ಉತ್ತರ ಕರ್ನಾಟಕದ ಭಕ್ತರಿಗೆ ಸಿಹಿ ಸುದ್ದಿ: ಇಲ್ಲಿಂದ ನೇರ ತಿರುಪತಿಗೆ ರೈಲು ಸೇವೆ, ಸಂಚಾರ ಮಾರ್ಗ, ವೇಳಾಪಟ್ಟಿ
ಬೆಂಗಳೂರು: ರಾಜ್ಯದಿಂದ ತಿರುಪತಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಮಾರ್ಗವಾಗಿ ಸಂಚರಿಸುತ್ತಿದ್ದ ರೈಲಿನಿಂದ ಹೆಚ್ಚಿನ ಅನೂಕೂಲ ಆಗದ ಹಿನ್ನೆಲೆಯಲ್ಲಿ ಮತ್ತೊಂದು ನೇರ ರೈಲನ್ನು ತಿರುಪತಿಗೆ ಬಿಡಲು ರೈಲ್ವೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಶೀಘ್ರವೇ ಈಡೇರಲಿದೆ. ಜಿಲ್ಲೆಗಳ ಜನರಿಗೆ, ವಿದ್ಯಾರ್ಥಿಗಳಿಗೆ, ಪ್ರವಾಸೋಧ್ಯಮ ಉತ್ತೇಜನಕ್ಕೆ ಈ ಹೊಸ ರೈಲು ನಿರ್ಧಾರ ಸಹಕಾರಿಯಾಗಲಿದೆ.
ಕೊಲ್ಹಾಪುರದಿಂದ ತಿರುಪತಿಗೆ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ಸೇವೆ ನೀಡುತ್ತಿದೆ. ಆದರೆ ಈ ರೈಲು ಹುಬ್ಬಳ್ಳಿಯಲ್ಲಿಯೇ ಭರ್ತಿಯಾಗುತ್ತಿದ್ದು, ಮುಂದಿನ ಇತರ ಜಿಲ್ಲೆಗಳ ಜನರಿಗೆ ತಿರುಪತಿಗೆ ತೆರಳಲು ಟಿಕೆಟ್ಗಳೇ ಸಿಗುತ್ತಿರಲಿಲ್ಲ. ಈ ಕಾರಣದಿಂದ ಹೊಸಪೇಟೆ ಮಾರ್ಗವಾಗಿ ತಿರುಪತಿಗೆ ನೇರ ರೈಲು ಸೇವೆ ಒದಗಿಸುವಂತೆ ಬಹುದಿನಗಳಿಂದ ಆಗ್ರಹ ಕೇಳಿ ಬಂದಿತ್ತು. ಅದರಂತೆ ಸಂಸದ ನಾರಾಯಣ ಭಾಂಡಗೆ ಅವರು ಕೇಂದ್ರ ರೈಲ್ವೆ ಇಲಾಖೆಗೆ ಪತ್ರ ಮೂಲಕ ಒತ್ತಾಯಿಸಿದ್ದರು. ಅದರಂತೆ ಉತ್ತರ ಕರ್ನಾಟಕದ ವಿಜಯಪುರ-ತಿರುಪತಿಗೆ ಹೊಸ ರೈಲು ಕಾರ್ಯಾಚರಣೆ ಮಾಡಲಿದೆ. ಕುತೂಹಲವೆಂದರೆ ಈ ರೈಲು ಸಂಚಾರಕ್ಕೆ ಎರಡು ಮಾರ್ಗಗಳಿದ್ದು, ಯಾವ ಮಾರ್ಗದಲ್ಲಿ ಸಂಚಾರ ಮಾಡಲಿದೆ ಎಂದು ಜನ ಕಾಯುವಂತಾಗಿದೆ.

ಬೆಂಗಳೂರು ಸುತ್ತಮುತ್ತಲಿನ ಭಾಗದಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಿಂದ ತಿರುಪತಿಗೆ ತೆರಳುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಸರಿಯಾದ ರೈಲುಗಳ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಖಾಯಂ ಎಕ್ಸ್ಪ್ರೆಸ್ ನೇರ ರೈಲು ಸೇವೆಗೆ ಹೊಸಪೇಟೆ ರೈಲ್ವೆ ಬಳಕೆದಾರರು ಸೇರಿದಂತೆ ಈ ಭಾಗದ ಪ್ರಯಾಣಿಕರು ಜನಪ್ರತಿನಿಧಿಗಳಿಗೆ ನಿರಂತರವಾಗಿ ಆಗ್ರಹಿಸುತ್ತಿದ್ದರು.
