ತುಗಳ ಬೆಲೆ ಏರಿಕೆಗಳ ಭಾರತದಿಂದ ತತ್ತರಿಸಿರುವ ಸಾಮಾನ್ಯ ಕುಟುಂಬಗಳಿಗೆ ನಿರಾಳತೆ ನೀಡಬೇಕು ಮತ್ತು ಮಹಿಳೆಯರು, ದಲಿತರಿಗೆ ಭದ್ರತೆ, ರಕ್ಷಣೆ ಹಾಗೂ ನ್ಯಾಯ ದೊರಕಿಸಿಕೊಡುವುದನ್ನು ಖಚಿಪಡಿಸಬೇಕು.

ಪ್ಯಾಸೆಂಜರ್ ಟ್ರೈನ್-ಮ್ಯಾಜಿಕಲ್ ಟ್ರೈನ್
ಸ್ವಾತಂತ್ರ್ಯ ಬಂದ 70 ವರ್ಷಗಳಿಂದ ಭಾರತವು ನಿಧಾನಗತಿಯ ಪ್ಯಾಸೆಂಜರ್ ಟ್ರೈನ್ ಆಗಿತ್ತು. ಇನ್ನು ಅದು ತಮ್ಮ ಆಡಳಿತ ಹಾಗೂ ಮಾರ್ಗದರ್ಶನದಲ್ಲಿ 'ಅಚ್ಛೇ ದಿನ್'ನತ್ತ ಸಾಗುವ ನವ ಹೊಳಪಿನ ಮತ್ತು ಸುಂದರ
'ಮಾಂತ್ರಿಕ ರೈಲು' ಆಗಲಿದೆ ಎಂಬ ಮೋದಿ ಅವರ ಹೇಳಿಕೆಯನ್ನು ರಾಹುಲ್ ನೆನಪಿಸಿಕೊಂಡರು.
'ನಿಮ್ಮ ಮತಗಳನ್ನು ನನಗೆ ಕೊಡಿ. ನಿಮ್ಮ ಬದುಕಿನ ಅತ್ಯುತ್ತಮ ಮತ್ತು ಅತಿ ಹಿತಕರ ಪ್ರಯಾಣವನ್ನು ಮಾಡಿಸುತ್ತೇನೆ' ಎಂದು ಮೋದಿಜಿ ಹೇಳಿದ್ದರು. ನಾಲ್ಕು ವರ್ಷಗಳ ಮೋದಿ ಆಡಳಿತವನ್ನು ಗಮನಿಸಿದಾಗ ಭಾರತವು, ತಾನು ಜವಾಬ್ದಾರಿಯಾದ ಪ್ರಯಾಣಿಕರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಒಬ್ಬ ನಿರಂಕುಶ, ಅದಕ್ಷ ಹಾಗೂ ದರ್ಪದ ಚಾಲಕನಿಂದ ದುರಂತದೆಡೆಗೆ ಸಾಗುತ್ತಿರುವ ರೈಲಿನಂತೆ ಕಾಣಿಸುತ್ತಿದೆ.
ಭಾರತದ ಜನರು ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ. ಕೆಟ್ಟ ಅಪಘಾತದೆಡೆಗೆ ಸಾಗುತ್ತಿರುವ ಪ್ರಧಾನಿ ಮೋದಿ ಅವರ ಮಾಂತ್ರಿಕ ರೈಲಿನಿಂದ ಅವರು ಮತ್ತೆ ಮೂರ್ಖರಾಗುವುದಿಲ್ಲ.

ಆರ್ಎಸ್ಎಸ್, ಬಿಜೆಪಿ ಆಕ್ರಮಣ
ದೇಶದ ನಿರ್ಮಾಣದಲ್ಲಿ ಕಾಂಗ್ರೆಸ್ ನೆರವು ನೀಡಿದೆ. ಜನರ ಧ್ವನಿಯಾಗಿ ಬೆಳೆದ ಸಂಸ್ಥೆಗಳನ್ನು ಸ್ಥಾಪಿಸಿದೆ. ಆರ್ಎಸ್ಎಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಪ್ರತಿಯೊಂದು ಸಂಸ್ಥೆಯ ಮೇಲೆಯೂ ವ್ಯವಸ್ಥಿತ ದಾಳಿಗಳು ನಡೆದಿರುವುದನ್ನು ನಾವು ನೋಡಿದ್ದೇವೆ.
ಆಧುನಿಕ ಭಾರತದಲ್ಲಿ ಈ ಸಂಸ್ಥೆಗಳನ್ನು ಪ್ರಜಾಪ್ರಭುತ್ವದ ದೇವಸ್ಥಾನಗಳೆಂದು ಕರೆಯಲಾಗುತ್ತಿತ್ತು. ಇಂದು ಆರೆಸ್ಸೆಸ್ ಪ್ರತಿಯೊಂದನ್ನೂ ನಾಶಪಡಿಸುವ ಉದ್ದೇಶ ಹೊಂದಿದೆ. ಪ್ರತಿ ಸಂಸ್ಥೆಯಲ್ಲಿಯೂ ಅವರ ಜನರೇ ಆಕ್ರಮಿಸಿಕೊಂಡಿದ್ದಾರೆ ಮತ್ತು ಅವುಗಳ ಸ್ವರೂಪವನ್ನೇ ಬದಲಾಯಿಸಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದರು.












Click it and Unblock the Notifications