ಪ್ರಶಸ್ತಿ ವಾಪಸ್ ಮಾಡಿ ಅವಮಾನಿಸಲಾರೆ : ಕಮಲ್ ಹಾಸನ್
ನವದೆಹಲಿ, ನವೆಂಬರ್ 03 : "ನಾನು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದಿರುಗಿಸಿ ಸರಕಾರವನ್ನು ಅವಮಾನಿಸುವುದಿಲ್ಲ" ಎಂದು ಖ್ಯಾತ ನಟ ಕಮಲ್ ಹಾಸನ್ ಅವರು ಹೇಳಿದ್ದು, ಪ್ರಶಸ್ತಿ ಹಿಂದಿರುಗಿಸುತ್ತಿರುವ ಲೇಖಕರಿಗೆ, ಕಲಾವಿದರಿಗೆ ಟಾಂಗ್ ನೀಡಿದ್ದಾರೆ.
ಅತ್ಯುತ್ತಮ ನಟನೆಗಾಗಿ ನಾಲ್ಕು ರಾಷ್ಟ್ರಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಕಮಲ್ ಹಾಸನ್, "ಪ್ರಶಸ್ತಿ ಹಿಂದಿರುಗಿಸುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಪ್ರತಿ ಪಕ್ಷದಲ್ಲಿ ಪ್ರಜ್ಞಾವಂತ ರಾಜಕಾರಣಿಗಳಿದ್ದಾರೆ. ಪ್ರಶಸ್ತಿ ಹಿಂದಿರುಗಿಸುವುದು ನಿರರ್ಥಕ" ಎಂದು ಮಂಗಳವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟರು. [ಪ್ರಶಸ್ತಿ ಹಿಂದಿರುಗಿಸುತ್ತಿರುವ ಸಾಹಿತಿಗಳಿಗೆ 6 ಪ್ರಶ್ನೆ]
ಈ ವಿಷಯದ ಕುರಿತು ಸರಕಾರದ ಗಮನ ಸೆಳೆಯಲು ಇನ್ನೂ ಅನೇಕ ಮಾರ್ಗಗಳಿವೆ. ಅವುಗಳ ಕುರಿತು ಚರ್ಚೆಯಾಗಬೇಕು. 1947ರಲ್ಲಿ ಇಂಥದೇ ಅಸಹಿಷ್ಣುತೆಯಿಂದಾಗಿ ದೇಶ ಇಬ್ಭಾಗವಾಯಿತು. ಈಗ ದೇಶ ಮತ್ತೆ ಒಡೆಯಬಾರದು ಎಂದು ಸರಕಾರಕ್ಕೂ ಕಿವಿಮಾತು ಹೇಳಿದರು. [ಶಾರೂಖ್ ಖಾನ್ ಒಬ್ಬ ಪಾಕಿಸ್ತಾನಿ ಏಜೆಂಟ್]
ಭಾರತೀಯ ಚಿತ್ರರಂಗದ ಅಗ್ರ ನಟರಲ್ಲಿ ಒಬ್ಬರಾಗಿರುವ ಶಾರುಖ್ ಖಾನ್ ಅವರು ತಮ್ಮ ಹುಟ್ಟುಹಬ್ಬದ ದಿನದಂದು, ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದರು. ಖ್ಯಾತ ಅಭಿನೇತ್ರಿ ವಿದ್ಯಾ ಬಾಲನ್ ಕೂಡ ತಮಗೆ ಸಿಕ್ಕಿರುವ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ. ದಿ ಡರ್ಟಿ ಪಿಕ್ಚರ್ ಚಿತ್ರಕ್ಕಾಗಿ 2011ರಲ್ಲಿ ವಿದ್ಯಾ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದರು. [ಪ್ರಶಸ್ತಿ ಹಿಂದಿರುಗಿಸುತ್ತಿರುವವರಿಗೆ ವಿದ್ಯಾ ಬಾಲನ್ ಟಾಂಗ್]
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ, ನಿರ್ಭಿಡೆಯಿಂದ ಅಭಿಪ್ರಾಯ ಮಂಡಿಸುತ್ತಿರುವ ಲೇಖಕರ ಮೇಲೆ ಹಲ್ಲೆಗಳಾಗುತ್ತಿದೆ ಎಂಬ ಕಾರಣ ನೀಡಿ ಹಲವಾರು ಲೇಖಕರು, ವಿಜ್ಞಾನಿಗಳು, ಕಲಾವಿದರು ಕೇಂದ್ರ ಸರಕಾರ ನೀಡಿರುವ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಕನ್ನಡ ಲೇಖಕ ಡಾ. ಎಂಎಂ ಕಲಬುರ್ಗಿ ಅವರ ಹತ್ಯೆಯಾದ ನಂತರ ಪ್ರಶಸ್ತಿ ವಾಪಸ್ ಅಭಿಯಾನ ಆರಂಭವಾಗಿದೆ.