ಸಾಂಕ್ರಾಮಿಕ ಎಬೋಲಾ : 24/7 ಭಾರತ ಸಹಾಯವಾಣಿ
ನವದೆಹಲಿ, ಆ.10: ಭಾರತದಲ್ಲಿ ಮಾರಕ ಎಬೋಲಾ ಕಾಯಿಲೆ ಭೀತಿ ಆವರಿಸಿದೆ. ಎಬೋಲಾ ಹರಡುವುದನ್ನು ತಡೆಯುವ ಕ್ರಮಗಳ ಅಂಗವಾಗಿ ದೇಶದ ಎಲ್ಲ ವಿಮಾನ ನಿಲ್ದಾಣಗಳನ್ನು ಜಾಗೃತಗೊಳಿಸಲಾಗಿದ್ದು, ತುರ್ತು ಸಹಾಯ ವಾಣಿಯೊಂದನ್ನು ಆರಂಭಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಎಬೋಲಾ ಪೀಡಿತ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಸುಮಾರು 45 ಸಾವಿರ ಮಂದಿ ಭಾರತೀಯರು ವಾಸಿಸುತ್ತಿದ್ದು, ಅಲ್ಲಿ ಕಾಯಿಲೆ ತೀವ್ರಗೊಂಡರೆ ಅವರಲ್ಲಿ ಹಲವರು ತಮ್ಮ ಮಾತೃದೇಶಕ್ಕೆ ಮರಳುವ ಸಾಧ್ಯತೆಯಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಪಿಡುಗನ್ನು ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಸ್ಥಿತಿಯೆಂದು ಶುಕ್ರವಾರ ಘೋಷಿಸಿದೆ. ಎಬೋಲಾ ವೈರಾಣು ವಿಶ್ವಾದ್ಯಂತ ಹರಡುವ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮಾರಕ ರೋಗವನ್ನು ಪತ್ತೆ ಹಚ್ಚಲು ದೇಶದಲ್ಲಿ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ ಹಾಗೂ ಪತ್ತೆ ವಿಧಾನವನ್ನು ಕಾರ್ಯಾಚರಣೆ ನಡೆಸಲಾಗುತ್ತಿದೆ. ಭಾರತದಲ್ಲಿ ಎಬೋಲಾ ಪ್ರಕರಣದ ಅಪಾಯ 'ಕಡಿಮೆಯಿದೆ'. ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

24 ಗಂಟೆಗಳ ತುರ್ತು ನಿರ್ವಹಣಾ ಕೇಂದ್ರ ಆರಂಭಿಸಲಾಗಿದ್ದು, ಭಾನುವಾರದಿಂದ ಕಾರ್ಯಾರಂಭ ಮಾಡಲಾಗುತ್ತಿದೆ. ಸಂಖ್ಯೆಗಳು 011-23061469, 3205 ಹಾಗೂ 1302. ಸೋಂಕಿತರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ದೇಶದ ಇತರೆ ಪ್ರಮುಖ ವಿಮಾನ ನಿಲ್ದಾಣ ಹಾಗೂ ಆಸ್ಪತ್ರೆಗಳಲ್ಲಿ ಇದೇ ಕ್ರಮ ಅನುಸರಿಸಲಾಗುತ್ತದೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.[ಎಬೋಲಾ ಸೋಂಕಿನ ಆತಂಕ ಬೇಕಿಲ್ಲ]
ಎಬೋಲಾದ ತೀವ್ರ ಬಾಧೆಯಿರುವ ಗಿನಿಯಾ, ಲೈಬೀರಿಯಾ ಹಾಗೂ ಸಿಯೆರ್ರಾ ಲಿಯೋನ್ಗಳಲ್ಲಿ ಸುಮಾರು 4,700 ಮಂದಿ ಭಾರತೀಯರಿದ್ದಾರೆ. ಅಲ್ಲದೆ ರೋಗ ಕಾಣಿಸಿಕೊಂಡಿರುವ ನೈಜೀರಿಯದಲ್ಲಿ ಸುಮಾರು 40 ಸಾವಿರ ಮಂದಿ ಭಾರತೀಯರು ವಾಸಿಸುತ್ತಿದ್ದಾರೆ.
ಪರಿಸ್ಥಿತಿ ಹದಗೆಟ್ಟರೆ, ಈ ಭಾರತೀಯರು ಸ್ವದೇಶಕ್ಕೆ ಮರಳುವ ಸಂಭವವಿದೆಯೆಂದ ಹರ್ಷವರ್ಧನ್, ವೈರಾಣು ಸೋಂಕಿನ ಯಾವುದೇ ಪ್ರಕರಣವನ್ನು ನಿಭಾಯಿಸಲು ಸಿದ್ಧತಾ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಸೋಂಕಿಗೊಳಗಾದ ಶಂಕೆಯಿರುವ ಪ್ರಯಾಣಿಕನೊಬ್ಬನ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿತ್ತು. ಆತನಿಗೆ ಸೋಂಕು ತಗಲಲ್ಲಿವೆಂಬುದು ಪರೀಕ್ಷೆಯಿಂದ ತಿಳಿದುಬಂದಿದೆ. ಆದರೆ, ಯಾವುದೇ ಚಿಹ್ನೆ ಕಾಣಿಸಿಕೊಂಡರೆ ತಕ್ಷಣ ಅಧಿಕಾರಿಗಳಿಗೆ ವರದಿ ಮಾಡುವಂತೆ ಆ ವ್ಯಕ್ತಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.












Click it and Unblock the Notifications