ರಾಜೀವ್ ಮಾದರಿಯಲ್ಲಿ ಮೋದಿ ಹತ್ಯೆಗೆ ಸಂಚು
ನವದೆಹಲಿ, ಏ. 29- ಇತ್ತ ಇಡೀ ದೇಶ ಲೋಕಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಮುಳುಗಿರುವಾಗ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನದ ಕಡೆಯಿಂದ ಇಂಡಿಯನ್ ಮುಜಾಹಿದ್ದೀನ್ ಮತ್ತಿ ಸಿಮಿ ಆತ್ಮಾಹುತಿ ಉಗ್ರರು ದೇಶದೊಳಕ್ಕೆ ಒಳನುಸುಳಿದ್ದಾರೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.
ಚುನಾವಣೆ ವೇಳೆ ಹೇಗಾದರೂ ಮಾಡಿ ದುಷ್ಕೃತ್ಯ ನಡೆಸಲೇಬೇಕೆಂದು ಹೊಂಚು ಹಾಕಿರುವ ಉಗ್ರರು ಮಹಾನಗರಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದಾರೆಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿದೆ. ಈ ಸಂಬಂಧ ಇಲಾಖೆಯ ಮುಖ್ಯಸ್ಥರು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದ್ದು, 30 ಆತ್ಮಾಹುತಿ ಉಗ್ರರು ದೇಶದೊಳಗೆ ಒಳ ನುಸುಳಿದ್ದಾರೆ ಎಂಬ ಮಾಹಿತಿಯಿದೆ.
ಮೋದಿಯೇ ಟಾರ್ಗೆಟ್:

ಉಗ್ರರಿಗೆ ಈಗಲೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೇ ಪ್ರಮುಖ ಗುರಿಯಾಗಿದ್ದಾರೆ. ಹೇಗಾದರೂ ಮಾಡಿ ಮೋದಿ ಮೇಲೆ ದಾಳಿ ನಡೆಸಲು ಹೊಂಚು ಹಾಕಿರುವ ಈ ಆತ್ಮಾಹುತಿ ದಳದವರು ಮೋದಿ ಭಾಗವಹಿಸುವ ಪ್ರತಿ ಸಭೆ, ಸಮಾರಂಭಗಳಲ್ಲೂ ಹಾಜರಿರುತ್ತಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಹಾಗಾಗಿ ಮುಂದಿನ ಹಂತಗಳ ಚುನಾವಣೆಯಲ್ಲಿ ವ್ಯಾಪಕ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಗಣ್ಯ ವ್ಯಕ್ತಿಗಳು ಭಾಗವಹಿಸುವ ಸಭೆ, ಸಮಾರಂಭಗಳಿಗೂ ಹೆಚ್ಚಿನ ಭದ್ರತೆ ಒದಗಿಸಬೇಕು. ಶಂಕಿತ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಸಂಬಂಧ ರಾಜ್ಯದ ಎಲ್ಲಾ ಗೃಹ ಇಲಾಖೆ ಕಾರ್ಯದರ್ಶಿಗಳು, ಗುಪ್ತಚರ ಇಲಾಖೆ ಮುಖ್ಯಸ್ಥರು ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೂ ಸೂಚನೆ ನೀಡಲಾಗಿದೆ.
ರಾಜೀವ್ ಮಾದರಿಯಲ್ಲಿ ಮೋದಿ ಹತ್ಯೆಗೆ ಸಂಚು- ವಿಹಿಂಪ ಆತಂಕ:
ಇದೇ ವೇಳೆ ಗುಪ್ತಚರ ಇಲಾಖೆ ಮಾಹಿತಿಯನ್ನು ಉಲ್ಲೇಖಿಸಿ 'ನರೇಂದ್ರ ಮೋದಿ ಮೇಲೆ ಆತ್ಮಾಹುತಿ ದಾಳಿ ನಡೆಯುವ ಸಾಧ್ಯತೆ ಇದೆ' ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಆತಂಕ ವ್ಯಕ್ತಪಡಿಸಿದೆ. ಈ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಮಾದರಿಯಲ್ಲೇ ಮೋದಿ ಅವರನ್ನು ಸಹ ಹತ್ಯೆ ಮಾಡಲು ಸಂಚು ರೂಪಿಸಲಾಗಿದ್ದು, ಅವರ ಭದ್ರತೆಯನ್ನು ಹೆಚ್ಚಿಸಬೇಕು ಎಂದು ರಾಷ್ಟ್ರಪತಿಗೆ ಮನವಿ ಮಾಡಲಾಗಿದೆ ಎಂದು ವಿಹಿಂಪ ನಾಯಕ ಅಶೋಕ್ ಸಿಂಘಾಲ್ ಅವರು ತಿಳಿಸಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಬಂಧಿಸಲಾಗುವುದು ಎಂದು ಮೋದಿ ಹೇಳಿದ ಬೆನ್ನಲ್ಲೇ ದಾವೂದ್ ಇಬ್ರಾಹಿಂ, ಇಂಡಿಯನ್ ಮುಜಾಹಿದ್ದೀನ್ ಹಾಗೂ ಪಾಕಿಸ್ತಾನದ ಐಎಸ್ಐ ಮೋದಿ ಹತ್ಯೆಗೆ ಸಂಚು ರೂಪಿಸಿವೆ ಎಂದು ವಿಎಚ್ಪಿ ಹೇಳಿದೆ.












Click it and Unblock the Notifications