ಆತ್ಮೀಯ ಒಡನಾಡಿ ಅನಂತ್ ಕುಮಾರ್ ಅಗಲಿಕೆಗೆ ಕಣ್ಣೀರಾದ ಅಡ್ವಾಣಿ
ನವದೆಹಲಿ, ನವೆಂಬರ್ 12: ತಮ್ಮ ಆತ್ಮೀಯ ಒಡನಾಡಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನಕ್ಕೆ ಕಂಬನಿ ಮಿಡಿದ ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
"ಅನಂತ್ ಕುಮಾರ್ ಅವರ ಅಕಾಲಿಕ ಮರಣದಿಂದ ನನಗೆ ತೀವ್ರ ಆಘಾತ ಮತ್ತು ದುಃಖವಾಗಿದೆ. ಅವರೊಬ್ಬ ಜನಪ್ರಿಯ, ಕ್ರಿಯಾಶೀಲ ವ್ಯಕ್ತಿ. ಬಡವರ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಭಾವುಕರಾಗಿ ಅಡ್ವಾಣಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಅನಂತ್ ಕುಮಾರ್ ಅವರು ಲಾಲ್ ಕೃಷ್ಣ ಅಡ್ವಾಣಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಆತ್ಮೀಯ ಬಂಧ ಹೊಂದಿದ್ದವರು. ಅದೇ ಕಾರಣಕ್ಕಾಗಿಯೇ ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟಕ್ಕೇರಿದ ಕೆಲ ದಿನಗಳ ವರೆಗೆ ಅನಂತ್ ಕುಮಾರ್ ನಿರ್ಲಕ್ಷ್ಯಕ್ಕೊಳಗಾದರು ಎಂಬ ಮಾತೂ ಚಾಲ್ತಿಯಲ್ಲಿತ್ತು.ರಾಜಕೀಯ ವಲಯದಲ್ಲಿ ಅನಂತ್ ಕುಮಾರ್ ಅವರನ್ನು ಅಡ್ವಾಣಿ ಅವರ ಮಾನಸಪುತ್ರ ಎಂದೇ ಕರೆಯಲಾಗುತ್ತಿತ್ತು.

ರಾಜಕೀಯವಾಗಿ ಬಹುಬೇಗನೇ ಮೇಲೇರಿದ ಅನಂತ್ ಕುಮಾರ್ ಅಡ್ವಾಣಿ ಮತ್ತು ವಾಜಪೇಯಿ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು.
ಶ್ವಾಸಕೋಶ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ನೂರಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications