1,200 ಕಿ.ಮೀ ಸೈಕಲ್ ತುಳಿದ 15ರ ಬಾಲಕಿಗೆ ಬಂಪರ್ ಆಫರ್!
ನವದೆಹಲಿ, ಮೇ.25: ಭಾರತದಲ್ಲಿ ಲೌಕ್ ಡೌನ್ 4.0 ನಡುವೆ ಅನಾರೋಗ್ಯ ಪೀಡಿತ ತಂದೆಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ಏಳು ದಿನದಲ್ಲಿ 1,200 ಕಿಲೋ ಮೀಟರ್ ಕ್ರಮಿಸಿದ 15 ವರ್ಷದ ಜ್ಯೋತಿ ಕುಮಾರಿ ವಿದ್ಯಾಭ್ಯಾಸಕ್ಕೆ ಲೋಕ ಜನಶಕ್ತಿ ಪಕ್ಷವು ನೆರವು ನೀಡುವುದಾಗಿ ಘೋಷಿಸಿದೆ.
Recommended Video
ಬಿಹಾರದ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ 15 ವರ್ಷದ ಜ್ಯೋತಿ ಕುಮಾರಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಡತನದಲ್ಲಿರುವ ಕುಟುಂಬಕ್ಕೆ ನೆರವು ನೀಡುವುದರ ಜೊತೆಗೆ ಬಾಲಕಿಯ ಶಿಕ್ಷಣಕ್ಕೆ ಸಂಪೂರ್ಣ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಭಾರತ ದೇಶದ ಯಾವುದೇ ಮೂಲೆಯಲ್ಲಿ ಜ್ಯೋತಿಕುಮಾರಿ ತಮಗೆ ಇಷ್ಟಪಟ್ಟ ಕೋರ್ಸ್ ಗಳನ್ನು ಮಾಡಲಿ. ಅದರ ವೆಚ್ಚವನ್ನು ಭರಿಸುವ ಸಂಪೂರ್ಣ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುವುದಾಗಿ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಜಿಲ್ಲಾಡಳಿತದಿಂದ ಜ್ಯೋತಿ ಕುಮಾರಿವರಿಗೆ ಹೊಸ ಸೈಕಲ್
ಪಿಂದರ್ಚು ಪ್ರೌಢಶಾಲೆಯಲ್ಲಿ 9ನೇ ತರಗತಿಗೆ ಓದುತ್ತಿರುವ ಜ್ಯೋತಿ ಕುಮಾರಿ ಅವರ ನಿವಾಸಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಬಾಲಕಿಗೆ ಹೊಸ ಸೈಕಲ್, ಶಾಲಾ ಸಮವಸ್ತ್ರ ಹಾಗೂ ಬೂಟ್ ಗಳನ್ನು ವಿತರಿಸಿದ್ದಾರೆ.

ಮಗಳನ್ನು ಸೈಕಲಿಂಗ್ ತರಬೇತಿಗೆ ಕಳಿಸುತ್ತೇನೆ ಎಂದ ಅಪ್ಪ
1200 ಕಿಲೋ ಮೀಟರ್ ದೂರದಿಂದ ತಮ್ಮನ್ನು ಸ್ವಗ್ರಾಮಕ್ಕೆ ಕರೆತಂದ ಮಗಳಿಗೆ ಉಚಿತವಾಗಿ ತರಬೇತಿ ನೀಡುವುದಕ್ಕೆ ಸೈಕಲ್ ಫೆಡರೇಷನ್ ಆಫ್ ಇಂಡಿಯಾ ಆಫರ್ ನೀಡಿದೆ. ಈ ಹಿನ್ನೆಲೆ ತಮ್ಮ ಮಗಳನ್ನು ಭಾರತ ಲಾಕ್ ಡೌನ್ 4.0 ನಂತರ ತರಬೇತಿಗೆ ಕಳುಹಿಸಿ ಕೊಡುತ್ತೇನೆ ಎಂದು ತಂದೆ ಮೋಹನ್ ಪಾಸ್ವಾನ್ ಹೇಳಿದ್ದಾರೆ.