ಎರಡು ಮಾರ್ಗಗಳು ಯಾವುವು?
ವಿಜಯಪುರದಿಂದ ತಿರುಪತಿಗೆ ಎರಡು ಮಾರ್ಗಗಗಳಲ್ಲಿ ಸಂಚಾರ ಮಾಡಲು ಅವಕಾಶ ಇದೆ. ಒಂದು ವಿಜಯಪುರ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಗದಗ ಜಂಕ್ಷನ್, ಕೊಪ್ಪಳ, ಹೊಸಪೇಟೆ ಮಾರ್ಗವಾಗಿ, ಬಳ್ಳಾರಿ, ಗುಂತಕಲ್ ಮೂಲಕ ತಿರುಪತಿಗೆ ತೆರಳಬಹುದು.
ಇನ್ನೊಂದು ಮಾರ್ಗವೆಂದರೆ ವಿಜಯಪುರದಿಂದ ಹುಟಗಿ, ಕಲಬುರಗಿ, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ರೇಣುಗುಂಟಾ ಮಾರ್ಗವಾಗಿ ಆಂಧ್ರದ ತಿರುಪತಿಗೆ ತಲುಪಬಹುದಾಗಿದೆ. ಯಾವ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಮಾಡಬೇಕು, ಯಾವೆಲ್ಲ ನಿಲ್ದಾಣಗಳಲ್ಲಿ ನಿಲುಗಡೆ, ಸಮಯ, ಟಿಕೆಟ್ ದರ ಎಲ್ಲವನ್ನು ರೈಲ್ವೆ ಅಧಿಕಾರಿಗಳು ಶೀಘ್ರವೇ ಅಂತಿಮಗೊಳಿಸಿ ಪ್ರಕಟಿಸಲಿದ್ದಾರೆ. ಕೆಲವೇ ದಿನಗಳಲ್ಲಿ ವೇಳಾಪಟ್ಟಿ ಮಾಹಿತಿ ಸಿಗಲಿದೆ.
ಸಂಸದ ನಾರಾಯಣ ಭಾಂಡಗೆ ಸಂತಸ
ವಿಜಯಪುರ-ತಿರುಪತಿ ನೇರ ರೈಲು ಕುರಿತು ಸಂಸದ ನಾರಾಯಣ ಭಾಂಡಗೇ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿರಂತರ ಪ್ರಯತ್ನದ ಫಲವಾಗಿ ರೈಲು ಸಾರಿಗೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ವಿಜಯಪುರ-ತಿರುಪತಿ ನೇರ ರೈಲು ಸೇವೆ ಆರಂಭಗೊಳ್ಳಲಿದೆ. ಈ ಸೇವೆ ಆರಂಭಿಸುವ ಕುರಿತು ನಾನು ರೈಲ್ವೆ ಇಲಾಖೆಗೆ ಸಲ್ಲಿಸಿದ್ದ ಮನವಿಗೆ ಮಹತ್ವದ ಸ್ಪಂದನೆ ದೊರೆತಿದೆ.
ದಕ್ಷಿಣ ಮಧ್ಯ ರೈಲ್ವೆ (South Central Railway), ಸಿಕಂದರಾಬಾದ್ ಕಚೇರಿಯು ನನ್ನ ಮನವಿಯನ್ನು ಸಂಬಂಧಿತ ದಕ್ಷಿಣ ಕರಾವಳಿ ರೈಲ್ವೆ (South Coast Railway), ವಿಶಾಖಪಟ್ಟಣಂ ವಿಭಾಗಕ್ಕೆ ಮುಂದಿನ ಪರಿಶೀಲನೆ ಹಾಗೂ ಅಗತ್ಯ ಕ್ರಮಕ್ಕಾಗಿ ರವಾನಿಸಿದೆ. ಉತ್ತರ ಕರ್ನಾಟಕದ ಭಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿರುವ ಈ ರೈಲು ಸೇವೆ ಸಾಕಾರಗೊಳ್ಳುವ ದಿಸೆಯಲ್ಲಿ ಇದು ಮಹತ್ವದ ಬೆಳವಣಿಗೆ ಆಗಿದೆ.
ವಿಜಯಪುರ-ತಿರುಪತಿ ನೇರ ರೈಲು ಸೇವೆ ಮಂಜೂರಾಗುವವರೆಗೆ ನನ್ನ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ. ಈ ಸೇವೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.













Click it and Unblock the Notifications