ದೆಹಲಿ ಗಲಭೆ; ಪೊಲೀಸ್ ಕಸ್ಟಡಿಯಲ್ಲಿರುವ ನಟ ದೀಪ್ ಸಿಧು ಹೇಳಿದ್ದೇನು?
ನವದೆಹಲಿ, ಫೆಬ್ರುವರಿ 11: ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ಗಲಭೆಗೆ ಪ್ರಚೋದಿಸಿದ ಹಾಗೂ ಕೆಂಪು ಕೋಟೆ ಮೇಲೆ ಧ್ವಜ ಹಾರಿಸಲು ಪ್ರೇರೇಪಣೆ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಪಂಜಾಬ್ ನಟ ದೀಪ್ ಸಿಧುನನ್ನು ಎರಡು ದಿನಗಳ ಹಿಂದೆ ಬಂಧಿಸಿದ್ದಾರೆ.
ಆತನನ್ನು ಬುಧವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಗಲಭೆ ಕುರಿತು ಹೇಳಿಕೆ ನೀಡಿರುವ ದೀಪ್ ಸಿಧು, "ಯಾವುದೇ ಕೆಟ್ಟ ಉದ್ದೇಶದಿಂದ ಕೆಂಪು ಕೋಟೆಗೆ ಹೋಗಿರಲಿಲ್ಲ. ಎಲ್ಲರೂ ಅಲ್ಲಿಗೆ ಹೋಗುತ್ತಿದ್ದ ಕಾರಣ ನಾನೂ ಹೋದೆ ಅಷ್ಟೆ" ಎಂದಿದ್ದಾರೆ.
ದೆಹಲಿ ಹಿಂಸಾಚಾರ: 7 ದಿನ ಪೊಲೀಸ್ ಕಸ್ಟಡಿಗೆ ಆರೋಪಿ ದೀಪ್ ಸಿಧು
ದೆಹಲಿಯಲ್ಲಿನ ಗಲಭೆಗೆ ಸಂಬಂಧಿಸಿದಂತೆ ಇತ್ತೀಚಿಗೆ ದೆಹಲಿ ಪೊಲೀಸರು 12 ಮಂದಿ ಪ್ರಮುಖ ಆರೋಪಿಗಳ ಭಾವಚಿತ್ರ ಬಿಡುಗಡೆಗೊಳಿಸಿ, ನಟ ದೀಪ್ ಸಿಧು ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಆನಂತರ ನವದೆಹಲಿಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ಹರಿಯಾಣದ ಕರ್ನಲ್ ಬಳಿ ಆರೋಪಿ ದೀಪ್ ಸಿಧುರನ್ನು ದೆಹಲಿ ವಿಶೇಷ ತಂಡದ ಪೊಲೀಸರು ಮಂಗಳವಾರ ಬಂಧಿಸಿದ್ದರು. ಮೊದಲ ದಿನದ ತನಿಖೆಯಲ್ಲಿ, ಸಿಧು ಕೆಂಪು ಕೋಟೆ ತಲುಪಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಸಲಾಗಿದೆ. ಮೊದಲು ತಾನು 25ನೇ ತಾರೀಕು ಸಿಂಘು ಗಡಿಯಲ್ಲಿ ಇರಲಿಲ್ಲ ಎಂದು ದೀಪ್ ಸಿಧು ಹೇಳಿಕೆ ನೀಡಿದ್ದು, ಪೊಲೀಸರು ಸಾಕ್ಷ್ಯ ಒದಗಿಸಿದ ನಂತರ ಪ್ರತಿಭಟನೆ ಸ್ಥಳದಲ್ಲಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ತಾನು ಯಾರನ್ನೂ ಪ್ರಚೋದಿಸಿಲ್ಲ ಎಂದು ಹೇಳಿದ್ದಾರೆ.
ಇಷ್ಟು ದಿನ ಏಕೆ ನಾಪತ್ತೆಯಾಗಿದ್ದರು ಹಾಗೂ ಎಲ್ಲಿ ತಲೆ ಮರೆಸಿಕೊಂಡಿದ್ದರು ಎಂಬ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿದ್ದ ಟ್ರ್ಯಾಕ್ಟರ್ ಜಾಥಾ ಹಿಂಸಾಚಾರಕ್ಕೆ ತಿರುಗಿತ್ತು. ಸುಮಾರು ಐನೂರು ಮಂದಿ ಪೊಲೀಸರು ಘಟನೆಯಲ್ಲಿ ಗಾಯಗೊಂಡಿದ್ದರು. ಹತ್ತಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದು, ಒಬ್ಬ ರೈತ ಸಾವನ್ನಪ್ಪಿದ್ದ.