ಆಮ್ ಆದ್ಮಿ ಪಕ್ಷದ ಮಂತ್ರಿ ಕೈಲಾಶ್ ಗಹ್ಲೋಟ್ ಮೇಲೆ ಐಟಿ ದಾಳಿ
ಬೆಂಗಳೂರು, ಅಕ್ಟೋಬರ್ 10 : ಆದಾಯ ತೆರಿಗೆ ಅಧಿಕಾರಿಗಳು ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಸಾರಿಗೆ ಮಂತ್ರಿ ಕೈಲಾಶ್ ಗಹ್ಲೋಟ್ ಮೇಲೆ ಬುಧವಾರ ಬೆಳಿಗ್ಗೆಯಿಂದ ದಾಳಿ ನಡೆಸಿದ್ದಾರೆ.
ದೆಹಲಿ ಮತ್ತು ಗುರುಗ್ರಾಮ್ ನಲ್ಲಿ ಒಟ್ಟು 16 ಕಡೆಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಕೈಲಾಶ್ ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗುತ್ತಿದ್ದು, ಅವರಿಗೆ ಸೇರಿದ ಬ್ರಿಸ್ಕ್ ಇನ್ಫ್ರಾಸ್ಟ್ರಕ್ಚರ್ ಅಂಡ್ ಡೆವಲಪರ್ಸ್ ಲಿ. ಮತ್ತು ಕಾರ್ಪೊರೇಟ್ ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸರ್ವೀಸಸ್ ಲಿ. ಮೇಲೆಯೂ ದಾಳಿ ನಡೆಸಲಾಗಿದೆ.

ದೆಹಲಿಯ ನಜಫ್ ಘರ್ ಕ್ಷೇತ್ರವನ್ನು ಪ್ರತಿನಿಧಿಸುವ ಕೈಲಾಶ್ ಗಹ್ಲೋಟ್ ಅವರು ಆದಾಯ ತೆರಿಗೆಯನ್ನು ಕಟ್ಟದೆ ಉಳಿಸಿಕೊಂಡಿರುವ ಕಾರಣ ಅಧಿಕಾರಿಗಳು ಅವರ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿದ್ದಾರೆ.
ಒಟ್ಟು 30ಕ್ಕೂ ಹೆಚ್ಚು ಐಟಿ ಇಲಾಖೆಯ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದು, ಮೇಲಿನೆರಡು ಕಟ್ಟಡ ನಿರ್ಮಾಣ ಸಂಸ್ಥೆಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇವೆರಡು ಕಂಪನಿಗಳು ಕೈಲಾಶ್ ಗಹ್ಲೋಟ್ ಅವರಿಗೆ ಸೇರಿದ್ದವಾಗಿವೆ.
ಈ ದಾಳಿಯ ಹಿಂದೆ ನರೇಂದ್ರ ಮೋದಿಯವರ ಸರಕಾರದ ಕರಾಮತ್ತು ಇದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಇದಕ್ಕೂ ಮೊದಲು ದೆಹಲಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿರುವ ಸತ್ಯೇಂದ್ರ ಜೈನ್ ಮೇಲೆಯೂ ಆದಾಯ ತೆರಿಗೆ ಅಧಿಕಾರಿಗಳು ಮೇ ತಿಂಗಳಲ್ಲಿ ದಾಳಿ ನಡೆಸಿದ್ದರು.












Click it and Unblock the Notifications