ಸಿಎಫ್ಐ ವಹಿಸಿಕೊಂಡಿತು ಸೈಕ್ಲಿಂಗ್ ತರಬೇತಿ ವೆಚ್ಚ
15 ವರ್ಷದ ಜ್ಯೋತಿಕುಮಾರಿ ಸೈಕ್ಲಿಂಗ್ ಟ್ರಯಲ್ಸ್ ಪಾಸ್ ಮಾಡಬೇಕಿದೆ. ನಂತರ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಣದಲ್ಲಿರುವ 'ಸ್ಟೇಟ್ ಆಫ್ ದ ಆರ್ಟ್ ನ್ಯಾಷನಲ್' ಸೈಕ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾರೆ. ಇದಕ್ಕಾಗಿ ಬಾಲಕಿ ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಓಂಕಾರ್ ಸಿಂಗ್ ತಿಳಿಸಿದ್ದಾರೆ.

ನವದೆಹಲಿಗೆ ಮುಂದಿನ ತಿಂಗಳಿನಲ್ಲಿ ಜ್ಯೋತಿಕುಮಾರಿ
ಭಾರತ ಲಾಕ್ ಡೌನ್ 4.0 ತೆರವುಗೊಂಡ ಬಳಿಕ ಮುಂದಿನ ತಿಂಗಳಿನಲ್ಲಿ ಜ್ಯೋತಿ ಕುಮಾರಿಯವರನ್ನು ನವದೆಹಲಿಗೆ ಕರೆಸಿಕೊಳ್ಳಲಾಗುತ್ತದೆ. ಈ ವೇಳೆ ಅವರ ಪ್ರಯಾಣ ವೆಚ್ಚ ಮತ್ತು ನವದೆಹಲಿಯಲ್ಲಿ ಉಳಿದುಕೊಳ್ಳುವ ವೆಚ್ಚವನ್ನು ಸಂಪೂರ್ಣವಾಗಿ ಸೈಕಲ್ ಫೆಡರೇಷನ್ ಆಫ್ ಇಂಡಿಯಾ ಭರಿಸಲಿದೆ. ಜ್ಯೋತಿಕುಮಾರಿ ಜೊತೆ ಅವರ ಒಬ್ಬ ಸಂಬಂಧಿಕರು ಉಳಿದುಕೊಳ್ಳುವುದಕ್ಕೂ ಅವಕಾಶ ನೀಡಲಾಗುತ್ತದೆ ಎಂದು ಸಿಎಫ್ಐ ಮುಖ್ಯಸ್ಥ ಓಂಕಾರ್ ಸಿಂಗ್ ತಿಳಿಸಿದ್ದಾರೆ.

1,200 ಕಿಲೋ ಮೀಟರ್ ಸೈಕಲ್ ಸವಾರಿಯ ಕಥೆ
ಆಟೋರಿಕ್ಷಾ ಚಾಲಕರಾಗಿದ್ದ 15 ವರ್ಷದ ಬಾಲಕಿ ಜ್ಯೋತಿ ಕುಮಾರಿ ಅವರ ತಂದೆಗೆ ಭಾರತದಲ್ಲಿ ಲಾಕ್ ಡೌನ್ 4.0 ಹಿನ್ನೆಲೆ ದುಡಿಮೆ ಇರಲಿಲ್ಲ. ಇದರ ಮಧ್ಯೆ ಅನಾರೋಗ್ಯಕ್ಕೆ ತುತ್ತಾದ ತಂದೆ ಹಾಗೂ ತಾನು ಹೊತ್ತಿನ ಊಟಕ್ಕೂ ಪರಿತಪಿಸುವಂತಾ ಪರಿಸ್ಥಿತಿ ಎದುರಾಯಿತು. ಇದರಿಂದ ಹತಾಶೆಗೊಂಡ ಜ್ಯೋತಿ ಕುಮಾರಿ ಸೆಕೆಂಡ್ ಹ್ಯಾಂಡ್ ಸೈಕಲ್ ವೊಂದನ್ನು ಖರೀಸಿದರು. ನಂತರ ಅದೇ ಸೈಕಲ್ ನಲ್ಲಿ ನವದೆಹಲಿಯಿಂದ ಬಿಹಾರದ ದರ್ಬಾಂಗ್ ವರೆಗೂ ಕ್ರಮಿಸಿದರು.












Click it and Unblock the Notifications