ಮೋದಿ ಹೇಳಿದ್ದು ಸರಿ: ಹೇಳಿಕೆ ಬದಲಿಸಿದ ಅಮಿತ್ ಶಾ
ನವದೆಹಲಿ, ಡಿಸೆಂಬರ್ 25: ಎನ್ಆರ್ಸಿ ಕುರಿತು ಬಿಜೆಪಿ ನಾಯಕರಲ್ಲೇ ಗೊಂದಲ ಇರುವುದು ಮೋದಿ-ಅಮಿತ್ ಶಾ ಭಿನ್ನ ಹೇಳಿಕೆಗಳಿಂದ ಸ್ಪಷ್ಟವಾಗಿತ್ತು. ಆದರೆ ಈ ಗೊಂದಕ್ಕೆ ಬ್ರೇಕ್ ಹಾಕಲು ಅಮಿತ್ ಶಾ ಮುಂದಾಗಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ್ದ ಮೋದಿ, 'ನಾನು ಆಡಳಿತಕ್ಕೆ ಬಂದಾಗಿನಿಂದಲೂ ಪೂರ್ತಿ ದೇಶದಲ್ಲಿ ಎನ್ಆರ್ಸಿ ಜಾರಿ ಮಾಡುವ ಬಗ್ಗೆ ಮಾತೇ ಆಡಿರಲಿಲ್ಲ, ಸುಪ್ರೀಂಕೋರ್ಟ್ ಆದೇಶದ ಬಳಿಕವಷ್ಟೆ ಅಸ್ಸಾಂ ನಲ್ಲಿ ಎನ್ಆರ್ಸಿ ಮಾಡಲಾಯಿತು' ಎಂದಿದ್ದರು.
ಆದರೆ ಅದಕ್ಕೆ ಮುನ್ನವೇ ಅಮಿತ್ ಶಾ ಅವರು 'ಸಂಸತ್ ನಲ್ಲಿಯೇ ದೇಶದೆಲ್ಲೆಡೆ ಎನ್ಆರ್ಸಿ ಜಾರಿ ಮಾಡಲಾಗುತ್ತದೆ' ಎಂದಿದ್ದರು. ಅಲ್ಲದೆ ಈ ಹಿಂದೆ ಪಶ್ಚಿಮ ಬಂಗಾಳದಲ್ಲೂ ಇದೇ ಮಾತು ಉಚ್ಛರಿಸಿ, 'ಮೊದಲು ಸಿಎಎ ಬರುತ್ತದೆ, ನಂತರ ಎನ್ಆರ್ಸಿ ಬರುತ್ತದೆ, ಅದು ಕೇವಲ ಪಶ್ಚಿಮ ಬಂಗಾಳಕ್ಕಲ್ಲ ಪೂರ್ತಿ ದೇಶಕ್ಕೆ ಎನ್ಆರ್ಸಿ ಬರುತ್ತದೆ, ಅಕ್ರಮ ವಲಸಿಗರನ್ನು ನಾವು ದೇಶದಿಂದ ಹೊರಕ್ಕೆ ಹಾಕುತ್ತೇವೆ' ಎಂದಿದ್ದರು.
ಆದರೆ ಮೋದಿ ಅವರ ಭಾಷಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅಮಿತ್ ಶಾ, 'ಮೋದಿ ಹೇಳಿದ್ದು ಸರಿ ನಾವು ಎನ್ಆರ್ಸಿ ಯನ್ನು ದೇಶದೆಲ್ಲೆಡೆ ಜಾರಿಗೊಳಿಸುವ ಬಗ್ಗೆ ಮಾತುಕತೆ ಆಡಿಯೇ ಇಲ್ಲ' ಎಂದಿದ್ದಾರೆ. ಮೋದಿ ಅವರ ಮಾತು ಸರಿ ಮಾಡಲು, ತಮ್ಮದೇ ಹೇಳಿಕೆಯಿಂದ ಅಮಿತ್ ಶಾ ಹಿಂದೆ ಸರಿದಿದ್ದಾರೆ.
ಎನ್ಸಿಆರ್ ಮತ್ತು ಎನ್ಪಿಆರ್ ನಡುವಿನ ಸಂಬಂಧದ ಕುರಿತು ಸಹ ಮಾತನಾಡಿರುವ ಅಮಿತ್ ಶಾ, 'ಎನ್ಸಿಆರ್ ಮತ್ತು ಎನ್ಪಿಆರ್ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ನಾನು ಖಚಿತವಾಗಿ ಹೇಳುತ್ತಿದ್ದೇನೆ' ಎಂದರು.
ನಿನ್ನೆಯಷ್ಟೆ ಎನ್ಪಿಆರ್ ಮಾಡಲು ಕೇಂದ್ರ ಸಂಪುಟ ಸಭೆಯು ಒಪ್ಪಿಗೆ ನೀಡಿ, 3941 ಕೋಟಿ ಹಣವನ್ನೂ ಬಿಡುಗಡೆ ಮಾಡಿದೆ.