ದೇಶಕ್ಕಾಗಿ ತನ್ನನ್ನೇ ಬಲಿದಾನ ಮಾಡಿಕೊಂಡ ರಾಹುಲ್!
ನವದೆಹಲಿ, ಅ 28: ಒಂದು ಕಡೆ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ದೇಶಾದ್ಯಂತ ಭರ್ಜರಿಯಾಗಿ ಹೂಂಕರಿಸುತ್ತಿದ್ದರೆ ಇತ್ತ ಕಾಂಗ್ರೆಸ್ ಪಕ್ಷದ ಧುರೀಣರು ಏನಾದಾರೂ ಎಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾರೆ.
ರಾಹುಲ್ ಗಾಂಧಿಯವರ ವಿವಾದೀತ ಐಎಸ್ಐ ಹೇಳಿಕೆಯ ನಂತರ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಮಾತಿನ ಭರದಲ್ಲಿ ಜೀವಂತವಾಗಿರುವವರನ್ನೇ ಸಾಯಿಸಿ ಬಿಟ್ಟಿದ್ದಾರೆ.
ನವದೆಹಲಿಯಲ್ಲಿ ಭಾನುವಾರ (ಅ 27) ನಡೆದ ರಾಹುಲ್ ಗಾಂಧಿ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ರಾಜೀವ್ ಗಾಂಧಿ ಹೆಸರು ಹೇಳುವ ಬದಲು 'ರಾಹುಲ್ ಗಾಂಧಿ ಈ ದೇಶಕ್ಕಾಗಿ ತಮ್ಮ ದೇಹವನ್ನೇ ಬಲಿದಾನ ಮಾಡಿದ್ದಾರೆ'ಎಂದು ಹೇಳಿದರು.
ಇದಕ್ಕೆ ಜನರ ಪ್ರತಿಕ್ರಿಯೆಯಿಂದ ಎಚ್ಚೆತ್ತುಕೊಂಡ ಸ್ಥಳೀಯ ಶಾಸಕ ಜೈ ಕೃಷ್ಣನ್ ಆದ ಪ್ರಮಾದವನ್ನು ಕೂಡಲೇ ಸರಿಪಡಿಸಿ ಕೊಂಡರು.
ಇನ್ನೊಬ್ಬ ಕಾಂಗ್ರೆಸ್ ಮುಖಂಡ ಕುಲ್ದದೀಪ್ ನಗರ್, ಶೀಲಾ ದೀಕ್ಷಿತ್ ಸರಕಾರದ ಸಚಿವರೊಬ್ಬರನ್ನು ಕೇಂದ್ರ ಸಚಿವರೆಂದು ಸಂಭೋದಿಸಿ ಮತ್ತೆ ಸಭೆಯ ಕ್ಷಮೆಯಾಚಿಸಿದರು.
ರಾಹುಲ್ ಸಭೆಯಲ್ಲಿ ಈರುಳ್ಳಿ ಸಮಸ್ಯೆ...

ರಾಹುಲ್ ಗಾಂಧಿ ದೆಹಲಿ ಸಭೆ
ಒಂಬತ್ತು ಗಂಟೆಗೆ ಬರಬೇಕಾಗಿದ್ದ ರಾಹುಲ್ ಗಾಂಧಿ ಸಭೆಗೆ ಬಂದಿದ್ದು ಮಧ್ಯಾಹ್ನ ಒಂದು ಗಂಟೆಗೆ. ನಾಲ್ಕು ತಾಸು ರಾಹುಲ್ ಗಾಂಧಿಯನ್ನು ಕಾಯುತ್ತಿದ್ದ ಜನತೆ ಹೈರಾಣವಾಗಿದ್ದರು. ಈ ಚುನಾವಾಣಾ ಸಭೆಯಲ್ಲಿ ಸುಮಾರು ಐವತ್ತು ಸಾವಿರ ಜನರು ಆಗಮಿಸಿದ್ದರು.

ಬೆಲೆ ಏರಿಕೆ
ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ವಿಳಂಬದಿಂದ ಜನರು ವಾಪಸ್ ಹೋಗದಂತೆ ನೋಡಿಕೊಳ್ಳುವುದು ಒಂದೆಡೆಯಾದರೆ, ಇನ್ನೊಂದೆಡೆ ಸಭೆಗೆ ಬಂದವರು ಬೆಲೆ ಏರಿಕೆಯ ಬಗ್ಗೆ ಮಾತನ್ನಾಡುತ್ತಿರುವುದು ತಲೆ ನೋವಾಗಿ ಪರಿಣಮಿಸಿತ್ತು.

ಈರುಳ್ಳಿ
ಸಭೆಗೆ ಬಂದವರಿಗೆ ಕಾರ್ಯಕರ್ತರು ಮನವಿ ಮಾಡಿದರೂ ಈರುಳ್ಳಿ ಮತ್ತು ವಿದ್ಯುತ್ ಬೆಲೆ ಗಣನೀಯವಾಗಿ ಏರುತ್ತಿದ್ದ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಿದ್ದದ್ದು ಕಂಡು ಬರುತ್ತಿತ್ತು.

ರಾಹುಲ್ ಗಾಂಧಿ
ನಾಲ್ಕು ತಾಸಿನ ವಿಳಂಬದ ನಂತರ ರಾಹುಲ್ ಗಾಂಧಿ ಸಭೆಗೆ ಬಂದವರು. ಸಭೆಗೆ ಸೇರಿದ್ದವರು ಕುರ್ಚಿ ಮೇಲೆ ಕೂತು ರಾಹುಲ್ ಪರ ಜಯಘೋಷ ಹಾಕಿದರು, ಕಾಂಗ್ರೆಸ್ ಕಾರ್ಯಕರ್ತರು ಆಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಅಂಗಡಿಗಳು ಬಂದ್
ಚುನಾವಾಣಾ ಸಭೆಯನ್ನು ಕಾಲಾ ಮಂದಿರ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಪಶ್ಚಿಮ ದೆಹಲಿಯ ಮಂಗೋಲ್ಪುರಿ ವ್ಯಾಪ್ತಿಯಲ್ಲಿ ಬರುವ ಈ ಮೈದಾನದ ಅಕ್ಕಪಕ್ಕದ ಅಂಗಡಿಗಳನ್ನು ಭದ್ರತೆಯ ಕಾರಣಕ್ಕಾಗಿ ಪೊಲೀಸರು ಬಂದ್ ಮಾಡಿದ್ದರು.












Click it and Unblock the Notifications