Ravichandran: ಈ ಜೀವ ನಿಮಗೆ ಅರ್ಪಣೆ, ನಿಮ್ಮ ಉಪಕಾರ ಮರೆಯಲ್ಲ: ಡಿ.ಕೆ.ಶಿವಕುಮಾರ್ ಸಹಾಯ ನೆನೆದು ನಟ ರವಿಚಂದ್ರನ್ ಭಾವುಕ
ಮಂಡ್ಯ ಜಿಲ್ಲೆಯ 'ಮದ್ದೂರು ಉತ್ಸವ' ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಆಡಿದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ಸಂಕಷ್ಟದ ಸಮಯದಲ್ಲಿ ತಮಗೆ ಆಸರೆಯಾದ ಡಿಕೆ ಶಿವಕುಮಾರ್ ಅವರ ಗುಣವನ್ನು ಸ್ಮರಿಸಿದ ರವಿಚಂದ್ರನ್, ವೇದಿಕೆಯಲ್ಲೇ ಅತ್ಯಂತ ಭಾವುಕರಾಗಿ ಮಾತನಾಡಿದರು.
ಕೈ ಚಾಚುವ ಮುನ್ನವೇ ಆಸರೆಯಾದರು
ವೇದಿಕೆ ಮೇಲೆ ಮಾತನಾಡಿದ ರವಿಚಂದ್ರನ್, "ಮನುಷ್ಯನ ಜೀವನದಲ್ಲಿ ಕೆಲವೊಮ್ಮೆ ಕಠಿಣ ಸಮಯಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಯಾರಾದರೂ ಸಹಾಯಕ್ಕೆ ಬರುತ್ತಾರಾ ಎಂದು ನಾವು ಕಾಯುತ್ತೇವೆ. ನನಗೆ ಯಾರ ಮುಂದೆಯೂ ಕೈ ಚಾಚುವ ಅಭ್ಯಾಸವಿಲ್ಲ. ಆದರೆ ನಾನು ಸಹಾಯ ಕೇಳುವ ಮೊದಲೇ ನನ್ನ ಕಷ್ಟ ಅರಿತು ಬೆನ್ನೆಲುಬಾಗಿ ನಿಂತವರು ಡಿ.ಕೆ.ಶಿವಕುಮಾರ್" ಎಂದು ಮನಸಾರೆ ಕೊಂಡಾಡಿದರು.

40 ವರ್ಷಗಳ ಅಪರೂಪದ ಸ್ನೇಹ
"ನಾವು ಶಾಲಾ ದಿನಗಳಿಂದಲೂ ಸ್ನೇಹಿತರು. ಸುಮಾರು 40-50 ವರ್ಷಗಳ ಒಡನಾಟ ನಮ್ಮದು. ಆದರೆ ಇಷ್ಟು ವರ್ಷಗಳಲ್ಲಿ ನಾನು ಎಂದಿಗೂ ನಮ್ಮ ಸ್ನೇಹವನ್ನು ಸ್ವಾರ್ಥಕ್ಕೆ ಬಳಸಿಕೊಂಡವನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನನ್ನ ಹೆಗಲ ಮೇಲೆ ಕೈ ಹಾಕಿ ಆತ್ಮೀಯತೆಯಿಂದ ಮಿಡಿದ ಅವರ ಗುಣ ದೊಡ್ಡದು. ಚಿತ್ರರಂಗಕ್ಕೆ ಬಂದು 40 ವರ್ಷಗಳಾದರೂ ಈ ರೀತಿಯ ಪ್ರೀತಿ ಕಂಡಿರಲಿಲ್ಲ. ಈ ಜೀವನದಲ್ಲಿ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ ಸರ್, ಈ ಜೀವ ನಿಮಗೇ ಅರ್ಪಣೆ" ಎಂದು ಡಿಕೆಶಿ ಅವರನ್ನು ಉದ್ದೇಶಿಸಿ ಹೇಳಿದರು.
