ದೆಹಲಿಯ ಮತ್ತಷ್ಟು ಕಳಪೆಯಾದ ಪ್ರಾಣವಾಯು ಗುಣಮಟ್ಟ
ನವದೆಹಲಿ, ಡಿಸೆಂಬರ್ 02: ದೆಹಲಿಯಲ್ಲಿ ಪ್ರಾಣವಾಯು ಗುಣಮಟ್ಟ ದಿನದಿಂದ ದಿನಕ್ಕೆ ಮತ್ತಷ್ಟು ಕಳಪೆಯಾಗುತ್ತಾ ಹೋಗುತ್ತಿದೆ.
ವಾಯು ಗುಣಮಟ್ಟ ಸೂಚ್ಯಂಕ(ಎಐಕ್ಯೂ) 419ಕ್ಕೆ ಇಳಿದಿದ್ದು, ಅತ್ಯಂತ ಅಪಾಯಕಾರಿಯಾಗಿದೆ. ಕನಿಷ್ಠ ಈ ಋತುವಿನ ತಾಪಮಾನ ಸರಾಸರಿಗಿಂತ 13.4 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ.
ಎನ್ಸಿಆರ್ ವಲಯದ ಫರೀದಾಬಾದ್ 441, ನೋಯ್ಡಾ-404 ಗುರುವಾರ ಬೆಳಗ್ಗೆ ವಾಯು ಗುಣಮಟ್ಟ ಅಪಾಯಕಾರಿ ಹಂತದಲ್ಲೇ ಇತ್ತು. ಘಾಜಿಯಾಬಾದ್ 359, ಗ್ರೇಟರ್ ನೋಯ್ಡಾ 381, ಗುರುಗ್ರಾಮ 361 ನಗರಗಳ ವಾಯುಗುಣಮಟ್ಟವೂ ಅತ್ಯಂತ ಕಳಪೆಯಾಗಿದೆ.

ಭೂ ವಿಜ್ಞಾನ ಸಚಿವಾಲಯವು ಹಾಗೂ ವಾಯು ಗುಣಮಟ್ಟ ಮೇಲ್ವಿಚಾರಣೆಯ ಸಂಸ್ಥೆ ಸಫರ್ ಪ್ರಕಾರ, ಉತ್ತಮ ಗಾಳಿಯ ವೇಗದಿಂದ ಶುಕ್ರವಾರದಿಂದ ಗಾಳಿಯ ಗುಣಮಟ್ಟ ಸುಧಾರಿಸುವ ಸಾಧ್ಯತೆ ಇದೆ.
ಡಿಸೆಂಬರ್ 3ರಿಂದ ಗಾಳಿಯ ವೇಗ ಹೆಚ್ಚುವ ಮೂಲಕ ಧೂಳು ಕಡಿಮೆಯಾಗುವ ಸಾಧ್ಯತೆ ಇದೆ, ಆದರೆ ಎಐಕ್ಯೂ ಅತ್ಯಂತ ಕಳಪೆಯ ಹಂತದಲ್ಲೇ ಉಳಿಯುವ ಸಾಧ್ಯತೆ ಇದೆ ಎಂದು ಹೇಳಿದೆ.
ಶೂನ್ಯದಿಂದ 50ರವರೆಗಿನ ವಾಯು ಗುಣನಟ್ಟವನ್ನು ಆರೋಗ್ಯಕ್ಕೆ ಉತ್ತಮ, 51ರಿಂದ 100ರವರೆಗೆ ತೃಪ್ತಿಕರ, 101ರಿಂದ 200ರವರೆಗೆ ಸಾಮಾನ್ಯ, 201ರಿಂದ 300ರವರೆಗೆ ಕಳಪೆ, 400ಕ್ಕೆ ಕಳಪೆ, 401ರಿಂದ 500ವರೆಗಿನ ವಾಯುಗುಣಮಟ್ಟ ಸೂಚ್ಯಂಕವನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಇಂದು ನಗರದಲ್ಲಿ ಅಲ್ಪ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ರಾಷ್ಟ್ರರಾಜಧಾನಿಯಲ್ಲಿ ವಾಯುಗುಣಮಟ್ಟ ಹದಗೆಟ್ಟಿರುವುದರಿಂದ ಇದನ್ನು ತಡೆಯುವ ಸಲುವಾಗಿ, ಡಿಸೆಂಬರ್ 7ರವರೆಗೆ ಕಟ್ಟಡ ನಿರ್ಮಾಣ ಕಾರ್ಯ ಹಾಗೂ ಟ್ರಕ್ಗಳ ರಾಜಧಾನಿ ಪ್ರವೇಶಕ್ಕೆ ದೆಹಲಿ ಸರ್ಕಾರ ನಿರ್ಬಂಧ ವಿಧಿಸಿದೆ.
ಅಗತ್ಯ ಸರಕುಗಳನ್ನು ತಲುಪಿಸುವ ಟ್ರಕ್ಗಳು, ಸಿಎನ್ಜಿ, ಇ-ಟ್ರಕ್ಗಳಿಗೆ ಈ ನೋ-ಎಂಟ್ರಿ ನಿರ್ದೇಶನದಿಂದ ವಿನಾಯಿತಿ ನೀಡಲಾಗಿದೆ. ಮುಂದಿನ ಆದೇಶದವರೆಗೆ ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳ ಮೇಲಿನ ನಿಷೇಧ ಮುಂದುವರಿಯುತ್ತದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು ಸೋಮವಾರ ಹೇಳಿದ್ದಾರೆ.
ನಗರದಲ್ಲಿ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ಯಾಗಿರುವುದರಿಂದ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಾಮರ್ಶೆ ಸಭೆ ನಡೆಸಿದ ನಂತರ ಈ ಆದೇಶ ನೀಡಲಾಗಿದೆ.
ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ಕಾರಣ ಕಾರ್ಮಿಕರು ತೀವ್ರ ತೊಂದರೆಗೊಳಗಾಗಿದ್ದು, ಅವರಿಗೆ ಜೀವನ ನಡೆಸಲು ದೆಹಲಿ ಸರ್ಕಾರ ತಲಾ 5 ಸಾವಿರ ರೂ. ಪರಿಹಾರ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ.












Click it and Unblock the Notifications