ನ್ಯಾಯಾಂಗ ಶ್ರೀಮಂತರ ಪರ, ನನ್ನಂಥವರಿಗಲ್ಲ: ನಿರ್ಭಯಾ ಅತ್ಯಾಚಾರ ಅಪರಾಧಿ ಆರೋಪ
ನವದೆಹಲಿ, ಜನವರಿ 9: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮಾ, ನ್ಯಾಯಾಂಗ ವ್ಯವಸ್ಥೆಯು ಬಡವರ ವಿರುದ್ಧ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾನೆ.
Recommended Video
ತನಗೆ ವಿಧಿಸಲಾಗಿರುವ ಗಲ್ಲುಶಿಕ್ಷೆ ವಿರುದ್ಧ ಸುಪ್ರೀಂಕೋರ್ಟ್ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿರುವ ವಿನಯ್ ಕುಮಾರ್, ತೆರೆದ ನ್ಯಾಯಾಲಯದಲ್ಲಿ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳು ತನ್ನ ಪ್ರಕರಣವನ್ನು ಪುನರ್ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದಾನೆ.
ಅಪರಾಧಿ ಬಳಿ ಉಳಿದಿರುವ ಕೊನೆಯ ಕಾನೂನಾತ್ಮಕ ಆಯ್ಕೆಯಾದ ಕ್ಯುರೇಟಿವ್ ಅರ್ಜಿಯಲ್ಲಿ ವಿನಯ್ ಕುಮಾರ್ ಶರ್ಮಾ, ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ್ದಾನೆ. ಪ್ರತಿರೋಧ ಒಡ್ಡಲು ಶಕ್ತಳಾಗಿಲ್ಲದ ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಅಪ್ರಚೋದಿತ ಹತ್ಯೆ ಮಾಡಿದ ಸಿದ್ಧಾರ್ಥ ವಸಿಷ್ಠ/ಮನುಶರ್ಮನಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆಯೇ ಹೊರತು ಮರಣದಂಡನೆಯಲ್ಲ ಎಂದು ಹೇಳಿದ್ದಾನೆ.

ಬಡವರು ಮತ್ತು ದುರ್ಬಲರಿಗೆ ಕೆಟ್ಟ ಶಿಕ್ಷೆ
'ಜೆಸ್ಸಿಕಾ ಲಾಲ್ ಪ್ರಕರಣದ ಅಪರಾಧಿಯು ರಾಜಕೀಯ ಕುಟುಂಬದಿಂದ ಬಂದ ಪ್ರಭಾವಶಾಲಿ ವ್ಯಕ್ತಿ. ಅರ್ಜಿದಾರರ ಪ್ರಕರಣ ಮತ್ತು ಆ ಪ್ರಕರಣವನ್ನು ಗಮನಿಸಿದಾಗ ಅಸಮಾನತೆಯು ಮುಖ್ಯವಾಗಿ ಕಾಣಿಸುತ್ತದೆ. ಅಪರಾಧ ನ್ಯಾಯಾಂಗ ವ್ಯವಸ್ಥೆಯಲ್ಲಿ ಇತರೆ ವರ್ಗದ ಅಪರಾಧಿಗಳು ಅತ್ಯಂತ ಹೀನ ಮತ್ತು ಬರ್ಬರ ಕೃತ್ಯ ಎಸಗಿದ್ದರೂ ಬಡವರು ಮತ್ತು ದುರ್ಬಲರು ಯಾವಾಗಲೂ ಕೆಟ್ಟ ಶಿಕ್ಷೆಯನ್ನು ಅನುಭವಿಸುತ್ತಾರೆ. ಇದು ಬಡವರ ವಿರುದ್ಧದ ವ್ಯವಸ್ಥಿತ ಪಕ್ಷಪಾತವು ಅರ್ಜಿದಾರನ ಮೇಲೆಯೂ ನಡೆದಿದೆ ಎಂಬುದನ್ನು ಸೂಚಿಸುತ್ತದೆ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮರಣದಂಡನೆಯಿಂದ ಜೀವಾವಧಿಗೆ ಪರಿವರ್ತನೆ
ಈಗ ವಿಧಿಸಲಾಗಿರುವ ಶಿಕ್ಷೆಯು ಸೂಕ್ತವಾಗಿಲ್ಲ. ತನ್ನಂತೆಯೇ ಮರಣದಂಡನೆಗೆ ಒಳಗಾದ ಅನೇಕ ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ಅದೇ ರೀತಿ ತನ್ನ ಶಿಕ್ಷೆಯನ್ನೂ ಬದಲಿಸಬೇಕು ಎಂದು ಕೋರಿದ್ದಾನೆ. ಸುಪ್ರೀಂಕೋರ್ಟ್ 2017ರಲ್ಲಿ ತನ್ನ ಶಿಕ್ಷೆ ತೀರ್ಪು ಪ್ರಕಟಿಸಿದ ನಂತರ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ 17 ಪ್ರಕರಣಗಳಲ್ಲಿನ ಮರಣದಂಡನೆಗಳನ್ನು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ವಿವಿಧ ಪೀಠಗಳು ರದ್ದುಗೊಳಿಸಿವೆ ಎಂದು ವಾದಿಸಿದ್ದಾನೆ.

ಜ.22ರಂದು ಗಲ್ಲುಶಿಕ್ಷೆ
ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್ (32). ಪವನ್ ಗುಪ್ತಾ (25), ವಿನಯ್ ಶರ್ಮಾ (26) ಅಕ್ಷಯ್ ಕುಮಾರ್ ಸಿಂಗ್ (31) ಅವರಿಗೆ ಜ.22ರ ಬೆಳಿಗ್ಗೆ ಏಳು ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲುಶಿಕ್ಷೆ ಜಾರಿಮಾಡುವಂತೆ ಮಂಗಳವಾರ ಆದೇಶ ಹೊರಡಿಸಿದೆ. ಒಂದು ವೇಳೆ ಸುಪ್ರೀಂಕೋರ್ಟ್ ವಿನಯ್ ಕುಮಾರ್ ಶರ್ಮಾ ಅರ್ಜಿಯನ್ನು ಪರಿಗಣಿಸಿದರೆ ಗಲ್ಲುಶಿಕ್ಷೆ ಜಾರಿಗೆ ತಡೆಬೀಳುವ ಸಾಧ್ಯತೆ ಇದೆ.

ಅಪರಾಧಿಗೆ ಅಂತಿಮ ಆಯ್ಕೆ
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ಯುರೇಟಿವ್ ಅರ್ಜಿ ಅಪರಾಧಿಗಳಿಗೆ ಇರುವ ಅಂತಿಮ ಆಯ್ಕೆಯಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕಾರ ಮಾಡಿದರೆ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದಾಗಿದೆ. ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯನ್ನು ಎಂದು ನಡೆಸಲಿದೆ ಎಂಬುದು ಇನ್ನೂ ಅಂತಿಮವಾಗಿಲ್ಲ.












Click it and Unblock the Notifications