ದೆಹಲಿಯಲ್ಲಿ ಯೋಧ ಹನುಮಂತಪ್ಪನಿಗೆ ಅಂತಿಮ ನಮನ
ನವದೆಹಲಿ, ಫೆಬ್ರವರಿ 11 : ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಸಾವನ್ನೂ ಕೆಲದಿನಗಳ ಕಾಲ ಮೆಟ್ಟಿ ನಿಂತ ಧೀರೋದಾತ್ತ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರಿಗೆ ದೆಹಲಿಯ ಕ್ಯಾಂಟೋನ್ಮೆಂಟ್ನಲ್ಲಿರುವ ಬ್ರಾರ್ ಸ್ಕ್ವೇರ್ ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಹನುಮಂತಪ್ಪ ಅವರ ಪಾರ್ಥಿವ ಶರೀರವನ್ನು ಬ್ರಾರ್ ಸ್ಕ್ವೇರ್ ನಲ್ಲಿ ಇಡಲಾಗಿದ್ದು, ಭಾರತದ ಭೂಸೇನೆ, ವಾಯಸೇನೆ ಮತ್ತು ನೌಕಾದಳದ ಕಮಾಂಡರ್ಗಳು, ಕರ್ತವ್ಯನಿರತನಾಗಿರುವಾಗಲೇ ಸಾವಿಗೀಡಾದ ಯೋಧನಿಗೆ ಸೆಲ್ಯೂಟ್ ಹೊಡೆದರು. ಹನುಮಂತಪ್ಪ ಅವರ ಕುಟುಂಬದ ಸದಸ್ಯರು ಕೂಡ ಈ ಸಮಯದಲ್ಲಿ ಹಾಜರಿದ್ದರು. [ಹನುಮಂತಪ್ಪ ನಿಧನಕ್ಕೆ ಭಾರತೀಯರಿಂದ ಕಂಬನಿಧಾರೆ]
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕಾರ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಂತಿಮ ನಮನ ಸಲ್ಲಿಸಿದರು. ಹನುಮಂತಪ್ಪ ರಿಸರ್ಚ್ ಅಂಡ್ ರೆಫರಲ್ ಆಸ್ಪತ್ರೆಯಲ್ಲಿರುವಾಗಲೇ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ನಮನ ಸಲ್ಲಿಸುವವರಿದ್ದರು.
ಹುಬ್ಬಳ್ಳಿಯಲ್ಲಿ ಅಂತಿಮ ನಮನ : ಪಾರ್ಥಿವ ಶರೀರ ಗುರುವಾರ ರಾತ್ರಿ 9 ಗಂಟೆ ಭಾರತೀಯ ಸೇನಾ ವಿಮಾನದ ಮೂಲಕ ಸುಮಾರಿಗೆ ಹುಬ್ಬಳ್ಳಿಗೆ ಬರಲಿದ್ದು, ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ಇಡಲಾಗುವುದು. ರಾಜ್ಯದ ಎಲ್ಲ ರಾಜಕಾರಣಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]
ಎರಡು ಗಂಟೆಗಳ ನಂತರ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಬೆಟದೂರಿಗೆ ತರಲಾಗುತ್ತಿದ್ದು, ಅಲ್ಲಿಯೂ ಸರಕಾರಿ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ಸಂಜೆ 6 ಗಂಟೆಗೆ ಗ್ರಾಮ ಪಂಚಾಯತ್ ಕಾರ್ಯಾಲಯದ ಪಕ್ಕದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು. [ಹುತಾತ್ಮರಾದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ]