ನವೆಂಬರ್.20ರಂದೇ ಬಗೆಹರಿಯುತ್ತಾ ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು?
ನವದೆಹಲಿ, ನವೆಂಬರ್.19: ಮಹಾರಾಷ್ಟ್ರ ರಾಜಕಾರಣ ದಿನೇ ದಿನೆ ರಂಗು ಏರುತ್ತಲೇ ಇದೆ. ಸರ್ಕಾರ ರಚನೆಗೆ ನಾ ಮುಂದು, ತಾ ಮುಂದು ಎಂದು ಪಕ್ಷಗಳು ಹಾತೊರೆಯುತ್ತಿವೆ. ಆದರೆ, ಒಬ್ಬರಿಗೆ ಮತ್ತೊಬ್ಬರಿಗೆ ಹಾಕುವ ಷರತ್ತುಗಳು ಒಂದೆರೆಡಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದರು. ಬಿಜೆಪಿ ಫೇಲ್ ಆಗುತ್ತಿದ್ದಂತೆ ಶಿವಸೇನೆಗೆ ಬುಲಾವ್ ಕೊಟ್ಟರು. ಆದರೆ, ಬಿಜೆಪಿ ಜೊತೆಗಿನ ಮೈತ್ರಿ ಕಳೆದುಕೊಂಡ ಶಿವಸೇನೆಗೆ ನೆಚ್ಚಿಕೊಂಡಿದ್ದ ಎನ್ ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕೈ ಕೊಟ್ಟವು. ಇದರ ಪರಿಣಾಮ ನವೆಂಬರ್.09ರಿಂದ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು.
ಇದೀಗ ಮಹಾರಾಷ್ಟ್ರ ರಾಜಕಾರಣ ಮತ್ತೊಂದು ತಿರುವು ಪಡೆದುಕೊಂಡಿದೆ. ನವೆಂಬರ್.20ರಂದು ಎನ್ ಸಿಪಿ ಹಾಗೂ ಕಾಂಗ್ರೆಸ್ ನಾಯಕರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಈ ಸಭೆ ಮೇಲೆ ಇದೀಗ ಎಲ್ಲರ ದೃಷ್ಟಿ ನೆಟ್ಟಿದೆ. ಎರಡು ಪಕ್ಷಗಳ ನಾಯಕರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮಹಾರಾಷ್ಟ್ರ ಸರ್ಕಾರ ರಚನೆಯ ಭವಿಷ್ಯ ನಿಂತಿದೆ.

ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಮಹತ್ವದ ಮೀಟಿಂಗ್
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಗೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ನವೆಂಬರ್.20ರಂದು ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಪ್ರಫುಲ್ ಪಟೇಲ್, ಅಜಿತ್ ಪವಾರ್, ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್, ಮಲ್ಲಿಕಾರ್ಜುನ್ ಖರ್ಗೆ, ಪೃಥ್ವಿರಾಜ್ ಚೌವ್ಹಾಣ್, ಅಶೋಕ್ ಚೌವ್ಹಾಣ್ ಭಾಗಿಯಾಗಲಿದ್ದಾರೆ.
ಕಳೆದ ನವೆಂಬರ್.18ರ ಸೋಮವಾರವಷ್ಟೇ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ನಾಳೆ ನಡೆಯಲಿರುವ ಸಭೆ ಸಾಕಷ್ಟು ಕುತೂಹಲ ಕೆರಳಿಸಿದೆ. ಸರ್ಕಾರ ರಚನೆಗೆ ಮುಂದಾಗಿರುವ ಶಿವಸೇನೆಗೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬೆಂಬಲ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಅಂತಿಮ ತೀರ್ಮಾನ ಹೊರ ಬೀಳುವ ಸಾಧ್ಯತೆಗಳಿವೆ.












Click it and Unblock the Notifications