ಪ್ರೀತಿ ನಂಬಿದ ಭಾವನಾಳಿಗೆ ಪೋಷಕರೇ ವೈರಿಗಳಾದ್ರು!
ನವದೆಹಲಿ, ನ.20: ಅತ್ಯಾಚಾರ, ಪೊಲೀಸರ ಮೇಲೆ ಹಲ್ಲೆ, ಈಶಾನ್ಯ ರಾಜ್ಯದವರಿಗೆ ಕಿರುಕುಳ ಸುದ್ದಿಯಿಂದ ಹೊರಬರದ ದೇಶದ ರಾಜಧಾನಿಯಿಂದ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಜಾತಿ ವಿಜಾತಿ ಎನ್ನದೆ ಪ್ರೀತಿಗೆ ಮರುಳಾಗಿದ್ದ ಭಾವನಾ ಎಂಬ ಯುವತಿ ಪಾಲಿಗೆ ಆಕೆಯ ಪೋಷಕರೇ ವೈರಿಗಳಾಗಿದ್ದಾರೆ, ಕೊನೆ ಹೆತ್ತ ಮಗಳನ್ನೇ ಮರ್ಯಾದೆ ಹೆಸರಿನಲ್ಲಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಒಟ್ಟಾರೆ ದೆಹಲಿ ಮತ್ತೊಂದು ತಲೆತಗ್ಗಿಸುವಂತಾಗಿದೆ.
ಅನ್ಯ ಜಾತಿಯ ಯುವಕನನ್ನು ವಿವಾಹವಾದ ಕಾರಣಕ್ಕಾಗಿ ವಿದ್ಯಾರ್ಥಿನಿಯನ್ನು ಪೋಷಕರೇ ಮರ್ಯಾದಾ ಹತ್ಯೆ ನಡೆಸಿರುವ ಆಘಾತಕಾರಿ ಘಟನೆ ನವದೆಹಲಿಯ ದ್ವಾರಕ ಪ್ರದೇಶದಲ್ಲಿ ನಡೆದಿದೆ. ಭಾವನಾ ಯಾದವ್ ಎಂಬ ವಿದ್ಯಾರ್ಥಿನಿ ನ.20ರಂದು ಅಭಿಷೇಕ್ ಎಂಬ ಯುವಕನನ್ನು ವಿವಾಹವಾಗಿದ್ದಳು. ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.
ಯುವಕನು ಕೆಳಜಾತಿಗೆ ಸೇರಿದ್ದರಿಂದ ಮದುವೆಯಾಗಬೇಡ ಎಂದು ಎಚ್ಚರಿಕೆ ನೀಡಿದ್ದರು. ತಂದೆ-ತಾಯಿಗಳ ವಿರೋಧದ ನಡುವೆಯೂ ಅಭಿಷೇಕ್ ಶೇಠ್(24) ಹಾಗೂ ಭಾವನಾ ಯಾದವ್ ನವದೆಹಲಿಯಲ್ಲಿ ಆರ್ಯ ಸಮಾಜದ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿದ್ದರು. ಆದರೆ, ಇವರ ಮದುವೆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ.
ಮನೆ, ಕುಲ, ಜಾತಿ ಮರ್ಯಾದೆ ಹಾಳು ಮಾಡಿದಳು ಎಂಬ ಕಾರಣವೊಡ್ಡಿ 21 ವರ್ಷ ವಯಸ್ಸಿನ ಭಾವನಾ ಯಾದವ್ ರನ್ನು ಆಕೆ ಪೋಷಕರಾದ ಜಗ್ಮೋಹನ್ ಹಾಗೂ ಸಾವಿತ್ರಿ ಮತ್ತಿತರರು ಸೇರಿಕೊಂಡು ಮನೆಯಲ್ಲಿ ಹತ್ಯೆ ಮಾಡಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಶ್ರೀವೆಂಕಟೇಶ್ವರ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಭಾವನಾ ಸಾವನ್ನು ಮುಚ್ಚಿಹಾಕುವ ಯತ್ನ ನಡೆದಿತ್ತು. ಆಕೆಯನ್ನು ದ್ವಾರಕಾದಲ್ಲಿ ಸಾಯಿಸಿ ಆಳ್ವಾರ್ ನಲ್ಲಿ ಅಂತಿಮ ಸಂಸ್ಕಾರ ನಡೆಸಿ ಪ್ರಕರಣಕ್ಕೆ ತೆರೆ ಎಳೆಯಲು ಭಾವನಾ ಪೋಷಕರು ಯೋಜಿಸಿದ್ದರು.
