ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದ ಇಂಡಿಗೋ ಉದ್ಯೋಗಿಗಳ ವಜಾ
ನವದೆಹಲಿ, ನವೆಂಬರ್ 7: ಚೆನ್ನೈನಿಂದ ದೆಹಲಿಗೆ ತೆರಳಿದ್ದ ವಿನಯ್ ಕತಿಯಾಲ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಇಂಡಿಗೋ ವಿಮಾನ ಯಾನ ಸಂಸ್ಥೆಯ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಅಕ್ಟೋಬರ್ ಹದಿನೈದರಂದು, ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ.
ವಿಮಾನ ಭೂ ಸ್ಪರ್ಶ ಮಾಡಿದ ನಂತರ ಆ ಸ್ಥಳದಿಂದ ಟರ್ಮಿನಲ್ ವರೆಗೆ ಪ್ರಯಾಣಿಕರನ್ನು ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿರುತ್ತದೆ. ಮತ್ತು ಅಲ್ಲಿ ಆಯಾ ವಿಮಾನ ಯಾನ ಸಂಸ್ಥೆಯ ಕೆಲ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಪ್ರಯಾಣಿಕರನ್ನು ಕರೆದೊಯ್ಯಲು ಬಂದ ಬಸ್ ನಿಧಾನವಾಗಿದ್ದಕ್ಕೆ ಕತಿಯಾಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿ ಬಸ್ ಹತ್ತದಂತೆ ಅವರನ್ನು ತಡೆದಿದ್ದಾರೆ. ಆದರೆ ಬಸ್ ಹತ್ತಲು ಪ್ರಯತ್ನಿಸಿದ ವಿನಯ್ ಅವರನ್ನು ದೈಹಿಕವಾಗಿ ತಡೆದಿದ್ದಾರೆ. ಇಬ್ಬರು ತಳ್ಳಾಡಿದ್ದಾರೆ. ಒಂದು ಹಂತದಲ್ಲಿ ನೆಲಕ್ಕೆ ಕೆಡವಿದ್ದಾರೆ. ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ ವಿನಯ್ ಅವರ ಕತ್ತನ್ನು ಬಲವಾಗಿ ಹಿಡಿದುಕೊಂಡಿದ್ದಾರೆ. ಈ ಎಲ್ಲ ದೃಶ್ಯಗಳೂ ವಿಡಿಯೋದಲ್ಲಿ ಸೆರೆಯಾಗಿವೆ.
#WATCH: IndiGo staff manhandle a passenger at Delhi's Indira Gandhi International Airport (Note: Strong language) pic.twitter.com/v2ola0YzqC
— ANI (@ANI) 7 November 2017
ಈ ಘಟನೆಗೆ ಇಂಡಿಗೋ ಕ್ಷಮೆ ಕೇಳಿದೆ. ಮತ್ತು ಆ ರೀತಿ ನಡೆದುಕೊಂಡ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ವಿಚಾರಣೆಗಾಗಿ ಸಮಿತಿ ರಚಿಸಿ, ತಪ್ಪಿತಸ್ಥರೆಂದು ಸಾಬೀತಾದವರನ್ನು ಕೆಲಸದಿಂದ ತಕ್ಷಣವೇ ತೆಗೆದಿದ್ದೇವೆ ಎಂದು ವಿಮಾನ ಯಾನ ಸಂಸ್ಥೆ ಹೇಳಿದೆ.
ನಮ್ಮ ವಿಮಾನ ಯಾನ ಸಂಸ್ಥೆಯ ಪ್ರಯಾಣಿಕರಿಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯಿಂದ ಅಹಿತಕರ ಅನುಭವ ಆಗಿದೆ. ಆ ಪ್ರಯಾಣಿಕರ ಜತೆಗೆ ವೈಯಕ್ತಿಕವಾಗಿ ಮಾತನಾಡಿ, ಕ್ಷಮೆ ಕೋರಿದ್ದೇನೆ ಎಂದು ಇಂಡಿಗೋದ ಪೂರ್ಣಾವಧಿ ನಿರ್ದೇಶಕ ಹಾಗೂ ಅಧ್ಯಕ್ಷ ಆದಿತ್ಯ ಘೋಷ್ ತಿಳಿಸಿದ್ದಾರೆ.












Click it and Unblock the Notifications