ಕರ್ನಾಟಕದ ಫಲಿತಾಂಶವನ್ನು ಕೊಹ್ಲಿ ನೇತೃತ್ವದ ತಂಡಕ್ಕೆ ಹೋಲಿಸಿದ ಚಿದಂಬರಂ
ನವದೆಹಲಿ, ನವೆಂಬರ್ 6: ಕರ್ನಾಟಕದ ಉಪ ಚುನಾವಣೆಗಳ ಫಲಿತಾಂಶವು ಮೈತ್ರಿ ಮಾಡಿಕೊಳ್ಳುವ ಲಾಭವನ್ನು ತೋರಿಸಿಕೊಟ್ಟಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವಿಶ್ಲೇಷಿಸಿದ್ದಾರೆ.
ಅಲ್ಲದೆ, ಈ ಚುನಾವಣೆಯ ಫಲಿತಾಂಶವನ್ನು ಅವರು ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಕ್ರಿಕೆಟ್ ತಂಡಕ್ಕೆ ಹೋಲಿಕೆ ಮಾಡಿದ್ದಾರೆ. ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಜಯಭೇರಿ ಭಾರಿಸಿರುವುದನ್ನು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಐದು ಕ್ಷೇತ್ರಗಳಲ್ಲಿ ಬಿಜೆಪಿ ಒಂದರಲ್ಲಿ ಮಾತ್ರ ಗೆದ್ದಿದ್ದರೆ, ನಾಲ್ಕರಲ್ಲಿ ಮೈತ್ರಿಕೂಟಕ್ಕೆ ಜಯ ಸಿಕ್ಕಿದೆ. ಇದನ್ನು ಚಿದಂಬರಂ, ಕೊಹ್ಲಿ ನಾಯಕತ್ವದ ಟೆಸ್ಟ್ ಕ್ರಿಕೆಟ್ ತಂಡ ಇದೇ ರೀತಿ ಸರಣಿಯನ್ನು ಗೆಲುವು ಸಾಧಿಸುತ್ತದೆ ಎಂಬುದಕ್ಕೆ ಹೋಲಿಸಿದ್ದಾರೆ.
ಚಿದಂಬರಂ ಮಾಡಿರುವ ಹೋಲಿಕೆ ಭಾರತ ಕ್ರಿಕೆಟ್ ತಂಡದ ಸಾಮರ್ಥ್ಯದೊಂದಿಗೆ ಮಾಡಿರುವುದಾದರೂ, ವಾಸ್ತವವಾಗಿ ಇತ್ತೀಚೆಗೆ ಕೊಹ್ಲಿ ನಾಯಕತ್ವದ ತಂಡ ಇಂಗ್ಲೆಂಡ್ನಲ್ಲಿ 4-1ರಿಂದ ಟೆಸ್ಟ್ ಸರಣಿಯನ್ನು ಸೋತಿತ್ತು. ಹೀಗಾಗಿ ಇಲ್ಲಿ ಕೊಹ್ಲಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಚಿದಂಬರಂ ಅವರ ಟ್ವೀಟ್ ಅನ್ನು ಇಂಗ್ಲೆಂಡ್ ವಿರುದ್ಧ ಸರಣಿ ಸೋತ ಕೊಹ್ಲಿ ತಂಡಕ್ಕೆ ಹೋಲಿಸಿದಂತಿದೆ ಎಂದು ಬಿಜೆಪಿ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.
|
ಕೊಹ್ಲಿ ನೇತೃತ್ವದ ತಂಡ
'ಕರ್ನಾಟಕದಲ್ಲಿನ 4-1ರ ಗೆಲುವು ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಆಡುವ ಟೆಸ್ಟ್ ಸರಣಿಗೆ ತಕ್ಕಂತೆ ಇದೆ. ಇಲ್ಲಿ ನಾವು ಪಾಠ ಕಲಿಯುವುದಕ್ಕೆ ಇದೆ: ಮೈತ್ರಿಕೂಟಕ್ಕೆ ಇದರಿಂದ ಪ್ರಯೋಜನವಾಗಿದೆ' ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಚಿದಂಬರಂ ಹೇಳಿಕೆಗೆ ಅನೇಕರು ಶುಭಾಶಯದೊಂದಿಗೆ ಅನುಮೋದನೆ ನೀಡಿದ್ದಾರೆ. ಅನೇಕರು ಕರ್ನಾಟಕದ ವಿರಾಟ್ ಕೊಹ್ಲಿ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ದೇವೇಗೌಡ ಅವರನ್ನು ಹೋಲಿಸಿದ್ದಾರೆ.
|
ಭಾರತ ಸೋತಿದ್ದಲ್ಲವೇ?
ಆದರೆ, ಇದನ್ನು ಅನೇಕರು ಲೇವಡಿ ಮಾಡುವುದಕ್ಕೂ ಬಳಸಿದ್ದಾರೆ. ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ 4-1ರಿಂದ ಸೋಲು ಅನುಭವಿಸಿದ್ದನ್ನು ಕೆಲವರು ನೆನಪಿಸಿದ್ದಾರೆ.
|
ಇವಿಎಂ ಹ್ಯಾಕ್ ಆಗಿರಲಿಲ್ಲವೇ?
ಅನೇಕ ಚುನಾವಣೆಗಳಲ್ಲಿ ಸೋಲು ಅನುಭವಿಸಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷಗಳ ಅಭ್ಯರ್ಥಿಗಳು ವಿದ್ಯುನ್ಮಾನ ಮತ ಯಂತ್ರದಲ್ಲಿ ದೋಷ ಇದೆ ಎಂದು ಆರೋಪಿಸಿದ್ದರು. ಆದರೆ, ಈ ಐದೂ ಕಡೆ ಇವಿಎಂ ಮತಯಂತ್ರದ ಸಮಸ್ಯೆಯ ಬಗ್ಗೆ ಯಾವ ಸೊಲ್ಲೆದ್ದಿಲ್ಲ. ಇದನ್ನು ಚಿದಂಬರಂ ಅವರಿಗೆ ಅನೇಕರು ಕಿಚಾಯಿಸಲು ಬಳಸಿಕೊಂಡಿದ್ದಾರೆ. ಈ ಬಾರಿ ಇವಿಎಂ ಹ್ಯಾಕ್ ಆಗಿರಲಿಲ್ಲವೇ? ಎಂದು ಕೀಟಲೆ ಮಾಡಲು ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತ್ರ ಇವಿಎಂ ಹ್ಯಾಕ್ ಆಗಿತ್ತು. ಮಂಡ್ಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಮಾಡುವ ಆರೋಪಕ್ಕೆ ವ್ಯಂಗ್ಯ ಮಾಡಿದ್ದಾರೆ.
|
ಸಿಬಿಐ ಬಿಡುವುದಿಲ್ಲ
ಕರ್ನಾಟಕದಲ್ಲಿ ಗೆದ್ದೆವೆಂದು ಬೀಗಿದ ಕಾರಣಕ್ಕೆ ಏರ್ಸೆಲ್-ಮಾಕ್ಸಿಸ್ ಹಣ ಅಕ್ರಮ ಪ್ರಕರಣದಿಂದ ನೀವು ಮತ್ತು ನಿಮ್ಮ ಮಗ ತಪ್ಪಿಸಿಕೊಳ್ಳಲು ಸಿಬಿಐ ಬಿಡುವುದಿಲ್ಲ ಎಂದು ಟ್ವಿಟ್ಟಿಗರೊಬ್ಬರು ಲೇವಡಿ ಮಾಡಿದ್ದಾರೆ.












Click it and Unblock the Notifications