ಕೃಷಿ ಸಂಬಂಧಿತ ಕಾಯ್ದೆ: ರಾಜೀನಾಮೆಗೆ ಸಿದ್ಧರಾದ ಇಬ್ಬರು ಶಾಸಕರು!
ನವದೆಹಲಿ, ಸಪ್ಟೆಂಬರ್.20: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಮಸೂದೆಗಳ ವಿರುದ್ಧ ಹರಿಯಾಣದಲ್ಲಿ ಪ್ರತಿಭಟನೆ ಕಿಚ್ಚು ಹೊತ್ತಿಕೊಂಡಿದೆ. ರೈತರ ಹೋರಾಟಕ್ಕೆ ಜನನಾಯಕ ಜನತಾ ಪಕ್ಷ(ಜೆಜೆಪಿ)ದ ಇಬ್ಬರು ಶಾಸಕರು ಕೈ ಜೋಡಿಸಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಜೊತೆಗೆ ಜೆಜೆಪಿ ಮೈತ್ರಿ ಸರ್ಕಾರವನ್ನು ರಚಿಸಿದ್ದು, ದುಶ್ಯಂತ್ ಚೌತಾಲಾ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಜೆಜೆಪಿಯ ಇಬ್ಬರು ಶಾಸಕರು ಬಿಜೆಪಿ ವಿರುದ್ಧ ರೈತರ ಪರವಾಗಿ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ.
ಬರವಾಲಾ ವಿಧಾನಸಭಾ ಕ್ಷೇತ್ರದ ಜೆಜೆಪಿ ಶಾಸಕ ಜೋಗಿ ರಾಮ್ ಸಿಹಾಗ್ ಮತ್ತು ಶಹಾಬಾದ್ ಕ್ಷೇತ್ರದ ಶಾಸಕ ರಾಮ ಕರಣ್ ಕಲಾ ಅವರು ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅಗತ್ಯ ಬಿದ್ದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ರೈತರಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಿದ್ಧ
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ಹಿಸಾರ್ ಜಿಲ್ಲೆ ಸರಸೋದಾ ಗ್ರಾಮದ ಬಳಿ ಶಾಸಕ ಜೋಗಿ ರಾಮ್ ಸಿಹಾಗ್ ರೈತರೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸಿದರು. ಹಿಸಾರ್ ಮತ್ತು ಚಂಡೀಗಢ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಶಾಸಕ ಜೋಗಿ ರಾಮ್ ಸಿಹಾಗ್ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ವಿಧಾನಸಭಾ ಕ್ಷೇತ್ರದ ರೈತರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಲ್ಲಿ, ರೈತರ ಪರವಾನಿ ನಿಂತುಕೊಳ್ಳಲು ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಸಿದ್ಧ" ಎಂದು ತಿಳಿಸಿದ್ದಾರೆ.

ಬೆಳೆಯನ್ನು ರೈತರು ಮನೆಗಳಲ್ಲಿ ಇಡಲು ಸಾಧ್ಯವೇ?
"ದೇಶದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಮನೆಗಳಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಬೆಳೆಯನ್ನು ಸಂಗ್ರಹಿಸಿಟ್ಟುಕೊಳ್ಳುವಷ್ಟು ಜಾಗವು ರೈತರ ಮನೆಗಳಲ್ಲಿ ಇರುವುದಿಲ್ಲ. ನಿಗದಿತ ಮಿತಿಯನ್ನು ತೆಗೆದು ಹಾಕಿದ ನಂತರದಲ್ಲಿ ಬಂಡವಾಳ ಶಾಹಿಗಳು ಗೋಧಿ ಮತ್ತು ಭತ್ತವನ್ನು ಖರೀದಿಸುತ್ತಾರೆ. ಮಂಡಿಗಳಲ್ಲೂ ರೈತರು ಬೆಳೆದ ಉತ್ಪನ್ನಗಳು ಸಿಗುವುದಿಲ್ಲ. ಬಳಿಕ ಒಂದು ಕೆಜಿಗೆ 500 ರೂಪಾಯಿ ನೀಡಿ ಖರೀದಿಸುವಂತಾ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಾಮಾನ್ಯ ರೈತರು ಮತ್ತು ಮಧ್ಯಮ ವರ್ಗದ ಜನರು ಅಷ್ಟೊಂದು ಹಣವನ್ನು ನೀಡಿ ಖರೀದಿಸಲು ಸಾಧ್ಯವಾಗುತ್ತದೆಯೇ" ಎಂದು ಶಾಸಕ ಜೋಗಿ ರಾಮ್ ಸಿಹಾಗ್ ಪ್ರಶ್ನೆ ಮಾಡಿದ್ದಾರೆ.

