ದಿಲ್ಲಿಯಲ್ಲಿ ಜೆಸಿಬಿ ಘರ್ಜನೆ; JCB ಎಂದರೆ "ಜಿಹಾದ್ ಕಂಟ್ರೋಲ್ ಬೋರ್ಡ್"!
ನವದೆಹಲಿ, ಏಪ್ರಿಲ್ 20: ದೆಹಲಿಯ ಜಹಾಂಗೀರ್ಪುರಿಯಲ್ಲಿ ಉತ್ತರ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಪ್ರಾರಂಭಿಸಿದ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಬಿಜೆಪಿ ಸಂಸದ ನರಸಿಂಹ್ ರಾವ್ ತನ್ನವೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಜೆಸಿಬಿಯು ಬುಲ್ಡೋಜರ್ ಅನ್ನು ಸೂಚಿಸುತ್ತದೆ. ಜೆಸಿಬಿ ಎಂದರೆ ಜಿಹಾದ್ ಕಂಟ್ರೋಲ್ ಬೋರ್ಡ್(ಜಿಹಾದ್ ನಿಯಂತ್ರಣ ಮಂಡಳಿ) ಎಂದು ದೆಹಲಿ ಬಿಜೆಪಿ ಸಂಸದ ನರಸಿಂಹ ರಾವ್ ಟ್ವೀಟ್ ಮಾಡಿದ್ದಾರೆ. ಆ ಮೂಲಕ ದೆಹಲಿ ಮಹಾನಗರ ಪಾಲಿಕೆ ನಡೆಸುತ್ತಿರುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ತಮ್ಮದೇ ಆಗಿರುವ ರಾಜಕೀಯದ ದೃಷ್ಟಿಕೋನದಲ್ಲಿ ವಿಭಿನ್ನ ಮತ್ತು ವಿಶಿಷ್ಟವಾಗಿ ವ್ಯಾಖ್ಯಾನಿಸಿದ್ದಾರೆ.
ಬಿಜೆಪಿ ಸಂಸದ ನರಸಿಂಹ ರಾವ್ ಮಾಡಿರುವ ಟ್ವೀಟ್ ಹಿಂದಿನ ಮರ್ಮವೇನು?, ದೆಹಲಿಯಲ್ಲಿ ದಿಢೀರ್ ಜೆಸಿಬಿ ಸದ್ದು ಮಾಡುವುದಕ್ಕೆ ಮೂಲ ಕಾರಣವೇನು?, ಬಿಜೆಪಿಯ ಆ ನಾಯಕರು ನೀಡಿದ ಹೇಳಿಕೆಗೂ, ಇಂದು ನಡೆದ ತೆರವು ಕಾರ್ಯಾಚರಣೆಗೂ ಲಿಂಕ್ ಇದೆಯಾ?, ಸುಪ್ರೀಂಕೋರ್ಟ್ ತಡೆಯಾಜ್ಞೆಯ ಬಳಿಕ ದೆಹಲಿಯಲ್ಲಿ ಹೇಗಿದೆ ವಾತಾವರಣ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಸುಪ್ರೀಂಕೋರ್ಟ್ನಲ್ಲಿ ಗುರುವಾರ ವಿಚಾರಣೆ
ಬುಧವಾರ ದೆಹಲಿ ಮಹಾನಗರ ಪಾಲಿಕೆಯು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಶುರು ಮಾಡಿತ್ತು. ಪಾಲಿಕೆ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವುದರ ಮಧ್ಯೆ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.
ದೆಹಲಿಯ ಜಹಾಂಗೀರ್ಪುರಿಯಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಕಾರ್ಯಾಚರಣೆ ಮುಂದುವರಿಸದಂತೆ ತಡೆ ನೀಡಿದೆ. ಈ ಸ್ಥಳದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದು, ಗುರುವಾರ ಮತ್ತೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ದೆಹಲಿ ಅಕ್ರಮ ಕಟ್ಟಡ ತೆರವುಗೊಳಿಸಲು ಅಭಿಯಾನ
ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅತಿಕ್ರಮಣ ವಿರೋಧಿ ಅಭಿಯಾನ ಘೋಷಿಸಿದ್ದು, ಮಂಗಳವಾರ ಈ ಪ್ರದೇಶದಲ್ಲಿ ಭಾರೀ ಪೊಲೀಸ್ ನಿಯೋಜನೆ ಮಾಡುವಂತೆ ಕೋರಲಾಗಿತ್ತು. ಶನಿವಾರ ಜಹಾಂಗೀರ್ಪುರಿಯಲ್ಲಿ ನಡೆದ ಕೋಮುಗಲಭೆಯ ಆರೋಪಿಗಳು 'ಅಕ್ರಮ ನಿರ್ಮಾಣಗಳಲ್ಲಿ' ವಾಸಿಸುತ್ತಿದ್ದಾರೆ. ಅವುಗಳನ್ನು ನೆಲಸಮಗೊಳಿಸಬೇಕು ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಒತ್ತಾಯಿಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಪಾಲಿಕೆಯು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.

ದೆಹಲಿಯ ಜಹಾಂಗೀರ್ಪುರಿಯಲ್ಲಿ ಬಿಗಿ ಪೊಲೀಸ್ ಭದ್ರತೆ
ಕಳೆದ ಶನಿವಾರ ಎರಡು ಕೋಮಗಳ ನಡುವೆ ಘರ್ಷಣೆಗೆ ಸಾಕ್ಷಿಯಾಗಿದ್ದ ದೆಹಲಿ ಜಹಾಂಗೀರ್ಪುರಿಯಲ್ಲೇ ಬುಧವಾರ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಮಹಾನಗರ ಪಾಲಿಕೆಯು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿತ್ತು. ಹೀಗಾಗಿ ತೆರವು ಕಾರ್ಯಾಚರಣೆ ನಡೆಯುವ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
Recommended Video

ಶನಿವಾರ ನಡೆದ ಎರಡು ಕೋಮಗಳ ನಡುವಿನ ಹಿಂಸಾಚಾರ
ದೆಹಲಿಯ ಜಹಾಂಗೀರ್ಪುರಿಯಲ್ಲಿ ಶನಿವಾರ ಸಂಜೆ ವೇಳೆಗೆ ಹನುಮಾನ್ ಜಯಂತಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆಯಿತು. ಪರಸ್ಪರ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎರಡು ಕೋಮುಗಳ ಜನರು ಕಲ್ಲುತೂರಾಟ ನಡೆಸಿದರು. ಈ ವೇಳೆ 9 ಜನರಿಗೆ ಗಾಯಗಳಾಗಿದ್ದು, ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದರು. ಸಂಜೆ 6 ಗಂಟೆ ವೇಳೆಗೆ ಕಲ್ಲುತೂರಾಟ ನಡೆಸುವುದರ ಜೊತೆಗೆ ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಶನಿವಾರವೇ 23 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದರು.












Click it and Unblock the Notifications