ಸೋತಾಗ ಹೆದರಲಿಲ್ಲ
"ನಾನು ಜೀವನದಲ್ಲಿ ಸೋತಾಗ ಹೆದರಲಿಲ್ಲ, ಏಕೆಂದರೆ ಜನ ನನ್ನ ಕೈಬಿಡಲಿಲ್ಲ. 'ರಾಮಾಚಾರಿ'ಯಲ್ಲಿ ಪಂಚೆ ಉಟ್ಟು ಬಂದಾಗಲೂ ಪ್ರೇಕ್ಷಕರು ನನ್ನನ್ನು ಹರಸಿದರು. ಈಗ ಕಷ್ಟದ ಸಮಯದಲ್ಲಿ ನೀವು ನನ್ನ ಕೈ ಹಿಡಿದಿದ್ದೀರಿ, ನನಗೆ ಅಷ್ಟೇ ಸಾಕು" ಎನ್ನುತ್ತಾ ರವಿಚಂದ್ರನ್ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಮದ್ದೂರು ಉತ್ಸವದ ಜನರು, ರವಿಚಂದ್ರನ್ ಅವರ ಪ್ರಾಮಾಣಿಕ ನುಡಿಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ಸೂಚಿಸಿದರು.
ಮದ್ದೂರು ಉತ್ಸವದಲ್ಲಿ ಕೇವಲ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತ್ರವಲ್ಲದೆ, ಸ್ಥಳೀಯ ಶಾಸಕ ಕೆ.ಎಂ. ಉದಯ್ ಅವರೊಂದಿಗಿನ ತಮ್ಮ ಅವಿನಾಭಾವ ಸಂಬಂಧದ ಬಗ್ಗೆಯೂ ರವಿಚಂದ್ರನ್ ಭಾವುಕರಾಗಿ ಮಾತನಾಡಿದರು. ಉದಯ್ ಅವರು ನನಗೆ ದೊಡ್ಡ ಮಟ್ಟದ ಸಹಾಯ ಮಾಡಿದ್ದಾರೆ. ವಿಶೇಷವೆಂದರೆ, ಅವರು ಸಹಾಯ ಮಾಡಿದ ವಿಷಯ ನನಗೆ ತಕ್ಷಣಕ್ಕೆ ತಿಳಿದಿರಲಿಲ್ಲ. ಸುಮಾರು ಎರಡು ವರ್ಷಗಳ ನಂತರ ಗೆಳೆಯರ ಮೂಲಕ ಆ ವಿಷಯ ನನಗೆ ಗೊತ್ತಾಯಿತು. ಯಾವುದೇ ಪ್ರಚಾರ ಬಯಸದೆ, ಗೆಳೆಯರ ಮೂಲಕ ನನಗೆ ಬೆನ್ನೆಲುಬಾಗಿ ನಿಂತ ಉದಯ್ ಅವರ ಗುಣ ನಿಜಕ್ಕೂ ದೊಡ್ಡದು ಎಂದು ರವಿಚಂದ್ರನ್ ಸ್ಮರಿಸಿದರು.
"ನಾನು ಜೀವನದಲ್ಲಿ ಯಾವುದಕ್ಕಾದರೂ ತಲೆಬಾಗುವುದು ಇದ್ದರೆ, ಅದು ಕೇವಲ ಪ್ರೀತಿ ಮತ್ತು ಸ್ನೇಹಕ್ಕೆ ಮಾತ್ರ. ನನ್ನ ಉಸಿರಿರುವವರೆಗೂ ಇವೆರಡಕ್ಕೂ ನಾನು ಬೆಲೆ ಕೊಡುತ್ತೇನೆ. ಇಂದು ನಾನು ಈ ವೇದಿಕೆಗೆ ಬಂದಿರುವುದು ಸಹ ಕೇವಲ ಉದಯ್ ಮತ್ತು ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಪ್ರೀತಿಗಾಗಿ. ಡಿ.ಕೆ.ಶಿವಕುಮಾರ್ ಅವರು ಎಲ್ಲಿದ್ದರೂ ಅಲ್ಲಿ ರವಿಚಂದ್ರನ್ ಖಂಡಿತ ಇರುತ್ತಾರೆ" ಎಂದು ಹೇಳಿದರು.













Click it and Unblock the Notifications