ಲಖಿಂಪುರ ಖೇರಿ ಪ್ರಕರಣ: ಅಜಯ್ ಮಿಶ್ರಾ ಕ್ರಿಮಿನಲ್ ಎಂದ ರಾಹುಲ್
ನವದೆಹಲಿ ಡಿಸೆಂಬರ್ 16: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು "ಕ್ರಿಮಿನಲ್" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕರೆದಿದ್ದಾರೆ.
ಇಂದು ಲೋಕಸಭೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಅವರನ್ನು "ಕ್ರಿಮಿನಲ್" ಎಂದು ಕರೆದಿದ್ದಾರೆ ಮತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. "ಸಚಿವರು ರಾಜೀನಾಮೆ ನೀಡಬೇಕು. ಅವರು ಕ್ರಿಮಿನಲ್" ಎಂದು ರಾಹುಲ್ ಗಾಂಧಿಯವರ ಹೇಳಿಕೆ ಲೋಕಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು. ಹೀಗಾಗಿ ಸದನವನ್ನು 2 ಗಂಟೆಗೆ ಮುಂದೂಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡ ರಾಹುಲ್ ಗಾಂಧಿ, ಮೋದಿ ಅಜಯ್ ಮಿಶ್ರಾ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ನಾವು ಸಂಸತ್ತಿನಲ್ಲಿ ಚರ್ಚಿಸಲು ನಾವು ಬಯಸುತ್ತೇವೆ. ಆದರೆ ಪ್ರಧಾನಿ ಅದನ್ನು ನಿರಾಕರಿಸುತ್ತಿದ್ದಾರೆ. ಅವರು ಇದಕ್ಕೆ ಸಮರ್ಥನೆಗಳನ್ನು ನೀಡುತ್ತಿದ್ದಾರೆ," ಎಂದು ಅವರು ಸಂಸತ್ತಿನ ಒಳಗೆ ಸುದ್ದಿಗಾರರಿಗೆ ರಾಹುಲ್ ಗಾಂಧಿ ತಿಳಿಸಿದರು.

ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ವರದಿಯಲ್ಲಿ ಲಖೀಂಪುರ ಖೇರಿ ಹಿಂಸಾಚಾರದ ಘಟನೆಯು "ಯೋಜಿತ ಪಿತೂರಿ" ಮತ್ತು ಹಿಂದೆ ಹೇಳಿಕೊಂಡಂತೆ ಕ್ರಿಮಿನಲ್ಗಳಿಂದಾದ ಘಟನೆಯಲ್ಲ ಎಂದು ಹೇಳಿದೆ. ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಒಬ್ಬ ಆರೋಪಿ; ಅವರು ಬೆಂಗಾವಲು ಪಡೆಯಲ್ಲಿ ವಾಹನವೊಂದರಲ್ಲಿದ್ದರು. ರೈತರ ಸಾವು 'ಯೋಜಿತ ಪಿತೂರಿ'ಯ ಭಾಗವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸರು ಅಕ್ಟೋಬರ್ನಿಂದ ಜೈಲಿನಲ್ಲಿರುವ ಆಶಿಶ್ ಮಿಶ್ರಾ ವಿರುದ್ಧ "ನಿರ್ಲಕ್ಷ್ಯದಿಂದ ಸಾವು" ಬದಲಿಗೆ "ಕೊಲೆ ಮಾಡುವ ಉದ್ದೇಶ" ಎಂಬ ಹೊಸ ಆರೋಪಗಳನ್ನು ಮಾಡಿದ್ದಾರೆ. ಆಶಿಶ್ ಮಿಶ್ರಾ ಸೇರಿದಂತೆ ಆರೋಪಿಗಳ ವಿರುದ್ಧದ ಆರೋಪಗಳನ್ನು ಮಾರ್ಪಡಿಸುವಂತೆ ಎಸ್ಐಟಿ ನ್ಯಾಯಾಧೀಶರಿಗೆ ಪತ್ರ ಬರೆದಿದೆ.
ಅಕ್ಟೋಬರ್ 3 ರಂದು ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತಾ ರೈತರ ಮೇಲೆ ಅಜಯ್ ಮಿಶ್ರಾ ಅವರ ಕಾರು ವೇಗವಾಗಿ ಹರಿದಿತ್ತು. ಈ ವೇಳೆ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಕಾರು ಚಲಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ವಾಹನ ಹರಿದು ಸ್ಥಳದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದಾರೆ. ಜೊತೆಗೆ ಆಶಿಶ್ ಮಿಶ್ರಾ ವಾಹನ ಚಾಲಕ, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಓರ್ವ ಪತ್ರಕರ್ತ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಒಟ್ಟು ಎಂಟು ಜನ ಮೃತಪಟ್ಟಿದ್ದಾರೆ. ಘಟನೆಯ ಬಳಿಕೆ ಶಾಂತಿಯುತ ರೈತರ ಪ್ರತಿಭಟನೆಯ ಮಧ್ಯೆ ವಾಹನವೊಂದು ವೇಗವಾಗಿ ಹರಿದು ಬಂದ ವಿಡಿಯೋ ಇದೊಂದು ಕೊಲೆ ಎನ್ನುವುದಕ್ಕೆ ಪುಷ್ಠಿ ನೀಡಿತ್ತು. ಜೊತೆಗೆ ಈ ವಾಹನದಲ್ಲಿ ಸಚಿವರ ಪುತ್ರ ಆಶಿಶ್ ಮಿಶ್ರಾ ಅವರೇ ಚಲಾಯಿಸುತ್ತಿದ್ದರು ಎನ್ನುವುದಕ್ಕೆ ಬಲವಾದ ಸಾಕ್ಷಿಗಳು ಸಿಕ್ಕಿವೆ. ಹೀಗಾಗಿ ಆಶಿಶ್ ಮಿಶ್ರಾ ಜೊತೆಗೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆಗಾಗಿ ವಿಶೇಷ ಎಸ್ಐಟಿ ತಂಡವನ್ನು ರಚಿಸಲಾಗಿತ್ತು. ಈ ತಂಡ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಇದೊಂದು 'ಯೋಜಿತ ಹತ್ಯೆ' ಎಂದು ವರದಿ ನೀಡಿದೆ. ಜೊತೆಗೆ ಆಶಿಶ್ ಮಿಶ್ರಾ ಅವರ ಮೇಲಿರುವ ಆರೋಪಗಳನ್ನು ಬದಲಾಯಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಆಶಿಶ್ ಮಿಶ್ರಾ ಮೇಲೆ, ಎಸ್ಐಟಿ ಸೆಕ್ಷನ್ 307 (ಕೊಲೆಗೆ ಯತ್ನ), ಸೆಕ್ಷನ್ 326 (ಅಪಾಯಕಾರಿ ಆಯುಧದಿಂದ ಗಾಯಗೊಳಿಸುವುದು), ಸೆಕ್ಷನ್ 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಮತ್ತು ಸೆಕ್ಷನ್ 3/25 ಅಡಿಯಲ್ಲಿ ಪ್ರಕರಣ ದಾಖಲಿಸಲು ಅನುಮತಿ ಕೋರಿದೆ. ಜೊತೆಗೆ ಘಟನೆ ಬಳಿಕ ರೈತರ ಸಂಗಟನೆಗಳು ಹಾಗೂ ವಿರೋಧಪಕ್ಷಗಳು ಅಜಯ್ ಮಿಶ್ರಾ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications