ಪ.ಬಂಗಾಳ ಹಿಂಸಾಚಾರಕ್ಕೆ ದೀದಿ ಉತ್ತರ ನೀಡಬೇಕು: ಅಮಿತ್ ಶಾ
ನವದೆಹಲಿ, ಮೇ 17: ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿಯೇ ಉತ್ತರದಾಯಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.
ದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ಯಾವ ರಾಜ್ಯದಲ್ಲೂ ಇಲ್ಲದ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲೇ ಏಕಿದೆ ಎಂದು ಪ್ರಶ್ನಿಸಿದರು.
ಬಿಜೆಪಿಯು ಎಲ್ಲಾ ರಾಜ್ಯಗಳಲ್ಲೂ ಸ್ಪರ್ಧಿಸಿದೆ, ನಾವು ಎಲ್ಲ ರಾಜ್ಯದಲ್ಲಿ ಪ್ರವಾಸ ಮಾಡಿದ್ದೇವೆ ಆದರೆ ಒಂದು ರಾಜ್ಯದಲ್ಲಿ ಮಾತ್ರ ಸ್ಪರ್ಧಿಸಿರುವ ಮಮತಾ ಬ್ಯಾನರ್ಜಿ ಅವರ ಪಶ್ಚಿಮ ಬಂಗಾಳದಲ್ಲಿ ಮಾತ್ರವೇ ಏಕೆ ಹಿಂಸಾಚಾರ ನಡೆಯುತ್ತದೆ, ಮಾಧ್ಯಮದವರು ಇದನ್ನು ಪ್ರಶ್ನಿಸುತ್ತಿಲ್ಲವೇಕೆ ಎಂದು ಶಾ ಬೇಸರ ವ್ಯಕ್ತಪಡಿಸಿದರು.
ನಾಥೋರಾಮ್ ಗೂಡ್ಸೆ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಶಾ, ನಮ್ಮ ನಿಲವು ಸ್ಪಷ್ಟವಿದೆ, ನಾಥೂರಾಮ್ ಗೋಡ್ಸೆ ಬಗ್ಗೆ ಸಿಂಪತಿ ಅಥವಾ ಸಮರ್ಥನೆಯನ್ನು ನಾವು ಖಂಡಿಸುತ್ತೇವೆ, ಈಗ ನಾಥೂರಾಮ್ ಪರ ಹೇಳಿಕೆ ನೀಡಿರುವವರಿಗೆ ಷೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ ಅದನ್ನು ಅವರು 10 ದಿನಗಳ ಒಳಗಾಗಿ ಉತ್ತರ ನೀಡಬೇಕಿದೆ ಎಂದು ಹೇಳಿದರು.
ಸಂಜೋತಾ ಎಕ್ಸ್ಪ್ರೆಸ್ ಹತ್ಯಾಕಾಂಡ ಆರೋಪಿ ಪ್ರಜ್ಞಾ ಸಿಂಗ್ ಗೆ ಟಿಕೆಟ್ ನೀಡಿರುವ ಬಗ್ಗೆ ಉತ್ತರಿಸಿದ ಶಾ, ಸಂಜೋತಾ ಎಕ್ಸ್ಪ್ರೆಸ್ ಪ್ರಕರಣದಲ್ಲಿ ಮೊದಲಿಗೆ 17 ಜನರನ್ನು ಬಂಧಿಸಲಾಗಿತ್ತು, ಅಮೆರಿಕದ ಏಜೆನ್ಸಿ ಸಹ ಅವರನ್ನು ಆರೋಪಿಗಳಾಗಿ ಅನುಮೋದಿಸಿತ್ತು, ಆದರೆ ನಂತರದ ದಿನಗಳಲ್ಲಿ ಕೇಸರಿ ಭಯೋತ್ಪಾದನೆ ಎಂಬುದನ್ನು ಸ್ಥಾಪಿಸಲು ಕಾಂಗ್ರೆಸ್ ಸರ್ಕಾರ ಸುಳ್ಳು ಪ್ರಕರಣ ಹಾಕಿ, ಪ್ರಕರಣದ ದಿಕ್ಕು ತಪ್ಪಿಸಿತು ಎಂದು ಶಾ ಹೇಳಿದರು.
ಆಂತರಿಕ ಸಮೀಕ್ಷೆ ಪ್ರಕಾರ ಬಿಜೆಪಿಯು 300 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ, ನಮ್ಮ ಚುನಾವಣಾ ಪೂರ್ವ ಮೈತ್ರಿಯ ಸ್ನೇಹಿತರು ನಮ್ಮೊಂದಿಗೆ ಸರ್ಕಾರದಲ್ಲಿ ಇರುತ್ತಾರೆ, ನಮ್ಮ ಸಿದ್ಧಾಂತ, ಕಾರ್ಯ ಮೆಚ್ಚಿ ಬರುವ ಹೊಸ ಸ್ನೇಹಿತರಿಗೂ ಸ್ವಾಗತ ಎಂದು ಅಮಿತ್ ಶಾ ಹೇಳಿದರು.