ರೈತ ಪ್ರತಿಭಟನೆ: ದೆಹಲಿಯ ಮೆಟ್ರೋ ಸಂಚಾರ ಬಂದ್
ನವದೆಹಲಿ, ನವೆಂಬರ್ 27: ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಜೋರಾಗುತ್ತಿದ್ದು, ಉತ್ತರ ಭಾರತದ ಹರಿಯಾಣ, ಪಂಜಾಬ್ ಹಾಗೂ ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿವೆ.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಬೀದಿಗಿಳಿಯುತ್ತಿದ್ದು, ಪ್ರತಿಭಟನೆ ಹತ್ತಿಕ್ಕಲು ನಾನಾ ಕಸರತ್ತು ಮಾಡಲಾಗುತ್ತಿದೆ. ಈ ನಡುವೆ ದೆಹಲಿಯಲ್ಲಿನ 6 ಮೆಟ್ರೋ ನಿಲ್ದಾಣಗಳ ಸಂಚಾರನ್ನು ಬಂದ್ ಮಾಡಲಾಗಿದೆ. ಈ ಕುರಿತು ದೆಹಲಿ ಮೆಟ್ರೋ ರೈಲು ನಿಗಮ ಪ್ರಯಾಣಿಕರಿಗೆ ಪ್ರಕಟಣೆ ಹೊರಡಿಸಿದೆ.
ದೆಹಲಿಯ ಹಸಿರು ಲೈನ್ನಲ್ಲಿರುವ ಬ್ರಿಗೇಡಿಯರ್ ಹೊಸಿಯಾರ್ ಸಿಂಗ್ ನಿಲ್ದಾಣ, ಬಹದ್ದೂರ್ಗರ ಸಿಟಿ, ಪಂಡಿತ್ ಶ್ರೀ ರಾಮ್ ಶರ್ಮಾ, ಟಿಕ್ರಿ ಬಾರ್ಡರ್, ಟಿಕ್ರಿ ಕಲಾನ್ ಮತ್ತು ಘೆವ್ರಾ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ಗೇಟ್ಗಳನ್ನು ಈಗ ಮುಚ್ಚಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ದೆಹಲಿ ಮೆಟ್ರೋ ಗ್ರೀನ್ಲೈನ್ನಲ್ಲಿ 6 ನಿಲ್ದಾಣಗಳನ್ನು ಮುಚ್ಚಿದೆ. ಹೊಸ ಕೃಷಿ ತಿದ್ದುಪಡಿ ಮಸೂದೆಯಂತಹ ಕಾಯ್ದೆಗಳ ವಿರುದ್ಧ ಪಂಜಾಬ್ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳ ರೈತರು "ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ರೈತರ ಪ್ರತಭಟನೆ ನಿಯಂತ್ರಿಸಲು ಪೊಲೀಸರು ತೀವ್ರ ಹರಸಾಹಸ ಪಡುತ್ತಿದ್ದು, ರೈತರ ಹಾಗೂ ಪೊಲೀಸರ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದೆ. ದೆಹಲಿ ಪ್ರತಿಭಟನೆಗೆ ತೆರಳುತ್ತಿರುವ ರೈತರನ್ನು ತಡೆಯಲು ಅವರ ಮೇಲೆ ಜಲಫಿರಂಗಿ ಮತ್ತು ಅಶ್ರುವಾಯುಗಳನ್ನು ಬಳಸುತ್ತಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications