ಅಂಚೆ ಇಲಾಖೆಯಿಂದ ಬೇಳೆಕಾಳು ಮಾರಾಟ
ಬೆಂಗಳೂರು, ಅಕ್ಟೋಬರ್, 18: ಹಬ್ಬದ ದಿನಗಳಲ್ಲಿ ಬೇಳೆ, ಉದ್ದು, ಕಡಲೆಬೇಳೆಗಳನ್ನು ಅಂಚೆ ಕಚೇರಿಗಳ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆಹಾರ ಧಾನ್ಯಗಳ ಬೆಲೆ ಗಗನಮುಖಿಯಾಗಿದ್ದು ಬೆಲೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಿಯಾಯಿತಿ ದರದಲ್ಲಿ ಬೇಳೆಕಾಳುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಎಲ್ಲಾ ರಾಜ್ಯಗಳಲ್ಲೂ ಕೇಂದ್ರ ಸರ್ಕಾರದ ನೇರ ಮಾರಾಟ ಮಳಿಗೆಗಳು ಇಲ್ಲದಿರುವುದರಿಂದ ದೇಶದಾದ್ಯಂತ ವಿಸ್ತೃತ ಜಾಲ ಹೊಂದಿರುವ ಅಂಚೆ ಇಲಾಖೆ ಕಚೇರಿಗಳ ಮೂಲಕ ಮಾರಾಟ ಮಾಡುವುದಾಗಿ ಸರ್ಕಾರ ತಿಳಿಸಿದೆ.
ಗ್ರಾಹಕ ವ್ಯವಹಾರ ಕಾರ್ಯದರ್ಶಿ ಹೇಮ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಅ.14ರಂದು ನವದೆಹಲಿಯಲ್ಲಿ ನಡೆದ ಅಂತರ್ ಸಚಿವಾಲಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೇಶದ ಮೂಲೆ ಮೂಲೆಗೂ ಅಂಚೆ ಕಚೇರಿ ಜ್ಯಾಲ ವ್ಯಾಪಿಸಿಕೊಂಡಿರುವುದರಿಂದ ಪ್ರತಿ ಹಳ್ಳಿಯಲ್ಲೂ ಅಂಚೆ ಕಚೇರಿ ಇದೆ. ಹೀಗಾಗಿ ಬೇಳೆ ಕಾಳುಗಳ ವಿತರಣೆ ಸುಲಭವಾಗಲಿದೆ ಎಂದು ಕೇಂದ್ರ ಆಹಾರ ಇಲಾಖೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಬೆಲೆ ನಿಯಂತ್ರಣ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಕ್ರಮ ದಾಸ್ತಾನು ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ಒಟ್ಟು 1ಲಕ್ಷ 54ಸಾವಿರಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ 1 ಲಕ್ಷ 39ಸಾವಿರಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಅಂಚೆ ಇಲಾಖೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕಡಲೇ ಬೇಳೆ ಬೆಲೆ ನಿಯಂತ್ರಣ ಮತ್ತು ಹೆಚ್ಚು ಮಾರಾಟ ಮಾಡುವ ಉದ್ದೇಶದಿಮದ ಚಿಲ್ಲರೆ ಅಂಗಡಿಗಳಿಗೆ ಸರ್ಕಾರಿ ಸಂಸ್ಥೆಗಳ ಮೂಲಕ ಹೆಚ್ಚು ಕಾಳುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರದ ದಾಸ್ತಾನು ಕೇಂದ್ರಗಳಲ್ಲಿ ಸಂಗ್ರಹಿಸಲಾಗಿರುವ ತೊಗರಿ ಮತ್ತು ಉದ್ದಿನ ಬೇಳೆಯನ್ನು ಸಹ ರಾಜ್ಯ ಸರ್ಕಾರಗಳಿಗೆ ವಿತರಿಸಲಾಗಿದೆ. ಅದೇ ರೀತಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ 'ನಫೇಡ್' ಮದರ್ ಡೇರಿ ಅಂತಹ ಸಂಸ್ಥೆಗಳಿಗೂ ವಿತರಿಸಲು ನಿರ್ಧರಿಸಲು ತಿಳಿಸಲಾಗಿದೆ.
ಈ ವರ್ಷ 20ಲಕ್ಷ ಟನ್ ನಷ್ಟು ಬೇಳೆಕಾಳುಗಳನ್ನು ಸಂಗ್ರಹಿಸುವ ಗುರಿ ಹೊಂದಿರುವುದಾಗಿ ಸರ್ಕಾರ ತಿಳಿಸಿದೆ. ಅಷ್ಟೇ ಅಲ್ಲದೇ. ಬೇಳೆಕಾಳುಗಳು, ಸಕ್ಕರೆ ಮತ್ತು ಇತರೆ ಆಹಾರ ಪದಾರ್ಥಗಳ ಬೆಲೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಎಂದು ಆಹಾರ ಇಲಾಖೆ ತಿಳಿಸಿದೆ.












Click it and Unblock the Notifications