ದೆಹಲಿಗಿಲ್ಲ ಪೂರ್ಣರಾಜ್ಯದ ಸ್ಥಾನಮಾನ: ಯಾರು, ಏನಂದರು?
ನವದೆಹಲಿ, ಜುಲೈ 04: ಕೇಂದ್ರಾಡಳಿತ ಪ್ರದೇಶವಾಗಿರುವ ರಾಜಧಾನಿ ದೆಹಲಿಗೆ ರಾಜ್ಯದ ಸ್ಥಾನಮಾನ ಕೊಡುವುದಕ್ಕೆ ಸಾಧ್ಯವಿಲ್ಲ ಮತ್ತು ಲೆಫ್ಟಿನೆಂಟಗ ಗವರ್ನರ್ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ನ್ಯಾ.ಎ.ಕೆ.ಸಿಕ್ರಿ, ಎ ಎಂ ಕನ್ವಿಲ್ಕರ್, ನ್ಯಾ ಅಶೋಕ್ ಭೂಷಣ್ ಮತ್ತು ಡಿ ವೈ ಚಂದ್ರಚೂಡ್ ಇದ್ದರು.
ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವಿಲ್ಲ: ಸುಪ್ರೀಂ ಕೋರ್ಟ್
ಇತ್ತೀಚೆಗೆ ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಇಲ್ಲಿನ ಸರ್ಕಾರದ ನಡುವೆ ನಿರಂತರವಾಗಿ ಜಟಾಪಟಿ ನಡೆಯುತ್ತಿತ್ತು. ಈ ಸಂಬಂಧ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರದ ಜೊತೆ ಲೆಫ್ಟಿನೆಂಟ್ ಗವರ್ನರ್ ಸೌಹಾರ್ದ ಸಂಬಂಧ ಹೊಂದಿ, ಒಟ್ಟಾಗಿ ಕೆಲಸ ಮಾಡಬೇಕು ಎಂದಿದೆ. ಈ ನಿರ್ಧಾರವನ್ನು ಹಲವು ಮುಖಂಡರು ಸ್ವಾಗತಿಸಿದ್ದಾರೆ.
|
ದೆಹಲಿ ಜನರ ಬಹುದೊಡ್ಡ ಗೆಲುವು
ಈ ತೀರ್ಪು ದೆಹಲಿ ಜನರ ಬಹುದೊಡ್ಡ ಗೆಲುವು, ಪ್ರಜಾಪ್ರಭುತ್ವದ ಅತಿ ದೊಡ್ಡ ಗೆಲುವು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಈ ತೀರ್ಪು ಐತಿಹಾಸಿಕ
ಈ ತೀರ್ಪು ನಿಜಕ್ಕೂ ಐತಿಹಾಸಿಕ. ಇನ್ನು ಮೇಲೆ ದೆಹಲಿ ಸರ್ಕಾರ ಪ್ರತಿ ಕಡತವನ್ನೂ ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆಗೆ ಕಳಿಸುವುದಿಲ್ಲ. ಇನ್ನು ಮೇಲೆ ಕೆಲಸಗಳು ನಿಲ್ಲುವುದಿಲ್ಲ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಬಹುದೊಡ್ಡ ಗೆಲವು. ನಾನು ಸುಪ್ರೀಂ ಕೋರ್ಟಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ.
ಕಾಂಗ್ರೆಸ್ ಆಳುವಾಗ ಯಾವುದೇ ಸಂಘರ್ಷವಿರಲಿಲ್ಲ!
ಸುಪ್ರೀಂ ಕೊರ್ಟ್ ಹೇಳಿರುವುದುದ ಸ್ಪಷ್ಟವಾಗಿದೆ. ಸಂವಿಧಾನದ 239(AA) ವಿಧಿಯ ಪ್ರಕಾರ ದೆಹಲಿ ಒಂದು ರಾಜ್ಯವಲ್ಲ. ಅದು ಕೇಂದ್ರಾಡಳಿತ ಪ್ರದೇಶ. ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಒಟ್ಟಾಗಿ ಕೆಲಸ ಮಾಡದಿದ್ದರೆ ದೆಹಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾಂಗ್ರೆಸ್ 15 ವರ್ಷಗಳ ಕಾಲ ದೆಹಲಿಯನ್ನು ಆಳಿತ್ತು. ಆದರೆ ಆಗ ಇಂಥ ಯಾವುದೇ ಸಮಸ್ಯೆ ಬಂದಿರಲಿಲ್ಲ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ.
|
ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ
ಇದು ನಿಜಕ್ಕೂ ಉತ್ತಮ ತೀರ್ಪು. ಎಲ್ ಜಿ ಮತ್ತು ದೆಹಲಿ ಸರ್ಕಾರ ಒಟ್ಟಾಗಿ ಸೌಹಾರ್ದತೆಯಿಂದ ಕೆಲಸ ಮಾಡಬೇಕು. ಪ್ರತಿದಿನ ಕಚ್ಚಾಡುತ್ತಿರುವುದು ದೆಹಲಿಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ, ಮತು ಅದು ಪ್ರಜಾಪ್ರಭುತ್ವಕ್ಕೂ ಶ್ರೇಯಸ್ಸಲ್ಲ. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ.