'ಅಭಿನಂದನ್' ಶಬ್ದದ ಅರ್ಥವೇ ಬದಲಾಗಿದೆ : ನರೇಂದ್ರ ಮೋದಿ
ನವದೆಹಲಿ, ಮಾರ್ಚ್ 02 : "ಭಾರತ ಏನು ಮಾಡುತ್ತದೋ ಅದನ್ನು ಜಗತ್ತು ಗಮನಿಸುತ್ತಿರುತ್ತದೆ. ಪದಕೋಶದಲ್ಲಿನ ಶಬ್ದದ ಅರ್ಥವನ್ನೇ ಬದಲಿಸುವ ಶಕ್ತಿ ಭಾರತಕ್ಕಿದೆ. ಮೊದಲಿಗೆ 'ಅಭಿನಂದನ್' ಅಂದರೆ ಆಂಗ್ಲ ಭಾಷೆಯಲ್ಲಿ ಕಂಗ್ರಾಚ್ಯುಲೇಷನ್ಸ್ ಅಂತ ಇತ್ತು. ಇದೀಗ 'ಅಭಿನಂದನ್' ಶಬ್ದದ ಅರ್ಥವನ್ನೇ ಭಾರತ ಬದಲಾಯಿಸಿದೆ."
ಹೀಗೆಂದು ವ್ಯಾಖ್ಯಾನಿಸಿದವರು ಪ್ರದಾನಿ ನರೇಂದ್ರ ಮೋದಿ. ದೆಹಲಿಯಲ್ಲಿ ಶನಿವಾರ ನಡೆದಿರುವ 'ಕನ್ಸ್ಟ್ರಕ್ಷನ್ ಟೆಕ್ನಾಲಜಿ ಇಂಡಿಯಾ 2019' ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಇನ್ನೂ ಮುಂದೆ ಅಭಿನಂದನ್ ಅರ್ಥವೇ ಬದಲಾಗುತ್ತದೆ. 'ಅಭಿನಂದನ್' ಅಂದರೆ ಧೈರ್ಯ, ಶೌರ್ಯ ಎಂಬ ಅರ್ಥವೂ ಪಡೆದುಕೊಂಡಿದೆ ಎಂದು ನುಡಿದರು.
ಪಾಕಿಸ್ತಾನದ ಸೇನೆಯಿಂದ ಬಂಧಿತನಾಗಿದ್ದ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶುಕ್ರವಾರ ರಾತ್ರಿ 9.21ರ ಸುಮಾರಿಗೆ ಭಾರತದೊಳಗೆ ಬಿಡುಗಡೆ ಮಾಡಿದ ನಂತರ, ಟ್ವಿಟ್ಟರಿನಲ್ಲಿ ನರೇಂದ್ರ ಮೋದಿಯವರು ಸ್ವಾಗತ ಕೋರಿದ್ದರು. "ವಿಂಗ್ ಕಮಾಂಡರ್ ಅಭಿನಂದನ್ ನಿಮಗೆ ಸ್ವಾಗತ. ನಿಮ್ಮ ಧೈರ್ಯದ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆಯಿದೆ. ನಮ್ಮ ಸೇನೆ 130 ಕೋಟಿ ಭಾರತೀಯರಿಗೆ ಸ್ಫೂರ್ತಿ. ವಂದೇ ಮಾತರಂ" ಎಂದು ಅವರು ಟ್ವೀಟ್ ಮಾಡಿದ್ದರು.

ಪಾಕ್ ಸೈನಿಕರು ಭಾರತದ ಮೇಲೆ ಫೆಬ್ರವರಿ 27ರಂದು ವೈಮಾನಿಕ ದಾಳಿ ನಡೆಸಿದ ಮರುಕ್ಷಣವೇ, ಅವರ ಯುದ್ಧ ವಿಮಾನಗಳನ್ನು ಬೆನ್ನತ್ತಿ, ಎಫ್-16 ಜೆಟ್ ಅನ್ನು ಹೊಡೆದುರುಳಿಸಿದ್ದ ಅಭಿನಂದನ್ ಅವರ ಮಿಗ್ 21 ಬೈಸನ್ ಯುದ್ಧ ವಿಮಾನವನ್ನು ಪಾಕಿಸ್ತಾನದ ಸೇನೆ ಹೊಡೆದುರುಳಿಸಿತ್ತು. ಆಗ, ಪ್ಯಾರಾಶೂಟ್ ಸಹಾಯದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದ ಅಭಿನಂದನ್ ಅವರು, ಪಾಕ್ ಸೇನೆಯ ಕೈಗೆ ಸಿಕ್ಕಿಬಿದ್ದಿದ್ದರು. ಇದಾಗಿ ಸುಮಾರು 60 ಗಂಟೆಗಳ ನಂತರ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿ ಭಾರತಕ್ಕೆ ಒಪ್ಪಿಸಿದೆ.












Click it and Unblock the Notifications