ಆರೋಗ್ಯ ಸೇತು ಬಳಕೆದಾರರ ಮಾಹಿತಿ ಪೊಲೀಸರಿಗೆ ಏಕೆ ಬೇಕು?; ಆರ್ಟಿಐ ಅರ್ಜಿದಾರ
ನವದೆಹಲಿ, ಮಾರ್ಚ್ 31: ಜಮ್ಮು ಮತ್ತು ಕಾಶ್ಮೀರ ಆಡಳಿತವು ಪೊಲೀಸ್ ಇಲಾಖೆಯೊಂದಿಗೆ ಆರೋಗ್ಯ ಸೇತು ಬಳಕೆದಾರರ ವೈಯಕ್ತಿಕ ಆರೋಗ್ಯ ಮಾಹಿತಿ ಹಂಚಿಕೊಳ್ಳುವ ಮೂಲಕ ಗೌಪ್ಯತೆ ಉಲ್ಲಂಘಿಸಿದೆ ಎಂದು ಆರ್ಟಿಐ ಅರ್ಜಿದಾರರೊಬ್ಬರು ದೂರಿದ್ದಾರೆ.
ಜಮ್ಮು ಕಾಶ್ಮೀರ ಆಡಳಿತವು ಕುಲಗಾಂ ಪೊಲೀಸರೊಂದಿಗೆ ಈ ಮಾಹಿತಿ ಹಂಚಿಕೊಂಡಿದ್ದು, ಇದರ ಉದ್ದೇಶವನ್ನು ಸ್ಪಷ್ಟಪಡಿಸಿಲ್ಲ ಎಂದು ತಿಳಿದುಬಂದಿದೆ.
ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ, ಸೋಂಕಿತರ ಪತ್ತೆಗೆ, ಕೊರೊನಾ ಹೆಚ್ಚಿರುವ ವಲಯ, ಹಾಟ್ಸ್ಪಾಟ್ ಪ್ರದೇಶದ ಮಾಹಿತಿಗಾಗಿ ಕೇಂದ್ರ ಸರ್ಕಾರ ಆರೋಗ್ಯ ಸೇತು ಆಪ್ ಬಿಡುಗಡೆ ಮಾಡಿತ್ತು. ಇದರಲ್ಲಿನ ಬಳಕೆದಾರರ ದತ್ತಾಂಶವನ್ನು ಹಂಚಿಕೊಳ್ಳದಂತೆ ಈ ಮುನ್ನವೂ ಹಲವು ಬಾರಿ ನ್ಯಾಯಾಲಯದ ಮುಂದೆ ಅರ್ಜಿಗಳು ಬಂದಿದ್ದವು. ಆದರೆ ಮಾಹಿತಿ ಹಂಚಿಕೊಳ್ಳುವ ಮೂಲಕ ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸಲಾಗುತ್ತಿದೆ. ಜಮ್ಮು ಹಾಗೂ ಕಾಶ್ಮೀರ ಆಡಳಿತ ಪೊಲೀಸರೊಂದಿಗೆ ಆರೋಗ್ಯ ಸೇತು ಬಳಕೆದಾರರ ಮಾಹಿತಿ ಹಂಚಿಕೊಂಡಿದೆ. ಪೊಲೀಸರಿಗೆ ಈ ಮಾಹಿತಿ ಏಕೆ ಬೇಕು ಎಂದು ಸೌರವ್ ದಾಸ್ ಎಂಬುವರು ಪ್ರಶ್ನಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ, ಆರೋಗ್ಯ ಸೇತು ಬಳಕೆದಾರರ ಮಾಹಿತಿ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮದ ಕುರಿತು ನ್ಯಾಷನಲ್ ಇನ್ಫರ್ಮಾಟಿಕ್ ಸೆಂಟರ್ಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದೆ. ಆದರೆ ಇದಕ್ಕೆ ಶೀಘ್ರ ಉತ್ತರ ಬರಲಿಲ್ಲ. ಬದಲು, ಈ ಅರ್ಜಿಗೆ ಉತ್ತರಿಸುವಂತೆ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತಕ್ಕೆ ಸೂಚಿಸಲಾಗಿತ್ತು ಎಂದು ದಾಸ್ ತಿಳಿಸಿದ್ದಾರೆ.
ಲಕ್ಷಾಂತರ ಭಾರತೀಯರ ವೈಯಕ್ತಿಕ ಹಾಗೂ ಸೂಕ್ಷ್ಮ ಮಾಹಿತಿ ರಕ್ಷಣೆ ಕುರಿತು ಎನ್ಐಸಿ ಸ್ವತಃ ಯಾವುದೇ ಕ್ರಮಗಳನ್ನು ಹೊಂದಿಲ್ಲ. ತನ್ನ ಜವಾಬ್ದಾರಿಯನ್ನು ನಿರ್ವಹಿಸಿಲ್ಲ. ಈ ಮಾಹಿತಿಯನ್ನು ಕೇವಲ ಆರೋಗ್ಯ ಇಲಾಖೆ ಬಳಸಿಕೊಳ್ಳಬಹುದು. ಆದರೆ ಹೀಗಾಗುತ್ತಿಲ್ಲ. ಇನ್ನಿತರ ರಾಜ್ಯಗಳೂ ಈ ಮಾಹಿತಿ ಬಳಸಿಕೊಳ್ಳಬಹುದು ಎಂಬ ಆತಂಕವಿದೆ ಎಂದು ಹೇಳಿದ್ದಾರೆ.
2020ರ ಮೇ 11ರಂದು ಮಾಹಿತಿ ಸಚಿವಾಲಯ, ಆರೋಗ್ಯ ಸೇತು ಬಳಕೆದಾರರ ದತ್ತಾಂಶ ರಕ್ಷಣೆ ಕುರಿತು ಕಾರ್ಯಸೂಚಿ ಬಿಡುಗಡೆಗೊಳಿಸಿತ್ತು. ನಂತರ ಯಾರೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು ಎಂಬುದರ ಪಟ್ಟಿ ನೀಡಿತ್ತು. ಕೊರೊನಾ ನಿಯಂತ್ರಣ ಸಂಬಂಧ ಮಾತ್ರ ಮಾಹಿತಿ ಹಂಚಿಕೊಳ್ಳಬಹುದು ಎಂದು ತಿಳಿಸಿತ್ತು. ಆದರೆ ಈ ಕಾರ್ಯಸೂಚಿಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದಾಸ್ ದೂರಿದ್ದಾರೆ. ಕಾನೂನು ಸಂಸ್ಥೆಗಳಿಗೆ ಈ ಮಾಹಿತಿಯ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.