ಜಹಾಂಗೀರಪುರಿ ಹಿಂಸಾಚಾರ: ದಾಖಲೆಗಳಿದ್ದರೂ ಅಂಗಡಿಗಳ ಮೇಲತ್ತಿದ ಬುಲ್ಡೋಜರ್
ನವ ದೆಹಲಿ ಏಪ್ರಿಲ್ 20: 'ನನ್ನ ಬಳಿ ದಾಖಲಾತಿಗಳಿದ್ದವು. ಆದರೂ, ನನ್ನ ಅಂಗಡಿಯನ್ನು ಧ್ವಂಸಗೊಳಸಿದ್ದಾರೆ. ಜ್ಯೂಸ್ ಅಂಗಡಿಯಿಂದ ಬರುವ ಹಣದಿಂದ ನಾನು ಜೀವನ ನಡೆಸುತ್ತಿದ್ದೆ' ಎಂದು ಜಹಾಂಗೀರಪುರಿಯಲ್ಲಿ ಬುಲ್ಡೋಜರ್ನಿಂದ ಧ್ವಂಸಗೊಂಡ ಜ್ಯೂಸ್ ಅಂಗಡಿ ಮಾಲೀಕ ಗಣೇಶ್ ಕಣ್ಣೀರು ಹಾಕಿದ್ದಾರೆ.
ರಾಜಧಾನಿ ದೆಹಲಿಯ ಹಿಂಸಾಚಾರ ಪೀಡಿತ ಜಹಾಂಗೀರ್ಪುರಿ ಪ್ರದೇಶದಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್ಡಿಎಂಸಿ), ಪಿಡಬ್ಲ್ಯೂಡಿ ಮತ್ತು ಪೊಲೀಸರ ಅತಿಕ್ರಮಣ ವಿರೋಧಿ ಅಭಿಯಾನವು ಸ್ಥಗಿತಗೊಳಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತೆರವು ಕಾರ್ಯಚರಣೆಯನ್ನು ನಿಲ್ಲಿಸಲಾಗಿದೆ. ಆದರೆ ತೆರವು ಕಾರ್ಯಚರಣೆಯಿಂದ ಸ್ಥಳದಲ್ಲಿದ್ದ ಜನರು ತಮಗಾದ ಸಂಕಷ್ಟವನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುವ ಗಣೇಶ್ ಗುಪ್ತಾ ಅವರು ನಮಗಾದ ನಷ್ಟವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. 'ನಮ್ಮ ಬಳಿ ಪೇಪರ್ಗಳಿದ್ದವು, ಆದರೂ ಅವರು ನನ್ನ ಜ್ಯೂಸ್ ಅಂಗಡಿಯನ್ನು ಒಡೆದು ಹಾಕಿದ್ದಾರೆ. ನನ್ನ ಕೆಲಸವೇ ನನ್ನ ಜೀವನ ನಡೆಸುತ್ತಿತ್ತು' ಎಂದು ಅವರು ಅಳಲು ತೋಡಿಕೊಮಡಿದ್ದಾರೆ.

ಅಧಿಕಾರಿಗಳ ಮೇಲೆ ಶಾಪ ಹಾಕಿದ ಸ್ಥಳೀಯರು
ಇಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೊಲೀಸರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಆಡಳಿತ ಸಿಬ್ಬಂದಿ ಬುಲ್ಡೋಜರ್ಗಳನ್ನು ತಂದು ಒಂದರ ಹಿಂದೆ ಒಂದರಂತೆ ಅಂಗಡಿಗಳನ್ನು ಒಡೆದು ಹಾಕಿದ್ದಾರೆ ಎಂದು ದೆಹಲಿಯ ಜಹಾಂಗೀರ್ಪುರಿ ನಿವಾಸಿ ಗಣೇಶ್ ಗುಪ್ತಾ ಹೇಳುತ್ತಾರೆ. ಅಕ್ರಮ ಕಟ್ಟಡಗಳನ್ನು ಕೆಡವಲು ಅವರು ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ ಎಂದು ಕರೆಯುತ್ತಿದ್ದಾರೆ, ಆದರೆ ನಮ್ಮ ಬಳಿ ಕಾಗದಗಳಿವೆ. ಅನುಮತಿ ಪಡೆಯಲಾಗಿದೆ. ಇದರ ಹೊರತಾಗಿಯೂ, ನನ್ನ ಅಂಗಡಿಯನ್ನು ಕೆಡವಲಾಯಿತು ಎಂದು ಕಣ್ಣೀರು ಹಾಕಿದ್ದಾರೆ.

ಕಣ್ಣೀರಾಕಿದ ಸ್ಥಳೀಯ ಗಣೇಶ್
ಗಣೇಶ್ ಕುಮಾರ್ ಗುಪ್ತಾ ಅವರು, "ನನ್ನ ಜ್ಯೂಸ್ ಅಂಗಡಿಯು ವರ್ಷಗಳಿಂದ ಇಲ್ಲಿ ನಡೆಯುತ್ತಿತ್ತು. ಇದನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರವು 1977 ರಲ್ಲಿ ಮಂಜೂರು ಮಾಡಿದೆ ಮತ್ತು ಅದನ್ನು ಸಾಬೀತುಪಡಿಸಲು ನಮ್ಮ ಬಳಿ ಎಲ್ಲಾ ಅಗತ್ಯ ದಾಖಲೆಗಳಿವೆ. ಇಲ್ಲಿಗೆ ಆಗಮಿಸಿದ ಎಲ್ಲಾ ತಂಡದವರಿಗೂ ನಾನು ಹೇಳಿದ್ದೇನೆ. ಎಲ್ಲಾ ಪೇಪರ್ಗಳನ್ನು ನಾನು ಹೊಂದಿದ್ದೇನೆ. ಆದರೆ ಅವರು ಕೇಳಲಿಲ್ಲ. ಒಂದು ಗಂಟೆಯ ಹಿಂದೆ ಸುಪ್ರೀಂ ಕೋರ್ಟ್ ಧ್ವಂಸವನ್ನು ನಿಲ್ಲಿಸಿ ಆದೇಶ ಹೊರಡಿಸಿದೆ. ಆದರೆ ನನ್ನ ಅಂಗಡಿ ಉಳಿಯಲಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.

