ಕೇಂದ್ರದ ಮಹತ್ವದ ನಿರ್ಣಯ: ಚಿಟ್ ಫಂಡ್, ಬಿಲ್ ಪಾಸ್
ನವದೆಹಲಿ, ನ 20: ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡುವವರಲ್ಲಿ ಮಧ್ಯಮ ವರ್ಗದವರ ಪಾಲೇ ಹೆಚ್ಚು. ಮತ್ತು, ಅದೇ ರೀತಿ ಚಿಟ್ ಫಂಡ್ ಸಂಸ್ಥೆಗಳು, ಗ್ರಾಹಕರನ್ನು ಯಾಮಾರಿಸಿದ ಹಲವು ಉದಾಹರಣೆಗಳೂ ನಮ್ಮ ಮುಂದಿವೆ. ಈಗ, ಅದಕ್ಕೆ ಬ್ರೇಕ್ ಹಾಕುವ ಮಹತ್ವದ ಮಸೂದೆಗೆ ಲೋಕಸಭೆ 'ಅಸ್ತು' ಅಂದಿದೆ.
ಚಿಟ್ ಫಂಡ್ ಕಾರ್ಯಾಚರಣೆಯನ್ನು ಸುವ್ಯವಸ್ಥಿತಗೊಳಿಸುವ ಮತ್ತು ಹೂಡಿಕೆದಾರರ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು, ಚಿಟ್ ಫಂಡ್ಸ್ ಮಸೂದೆ 2019 (ತಿದ್ದುಪಡಿ,1982) ಅನ್ನು ಲೋಕಸಭೆ ಬುಧವಾರ ಅಂಗೀಕರಿಸಿದೆ.
ಮಸೂದೆಯ ಕುರಿತ ಚರ್ಚೆಗೆ ಉತ್ತರಿಸುತ್ತಿದ್ದ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, "ಬಡವರ ಮತ್ತು ಮಧ್ಯಮ ವರ್ಗದ ಹಿತ ಕಾಪಾಡುವುದು ಮತ್ತು ಅವರು ಮೋಸ ಹೋಗದಂತೆ ತಡೆಯುವುದೇ ಈ ಮಸೂದೆಯ ಮೂಲ ಉದ್ದೇಶ" ಎಂದಿದ್ದಾರೆ.

ಈಗಿರುವ ಮಸೂದೆಯ ಪ್ರಕಾರ, ಏಕ ವ್ಯಕ್ತಿಯಿಂದ (individual) ನಿರ್ವಹಿಸಲ್ಪಡುತ್ತಿರುವ ಸಂಸ್ಥೆಗಳು ಒಂದು ಲಕ್ಷದಿಂದ ಗರಿಷ್ಠ 3 ಲಕ್ಷ ರೂ.ಗಳವರೆಗೆ ಸಂಗ್ರಹಿಸಬಹುದು. ನಾಲ್ಕು ಅಥವಾ ಹೆಚ್ಚಿನ ಪಾಲುದಾರರನ್ನು (partnership firm) ಹೊಂದಿರುವ ಸಂಸ್ಥೆಗಳಿಗೆ, ಕೇಂದ್ರವು 6 ಲಕ್ಷದಿಂದ 18 ಲಕ್ಷ ರೂ.ಗೆ ಹೆಚ್ಚಿಸಲು ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಕೇಂದ್ರದ ಪ್ರಸ್ತಾವನೆಯಲ್ಲಿ ಈ ಹಿಂದೆ ರಚಿಸಲಾಗಿದ್ದ ಸ್ಥಾಯಿ ಸಮಿತಿಯ ವರದಿಯ ಸಲಹೆಗಳನ್ನು ಸೇರಿಸಲಾಗಿತ್ತು. ಆದರೆ, ಲೋಕಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿ, ಈ ಬಿಲ್, ಲೋಕಸಭೆಯಲ್ಲಿ ಪ್ರಸ್ತಾವನೆಗೆ ಬಂದಿರಲಿಲ್ಲ.
ಮಸೂದೆಯಲ್ಲಿನ ಪ್ರಸ್ತಾವಿತ ಬದಲಾವಣೆಗಳಲ್ಲಿ ಚಿಟ್ ಫಂಡ್ ನಿರ್ವಹಿಸುವ ವ್ಯಕ್ತಿಯ ಗರಿಷ್ಠ ಕಮಿಷನ್ ಮೊತ್ತವನ್ನು, ಒಟ್ಟು ಮೊತ್ತದ ಶೇ. 5% ರಿಂದ 7% ಕ್ಕೆ ಏರಿಸುವುದು ಸೇರಿದೆ.
ಜೊತೆಗೆ, "ಚಿಟ್ ಫಂಡ್ ಸಂಸ್ಥೆಗೆ ನೊಂದಣಿ ನೀಡಬೇಕೇ, ಬೇಡವೇ ಎನ್ನುವ ಅಧಿಕಾರವನ್ನು ರಾಜ್ಯ ಸರ್ಕಾರದ ವಿವೇಚನೆಗೆ ಬಿಡಲಾಗಿದೆ. ಹೆಚ್ಚಿನ ಬಡ್ಡಿ ಆಸೆಗೆ ಜನರು ಮೋಸ ಹೋಗದಂತೆ ತಡೆಯುವ ಉದ್ಧೇಶ ಕೂಡಾ ಈ ಮಸೂದೆಯಲ್ಲಿದೆ" ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.











Click it and Unblock the Notifications