ಬೆಂಗಳೂರಿಗೆ ಕೈತಪ್ಪಿದ IPL 2026ರ ಫೈನಲ್: ಅಸಲಿ ಕಾರಣ ಬಿಚ್ಚಿಟ್ಟ ಗೃಹ ಸಚಿವ ಜಿ. ಪರಮೇಶ್ವರ್
ಬೆಂಗಳೂರು: ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್ಗೆ ಸ್ಥಳಾಂತರಿಸಿದ ನಿರ್ಧಾರದ ಹಿಂದೆ ಯಾವುದೇ ಭದ್ರತಾ ಕಾರಣಗಳಿಲ್ಲ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ. ಕ್ರೀಡಾಂಗಣದ ಆಸನ ಸಾಮರ್ಥ್ಯಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳೇ ಈ ಬದಲಾವಣೆಗೆ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ.
ಮೂಲ ವೇಳಾಪಟ್ಟಿಯ ಪ್ರಕಾರ, ಐಪಿಎಲ್ 2026 ರ ಫೈನಲ್ ಪಂದ್ಯವು ಮೇ 31 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಂತರ ಈ ಹೈವೋಲ್ಟೇಜ್ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಮರುನಿಯೋಜಿಸಿತು. ಈ ನಿರ್ಧಾರವು ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತ್ತು.

ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, "ನಗರದಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪೊಲೀಸರಿಂದಾಗಲಿ, ಐಪಿಎಲ್ ಅಧಿಕಾರಿಗಳಿಂದಾಗಲಿ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್ಮೆಂಟ್ನಿಂದಾಗಲಿ ಯಾವುದೇ ದೂರುಗಳು ಅಥವಾ ಆತಂಕಗಳು ವ್ಯಕ್ತವಾಗಿಲ್ಲ. ಈಗಾಗಲೇ ಇಲ್ಲಿ ಐದು ಪಂದ್ಯಗಳು ಯಶಸ್ವಿಯಾಗಿ ನಡೆದಿವೆ, ಆದ್ದರಿಂದ ಭದ್ರತೆ ಕಾರಣಕ್ಕೆ ಪಂದ್ಯ ಸ್ಥಳಾಂತರವಾಗಿಲ್ಲ" ಎಂದು ಸ್ಪಷ್ಟಪಡಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯವು ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. "ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುಮಾರು 33,000 ಆಸನಗಳಿವೆ. ಇದರಲ್ಲಿ 7,000 ರಿಂದ 8,000 ಆಸನಗಳನ್ನು ಪ್ರಾಯೋಜಕರಿಗೆ ಮತ್ತು ಇತರ ಗಣ್ಯರಿಗೆ ಮೀಸಲಿಡಬೇಕಾಗುತ್ತದೆ. ಇದರಿಂದ ಕೇವಲ 25,000 ಆಸನಗಳು ಮಾತ್ರ ಲಭ್ಯವಿರುತ್ತವೆ. ಇಷ್ಟು ಕಡಿಮೆ ಆಸನಗಳಲ್ಲಿ ಫೈನಲ್ ನಡೆಸುವ ಬದಲು, ಹೆಚ್ಚು ಸಾಮರ್ಥ್ಯ ಹೊಂದಿರುವ ಸ್ಟೇಡಿಯಂನಲ್ಲಿ ಪಂದ್ಯ ನಡೆಸುವುದು ಆರ್ಥಿಕವಾಗಿ ಲಾಭದಾಯಕ ಎಂದು ಅವರು ಭಾವಿಸಿರಬಹುದು" ಎಂದು ಪರಮೇಶ್ವರ ವಿವರಿಸಿದರು.
ಈ ನಡುವೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ವಕ್ತಾರ ವಿನಯ್ ಮೃತ್ಯುಂಜಯ ಮಾತನಾಡಿ, "ಸ್ಥಳ ಬದಲಾವಣೆಯ ಬಗ್ಗೆ ನಮಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಇದು ಬಿಸಿಸಿಐನ ವಿಶೇಷ ಹಕ್ಕಾಗಿದ್ದು, ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ" ಎಂದು ಹೇಳಿದರು. ಪರಿಷ್ಕೃತ ವೇಳಾಪಟ್ಟಿಯಂತೆ, ಕ್ವಾಲಿಫೈಯರ್ 1 ಮೇ 26 ರಂದು ಧರ್ಮಶಾಲಾದಲ್ಲಿ, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಮೇ 27 ಮತ್ತು 29 ರಂದು ಮುಲ್ಲನ್ಪುರದಲ್ಲಿ ನಡೆಯಲಿವೆ. ಮಹತ್ವದ ಫೈನಲ್ ಪಂದ್ಯವು ಮೇ 31 ರಂದು ಅಹಮದಾಬಾದ್ನಲ್ಲಿ ಜರುಗಲಿದೆ.












Click it and Unblock the Notifications