ದೆಹಲಿ ರಾಷ್ಟ್ರ ರಾಜಧಾನಿ ಅಂತ ಸಂವಿಧಾನ ಹೇಳಿದ್ಯಾ? ಕೇಜ್ರಿವಾಲ್ ಪ್ರಶ್ನೆ
ನವದೆಹಲಿ, ನವೆಂಬರ್ 15: ದೆಹಲಿ ರಾಷ್ಟ್ರ ರಾಜಧಾನಿ ಎಂದು ಸಂವಿಧಾನದಲ್ಲಿ ಹೇಳಿದೆಯೇ? ಅಥವಾ ಇದಕ್ಕೆ ಸಂಬಂಧಿಸಿದಂತೆ ಏನಾದರೂ ಕಾನೂನನ್ನು ಸಂಸತ್ತು ಜಾರಿಗೆ ತಂದಿದೆಯೇ? ಹೀಗಂಥ ಸುಪ್ರಿಂ ಕೋರ್ಟ್ ನಲ್ಲಿ ಅರವಿಂದ ಕೇಜ್ರಿವಾಲ್ ಸರಕಾರ ವಾದ ಮಂಡಿಸಿದೆ.
ದೆಹಲಿ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸುವಂತೆ ಕೋರಿ ಸುಪ್ರಿಂ ಕೋರ್ಟ್ ನಲ್ಲಿ ದಾವೆ ಹೂಡಿದೆ. ಈ ಸಂಬಂಧ ದೆಹಲಿ ಸರಕಾರವನ್ನು ಪ್ರತಿನಿಧಿಸುತ್ತಿರುವ ಇಂದಿರಾ ಜೈಸಿಂಗ್ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮುಂದೆ ಈ ವಾದ ಹೂಡಿದ್ದಾರೆ

ದೆಹಲಿ ರಾಜಧಾನಿ ಎಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಯಾವ ಕಾನೂನಿನಲ್ಲೂ ದೆಹಲಿ ರಾಜಧಾನಿ ಎಂದು ಉಲ್ಲೇಖವಾಗಿಲ್ಲ. ನಾಳೆ ಕೇಂದ್ರ ಸರಕಾರ ರಾಜಧಾನಿಯನ್ನು ದೆಹಲಿಯಿಂದ ಎಲ್ಲಿಗೆ ಬೇಕಾದರೂ ಸ್ಥಳಾಂತರಿಸುವ ತೀರ್ಮಾನ ತೆಗೆದುಕೊಳ್ಳಬಹುದು. ಬ್ರಿಟೀಷರು ಇದೇ ರೀತಿ ಕೊಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ವರ್ಗ ಮಾಡಿದ್ದರು ಎಂದು ಜೈಸಿಂಗ್ ವಾದಿಸಿದ್ದಾರೆ.
ಕೇಂದ್ರ ಸರಕಾರ ಮತ್ತು ದೆಹಲಿ ಸರಕಾರದ ಮಧ್ಯೆ ಅಧಿಕಾರ ಚಲಾವಣೆಗೆ ಸಂಬಂಧಿಸಿದಂತೆ ವಿಭಾಗಗಳನ್ನು ಮಾಡುವ ಅಗತ್ಯವಿದೆ. ಆಗ ಮಾತ್ರ ಕೇಜ್ರಿವಾಲ್ ಸರಕಾರ ಸಲೀಸಾಗಿ ಕಾರ್ಯ ನಿರ್ವಹಿಸಬಹುದು ಎಂದು ಜೈಸಿಂಗ್ ತಮ್ಮ ವಾದ ಹೂಡಿದ್ದಾರೆ.












Click it and Unblock the Notifications