ದೆಹಲಿ ಹಿಂಸಾಚಾರ: ನ್ಯಾ.ಮುರಳೀಧರ್ ವರ್ಗಾವಣೆ ಬಗ್ಗೆ ಅಮಿತ್ ಶಾ ಮಾತು
ನವದೆಹಲಿ, ಮಾರ್ಚ್.12: ದೆಹಲಿ ಹಿಂಸಾಚಾರ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಳಿಸಿದ್ದು ಸಹಜ ಪ್ರಕ್ರಿಯೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ದೆಹಲಿ ಹಿಂಸಾಚಾರ ಮತ್ತು ನಂತರದ ನಡೆದ ಬೆಳವಣಿಗೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಿದರು. ಕೇಂದ್ರ ಸರ್ಕಾರವು ವರ್ಗಾವಣೆ ಆದೇಶವನ್ನಷ್ಟೇ ಹೊರಡಿಸಿದೆ. ಆದರೆ, ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದು ಕೊಲಿಜಿಯಂ ಎಂದು ತಿಳಿಸಿದರು.
ನ್ಯಾ.ಮುರಳೀಧರ್ ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದ್ದು, ಅದಕ್ಕೂ ಯಾವುದೇ ಪ್ರಕರಣಕ್ಕೂ ನಂಟಿಲ್ಲ. ಅಲ್ಲದೇ ವರ್ಗಾವಣೆಗೆ ಸ್ವತಃ ನ್ಯಾಯಮೂರ್ತಿ ಮುರಳೀಧರ್ ಅವರೇ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಒಬ್ಬ ನ್ಯಾಯಮೂರ್ತಿಯಿಂದಷ್ಟೇ ನ್ಯಾಯ ಸಿಗುತ್ತದೆಯೇ?:
ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸುವ ಹಿಂದಿನ ಉದ್ದೇಶವಾದರೂ ಏನು. ಒಬ್ಬ ನ್ಯಾಯಮೂರ್ತಿಯಿಂದಷ್ಟೇ ನ್ಯಾಯ ಸಿಗುತ್ತದೆಯೇ. ಒಬ್ಬ ನ್ಯಾಯಮೂರ್ತಿಯ ಮೇಲೆಯೇ ಏಕೆಷ್ಟು ಅವಲಂಬಿಸಬೇಕು, ಬೇರೆ ನ್ಯಾಯಮೂರ್ತಿಗಳನ್ನು ಏಕೆ ನೀವು ನಂಬುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಕಳೆದ ಫೆಬ್ರವರಿ.26ರ ಬುಧವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ದೆ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಜೊತೆ ನಡೆಸಿದ ಸಮಾಲೋಚನೆ ಬಳಿಕ ನ್ಯಾಯಮೂರ್ತಿ ಎಸ್.ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲಾಗಿತ್ತು.












Click it and Unblock the Notifications