ದೆಹಲಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವಸುಂದರಿಯ ನುಡಿಮುತ್ತುಗಳು!
ನವದೆಹಲಿ, ನವೆಂಬರ್ 28: ನನ್ನ ದೇಶಕ್ಕೆ ಹೆಮ್ಮೆ ಪಡುವಂತೆ ಮಾಡುವುದಕ್ಕಿಂತ ಸಾರ್ಥಕ ಕ್ಷಣ ಬೇರೊಂದಿಲ್ಲ. ಅಂಥ ಕ್ಷಣ ನನಗೆ ಒದಗಿದ್ದು ನನ್ನ ಪುಣ್ಯ ಎಂದು ವಿಶ್ವಸುಂದರಿ ಮಾನುಷಿ ಚಿಲ್ಲರ್ ಹೆಮ್ಮೆಯಿಂದ ಹೇಳಿದರು.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ತಮ್ಮ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಎಲ್ಲ ಭಾರತೀಯರಿಗೂ ಧನ್ಯವಾದ ಅರ್ಪಿಸಿದರು.

"ಒಬ್ಬ ವೈದ್ಯ ಇರಬಹುದು, ಅಥವಾ ವಿಶ್ವಸುಂದರಿ ಇರಬಹುದು ಎಲ್ಲರ ಉದ್ದೇಶವೂ, 'ವಿಶ್ವವನ್ನು ಮತ್ತಷ್ಟು ಸುಧಾರಣೆಯತ್ತ ಕೊಂಡೊಯ್ಯುವುದೇ ಆಗಿದೆ" ಎಂದು ಅವರ ಇದೇ ಸಂದರ್ಭದಲ್ಲಿ ಹೇಳಿದರು.
ಭಾರತ ಬದಲಾಗುತ್ತಿದೆ. ಕೆಲವು ಮೌಢ್ಯ ಆಚರಣೆಗಳು ಈಗಾಗಲೇ ಮರೆಯಾಗಿವೆ ಎಂದು ನನಗೆ ಸಂತೋಷವಾಗುತ್ತಿದೆ. ನನ್ನ ದೇಶ ನನ್ನಿಂದ ಹೆಮ್ಮೆಪಡುವಂತೆ ಮಾಡುವುದಕ್ಕಿಂತ ಸಾರ್ಥಕ ಭಾವ ಬೇರೊಂದಿಲ್ಲ. ನನಗೆ ಅಂಥ ಅವಕಾಶ ಸಿಕ್ಕಿದ್ದು ಅದೃಷ್ಟ ಎಂದು 17 ವರ್ಷದ ನಂತರ ಭಾರತಕ್ಕೆ ಮತ್ತೊಮ್ಮೆ ವಿಶ್ವಸುಂದರಿ ಕಿರೀಟವನ್ನು ತಂದಿಟ್ಟ ಮಾನುಷಿ ಚಿಲ್ಲರ್ ಹೇಳಿದರು.
ತ್ರಿವಳಿ ತಲಾಕ್ ಬಗ್ಗೆ ಮಾತನಾಡಿದ ಅವರು, "ಮದುವೆ ಎಂಬುದು ವಿಶೇಷವಾದ ಸ್ನೇಹ. ಅದು ಇಬ್ಬರ ನಡುವೆ ಸಮಾನವಾಗಿ ಹಂಚಿಕೆಯಾಗಬೇಕು. ಸಂಬಂಧದಲ್ಲಿ ಒಂದೇ ವ್ಯಕ್ತಿಗೆ ಹೆಚ್ಚಿನ ಒಡದೆತನ ನೀಡುವುದಕ್ಕೆ ಸಾಧ್ಯವಿಲ್ಲ. ಮನೆಯಲ್ಲಿ ಒಬ್ಬ ಮಹಿಳೆಗೆ ಗೌರವ ನೀಡುವುದನ್ನು ಕಲಿತರೆ, ಸಮಾಜದಲ್ಲೂ ಮಹಿಳೆಗೆ ಗೌರವ ನೀಡುವುದು ಹೇಗೆಂಬುದು ತಿಳಿಯುತ್ತದೆ" ಎಂದರು.
ನವೆಂಬರ್ 18 ರಂದು ನಡೆದ ವಿಶ್ವ ಸುಂದರಿ ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ ಜಯಗಳಿಸಿ, 2000 ನೇ ಇಸವಿಯ(ಪ್ರಿಯಾಂಕಾ ಚೋಪ್ರಾ) ನಂತರ ಭಾರತಕ್ಕೆ ವಿಶ್ವಸುಂದರಿ ಪಟ್ಟ ದಕ್ಕಲಿಲ್ಲ ಎಂಬ ಕೊರತೆಯನ್ನು ನೀಗಿದರು.












Click it and Unblock the Notifications