ಬಾಲಕೋಟ್ ದಾಳಿ ಪ್ರಶ್ನಿಸಿದ್ದು ನಾವಲ್ಲ ಮೋದಿ : ಕಾಂಗ್ರೆಸ್ ತಿರುಗೇಟು
ನವದೆಹಲಿ, ಮಾರ್ಚ್ 04 : ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆಸಿರುವ ಬಗ್ಗೆ ಕೇಂದ್ರ ಸರಕಾರ ಸಾಕ್ಷ್ಯ ನೀಡಬೇಕು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನೀಡಿದ್ದ ಹೇಳಿಕೆಯಿಂದ ದೂರವುಳಿಯಲು ನಿರ್ಧರಿಸಿರುವ ಕಾಂಗ್ರೆಸ್, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಫೆಬ್ರವರಿ 26ರಂದು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿರುಗೇಟು ನೀಡಿದೆ.
ಏರ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡುತ್ತಿಲ್ಲ. ಆದರೆ, ಪ್ರಧಾನಿ ಮಂತ್ರಿ ಅವರೇ ಹೋದಲ್ಲೆಲ್ಲ, 'ನಮ್ಮ ಬಳಿ ರಾಫೇಲ್ ಯುದ್ಧ ವಿಮಾನಗಳಿದ್ದರೆ ಪರಿಣಾಮ ಇನ್ನೂ ವಿಭಿನ್ನವಾಗಿರುತ್ತಿತ್ತು' ಎಂದು ಹೇಳಿದ್ದಾರೆ. ಇದರರ್ಥವೇನು? ನಮ್ಮ ಬಳಿ ರಫೇಲ್ ಇಲ್ಲದಿದ್ದರೆ ಅದಕ್ಕೆ ಕಾರಣ. ಹಳೆಯ ಒಪ್ಪಂದವನ್ನು ನರೇಂದ್ರ ಮೋದಿಯವರು ಕ್ಯಾನ್ಸಲ್ ಮಾಡಿರದಿದ್ದರೆ ಇಷ್ಟೊತ್ತಿದೆ ನಮ್ಮ ಬಳಿ ರಫೇಲ್ ಯುದ್ಧ ವಿಮಾನಗಳಿರುತ್ತಿದ್ದವು ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಹೇಳಿದ್ದಾರೆ.
ವಾಗ್ದಾಳಿಯನ್ನು ಮುಂದುವರಿಸಿದ ಅವರು, ರಫೇಲ್ ಇದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದಿದ್ದಾರೆ ಮೋದಿ. ಏನು ಬೇರೆಯಾಗಿರುತ್ತಿತ್ತು ಮೋದಿಯವರೆ? ನಮ್ಮ ಮಿಗ್-21 ವಿಮಾನ ವಿರೋಧಿಗಳ ಎಫ್-16ನಂಥ ವಿಮಾನವನ್ನೇ ಹೊಡೆದುರುಳಿಸಿರುವುದು ನಿಜವಾದರೆ, ಏನು ವಿಭಿನ್ನವಾಗಿರಬೇಕೆಂದು ಇಚ್ಛಿಸುತ್ತಿದ್ದೀರಿ? ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನೆ ಮಾಡುತ್ತಿರುವವರು ಮೋದಿಯವರೇ ಹೊರತು ನಾವಲ್ಲ. ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ಕೇಂದ್ರ ಮಂತ್ರಿಮಂಡಲದಲ್ಲಿರುವ, ಮೋದಿಯವರ ಆಪ್ತರಾಗಿರುವ ಎಸ್ಎಸ್ ಅಹ್ಲುವಾಲಿಯಾ ಅವರು, ಏರ್ ಸ್ಟ್ರೈಕ್ ನಡೆಸಿದ್ದು ಪಾಕಿಸ್ತಾನವನ್ನು ಬೆದರಿಸಲೆಂದೇ ಹೊರತು ಭಯೋತ್ಪಾದಕರನ್ನು ಕೊಲ್ಲಲಿಕ್ಕಿಲ್ಲ ಎಂದು ಹೇಳಿಕೆ ನೀಡಿರುವ ಹಿಂದಿನ ಅರ್ಥವಾದರೂ ಏನು? ದೇಶದ ಭದ್ರತೆಯೊಡನೆ ಯಾರು ಆಟವಾಡುತ್ತಿದ್ದಾರೆ ಮತ್ತು ಯಾರು ಸೈನ್ಯದ ನೈತಿಕತೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ತಿವಾರಿ ಆಕ್ರೋಶ ವ್ಯಕ್ತಪಡಿಸಿದರು.
ಸಾಕ್ಷ್ಯಾ ಕೇಳಿದ್ದ ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ತಳ್ಳಿಹಾಕಿದ ಅವರು, ನಾವು ಭಾರತೀಯ ವಾಯು ಸೇನೆಯ ಮೇಲೆ ನಂಬಿಕೆ ಇದೆ. ನಾವು ಸಾಕ್ಷ್ಯವನ್ನು ಎಂದೂ ಕೇಳಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಮಂತ್ರಿ ಮಂಡಲದ ಸದಸ್ಯರೇ ಪ್ರಶ್ನಿಸುತ್ತಿರುವಾಗ, ಇದು ನಿಜವಾಗಿಯೂ ಕಳವಳಕಾರಿ ಸಂಗತಿ ಎಂದು ತಿವಾರಿ ನುಡಿದರು.












Click it and Unblock the Notifications