ಬಂಡವಾಳಶಾಹಿಗಳಿಂದ ಮಂಡಿಗೆ ಅಪಾಯ
"ಸದ್ಯದ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರಿಂದ ಮಂಡಿಯ 'ಅರ್ಥಿಯಾಸ್' ಬೆಳೆಯನ್ನು ಖರೀದಿಸುತ್ತಾರೆ. ಬಳಿಕ ಸರ್ಕಾರದ ನಿಗದಿತ ಬೆಲೆಗೆ ಉತ್ಪನ್ನಗಳನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಬಂಡವಾಳ ಶಾಹಿ ವ್ಯವಸ್ಥೆಯಿಂದ ಮಂಡಿಗಳಲ್ಲಿ 'ಅರ್ಥಿಯಾಸ್' ಇರುವುದಿಲ್ಲ. ಕಷ್ಟದ ಸಂದರ್ಭಗಳಲ್ಲಿ ರೈತರಿಗೆ ಮುಂಗಡ ಹಣವನ್ನು ನೀಡುವ ಮಂಡಿಗಳಲ್ಲಿನ 'ಅರ್ಥಿಯಾಸ್' ಗಳೇ ಉದ್ಯೋಗ ಕಳೆದುಕೊಳ್ಳುತ್ತಾರೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಒಂದು ಮತ್ತು ಎರಡು ಚೀಲಗಳ ಲೆಕ್ಕದಲ್ಲಿ ಅಲ್ಪ ಪ್ರಮಾಣದ ಬೆಳೆ ಮಾರಾಟ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಮಂಡಿ ವ್ಯವಸ್ಥೆಗೆ ಅಪಾಯ ಎದುರಾಗಲಿದೆ. ರೈತರಿಗೂ ತುರ್ತು ಪರಿಸ್ಥಿತಿ ನಿರ್ವಹಣೆ ಕಷ್ಟವಾಗುತ್ತದೆ" ಎಂದು ಶಾಸಕರು ಆರೋಪಿಸಿದ್ದಾರೆ.

ಕೃಷಿ ಸಂಬಂಧಿತ ಮಸೂದೆಯಿಂದ ಮೇಲ್ಮನೆಯಲ್ಲಿ ಗದ್ದಲ-ಗಲಾಟೆ
ಪ್ರತಿಪಕ್ಷಗಳ ತೀವ್ರ ವಿರೋಧ ಮತ್ತು ಗದ್ದಲದ ನಡುವೆ ಕೃಷಿ ಸಂಬಂಧಿತ ಮೂರು ಮಸೂದೆಗಳ ಪೈಕಿ ಎರಡು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಭಾನುವಾರ ಅಂಗೀಕರಿಸಲಾಯಿತು. ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಮಸೂದೆ ಅಂಗೀಕರಿಸುವಷ್ಟೇ ಸಂಖ್ಯಾಬಲವನ್ನು ಹೊಂದಿಲ್ಲ. ಹೀಗಿದ್ದರೂ ಎಲ್ಲ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ವಿರೋಧ ಪಕ್ಷಗಳು ದೂಷಿಸಿದವು.












Click it and Unblock the Notifications