ನನಗೆ ನಷ್ಟ ಭರಿಸುವವರು ಯಾರು?
ಗಣೇಶ್ ಕುಮಾರ್ ಗುಪ್ತಾ ಅವರು, "ಜಹಾಂಗೀರಪುರಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ, ನಮ್ಮ ಕುಟುಂಬದಲ್ಲಿ ಯಾರೂ ಆರೋಪಿಗಳಾಗಿಲ್ಲ. ನಾನು ಅಂಗಡಿಯವನು. ಅವರು ನನ್ನನ್ನು ಏಕೆ ಬಂಧಿಸುತ್ತಾರೆ. ನನ್ನ ಅಂಗಡಿಯನ್ನು ಕೆಡವಿದ್ದಕ್ಕಾಗಿ ನನಗೆ ದುಃಖವಾಗಿದೆ. ಇದು ನಾನು ನನ್ನ ಜೀವನೋಪಾಯವನ್ನು ಕಳೆದುಕೊಂಡಿದ್ದೇನೆ. ಈಗ ಬೆಂಬಲಕ್ಕಾಗಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನನಗಾದ ನಷ್ಟವನ್ನು ಭರಿಸುವವರು ಯಾರು?" ಎಂದು ಪ್ರಶ್ನೆ ಮಾಡಿದ್ದಾರೆ.

ಜಹಾಂಗೀರ್ಪುರಿ ಹಿಂಸಾಚಾರ
ಕಳೆದ ವಾರ ಇದೇ ಜಹಾಂಗೀರ್ಪುರಿ ಪ್ರದೇಶದಲ್ಲಿ ಹನುಮ ಜಯಂತಿಯ ಮೆರವಣಿಗೆ ನಡೆಯುವ ವೇಳೆ ಕೋಮುಗಲಭೆ ನಡೆದಿತ್ತು. ಆ ಗಲಭೆ ಘಟನೆಯ ಕೆಲ ಆರೋಪಿಗಳು ಈ ಪ್ರದೇಶದಲ್ಲಿ ಹಲವು ಸ್ಥಳಗಳ ಅತಿಕ್ರಮಣ ಮಾಡಿ ಅಕ್ರಮವಾಗಿ ಕಟ್ಟಡಗಳನ್ನ ಕಟ್ಟಿದ್ದಾರೆ. ಈ ಪುಂಡರಿಗೆ ಸ್ಥಳೀಯ ಆಮ್ ಆದ್ಮಿ ಶಾಸಕ ಮತ್ತು ಪಾಲಿಕೆ ಸದಸ್ಯರ ಬೆಂಬಲ ಇರುವ ಕಾರಣ ದೊಡ್ಡ ಮಟ್ಟದಲ್ಲಿ ಅತಿಕ್ರಮಣ ಮಾಡಿದ್ದಾರೆ. ಈ ಗಲಭೆಕೋರರು ಮಾಡಿರುವ ಅಕ್ರಮ ಕಟ್ಟಡಗಳನ್ನ ಗುರುತಿಸಿ ತೆರವುಗೊಳಿಸಬೇಕು ಎಂದು ದೆಹಲಿ ಘಟಕದ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತ ಅವರು ನಾರ್ತ್ ಡೆಲ್ಲಿ ಮುನಿಸಿಪಾಲ್ ಕಾರ್ಪೊರೇಷನ್ನ ಮೇಯರ್ ಅವರಿಗೆ ಮನವಿ ಮಾಡಿ ನಿನ್ನೆ ಮಂಗಳವಾರ ಪತ್ರ ಬರೆದಿದ್ದರು. ಈ ಪತ್ರ ಬರೆದ ಬೆನ್ನಲ್ಲೇ ಎನ್ಡಿಎಂಸಿ ಜಹಾಂಗೀರ್ಪುರಿ ಪ್ರದೇಶದಲ್ಲಿ ಇಂದು ಮತ್ತು ನಾಳೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲು ನಿರ್ಧರಿಸಿತು. ಒಂಬತ್ತು ಬುಲ್ಡೋಜರ್ಗಳನ್ನ ಕರೆಸಲಾಗಿತ್ತು. ಜೊತೆಗೆ, ಗಲಭೆ ಉಂಟಾಗದಂತೆ ಮುಂಜಾಗ್ರತೆಯಾಗಿ ನೂರಾರು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನ ನಿಯೋಜಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಕಟ್ಟಡ ತೆರವು ಕಾರ್ಯಾಚರಣೆಯನ್ನ ನಿಲ್ಲಿಸಲಾಗಿದೆ. ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ ಎಂದು ಮೇಯರ್ ರಾಜಾ ಇಕ್ಬಾಲ್ ಸಿಂಗ್ ಹೇಳಿದ್ದಾರೆ.












Click it and Unblock the Notifications