ಕೇರಳದ ISIS ಸಹ ಸಂಸ್ಥೆಯಿಂದ ನ್ಯಾಯಾಧೀಶರ ಹತ್ಯೆಗೆ ಸಂಚು!
ಒಮರ್ ಅಲ್-ಹಿಂದಿ ಐಎಸ್ಐಎಸ್ ಪ್ರಕರಣವೆಂದೇ ಬಿಂಬಿತವಾಗಿರುವ ಈ ಪ್ರಕರಣದಲ್ಲಿ ಕೇರಳದ ಸುಮಾರು 8 ಮಂದಿ ಕಾರ್ಯಕರ್ತರು ಸಕ್ರಿಯವಾಗಿದ್ದಾರೆಂದು ಎನ್ ಐಎ ಹೇಳಿದೆ.
ನವದೆಹಲಿ, ಏಪ್ರಿಲ್ 3: ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರು, ರಾಜಕೀಯ ವ್ಯಕ್ತಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಭಾರತಕ್ಕೆ ಆಗಮಿಸುವ ವಿದೇಶಿಗರನ್ನು ಗುರಿಯಾಗಿಸಿ ದಾಳಿ ನಡೆಸಲು ಕೇರಳದಲ್ಲಿ ಸಕ್ರಿಯವಾಗಿರುವ ಐಎಸ್ಐಎಸ್ ಪ್ರೇರಿತ ಗುಂಪು ಪ್ರಯತ್ನಿಸಿದೆ ಎಂದು ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ) ಹೇಳಿದೆ.
ಒಮರ್ ಅಲ್-ಹಿಂದಿ ಐಎಸ್ಐಎಸ್ ಪ್ರಕರಣವೆಂದೇ ಬಿಂಬಿತವಾಗಿರುವ ಈ ಪ್ರಕರಣದಲ್ಲಿ ಕೇರಳದ ಸುಮಾರು 8 ಮಂದಿ ಕಾರ್ಯಕರ್ತರು ಸಕ್ರಿಯವಾಗಿದ್ದು, ಗಣ್ಯ ವ್ಯಕ್ತಿಗಳನ್ನು ಕೊಲ್ಲುವ ಸಂಚು ರೂಪಿಸಿದ್ದರೆಂದು ಎನ್ ಐಎ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಎಂಟು ಮಂದಿಯ ಹೆಸರನ್ನು ದಾಖಲಿಸಲಾಗಿದೆ.
ಐಎಸ್ ಪ್ರಾತಿನಿಧ್ಯ ಹೊಂದಿರುವವನೆಂದು ಹೇಳಲಾದ ಅನ್ಸುರುಲ್ ಖಿಲಾಫಾ ಎಂಬಾತನಿಂದ 2016ರ ಆಗಸ್ಟ್ ನಲ್ಲಿ ಒಮರ್ ಅಲ್ - ಹಿಂದಿ ಸಂಘಟನೆಯು ಜನ್ಮ ತಾಳಿತ್ತು. ಈಗ ಭೂಗತನಾಗಿರುವ ಶಾಜೀರ್ ಮಂಗಲಾಸ್ಸೆರಿ ಎಂಬಾತನಿಗೆ ಈ ಸಂಘಟನೆಯ ನಾಯಕತ್ವ ಸ್ಥಾನ ನೀಡಲಾಗಿತ್ತು.
ಕೇರಳದ ಹೈಕೋರ್ಟ್ ನ್ಯಾಯಾಧೀಶರು, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಗಣ್ಯ ವ್ಯಕ್ತಿಗಳು, ವಿದೇಶಿಗರನ್ನು ಕೊಲ್ಲುವುದೇ ಸಂಘಟನೆಯ ಪ್ರಮುಖ ಉದ್ದೇಶವಾಗಿತ್ತು ಎಂದು ಎನ್ಐಎ ಹೇಳಿದೆ.