ಜಗ್ಮೋಹನ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ದೆಹಲಿ ಸ್ಥಳೀಯ ಕಾಂಗ್ರೆಸ್ನ ಸದಸ್ಯರಾಗಿದ್ದಾರೆ. ತಮ್ಮ ಮಗಳು ಅನಾರೋಗ್ಯದಿಂದ ಮೃತಪಟ್ಟಿದ್ದಳೆಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ದೆಹಲಿಯಲ್ಲಿ ಭಾವನಾ ಯಾದವ್ಳ ಅಂತ್ಯ ಸಂಸ್ಕಾರವನ್ನು ಗೌಪ್ಯವಾಗಿ ಮಾಡಲಾಗಿತ್ತು. ಇದರಿಂದ ಅನುಮಾನಗೊಂಡ ಕೆಲ ಸಾರ್ವಜನಿಕರು ಯಾರಿಗೂ ತಿಳಿಯದಂತೆ ಪೊಲೀಸರಿಗೆ ದೂರು ನೀಡಿದ್ದರು.
ಆದರೆ, ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ಅನುಮಾನ ಬಂದಿದೆ. ಭಾವನಾ ಸಾವನ್ನಪ್ಪಿರುವ ಸ್ಥಳ ಹಾಗೂ ಅಂತಿಮ ಸಂಸ್ಕಾರ ನಡೆದ ಸ್ಥಳ ಪರಿಶೀಲನೆ ನಡೆಸಿದ ಮೇಲೆ ಇದು ಮರ್ಯಾದಾ ಹತ್ಯೆ ಎಂಬುದು ದೃಢಪಟ್ಟಿದೆ. ಸದ್ಯಕ್ಕೆ ಪೊಲೀಸರ ವಶದಲ್ಲಿರುವ ಜಗ್ಮೋಹನ್ ಮತ್ತು ಸಾವಿತ್ರಿ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ನಮ್ಮ ಕುಟುಂಬದ ಮರ್ಯಾದೆ ಹಾಳಾಗುತ್ತದೆ. ಯಾವುದೇ ಕಾರಣಕ್ಕೂ ತಮ್ಮ ಪುತ್ರಿಯನ್ನು ಮದುವೆಯಾಗಬಾರದೆಂದು ಅಭಿಷೇಕ್ಗೆ ಬೆದರಿಕೆ ಹಾಕಿದ್ದರು. ಮೂಲತಃ ಅಭಿಷೇಕ್ ಪಂಜಾಬ್ನವನಾದರೆ ಭಾವನಾ ಯಾದವ್ ರಾಜಸ್ಥಾನದವರು. ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು.

ನಂತರ ಭಾವನಾ ಕಥೆ ಮುಗಿಸಿದ ಆಕೆ ಸೋದರ ಮಾವ ಲಕಾನ್ ಹಾಗೂ ಪೋಷಕರು ಅಭಿಷೇಕ್ ಗೆ ಕರೆ ಮಾಡಿ ಭಾವನಾ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ ಎಂದಿದ್ದಾರೆ. ಈ ಬಗ್ಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ. ನಂತರ ಸತ್ಯ ಸಂಗತಿ ಹೊರಬಿದ್ದಿದೆ.
2002ರಲ್ಲಿ ರಾಜಕಾರಣಿ ಡಿಪಿ ಯಾದವ್ ಅವರ ಪುತ್ರ ವಿಕಾಸ್ ಯಾದವ್ ಅವರ ತಂಗಿ ಭಾರ್ತಿ ಯಾದವ್ ರನ್ನು ನಿತೀಶ್ ಕಟಾರಾ ಪ್ರೀತಿಸಿದ್ದ. ಇದಕ್ಕಾಗಿ ಪ್ರಾಣವನ್ನು ತೆತ್ತಿದ್ದ. 2008ರಲ್ಲಿ ವಿಕಾಸ್ ಯಾದವ್ ಹಾಗೂ ವಿಲಾಸ್ ಯಾದವ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ದೆಹಲಿಯ ಈ ಪ್ರಕರಣದ ನಂತರ ಈಗಿನ ಭಾವನಾ ಯಾದವ್ ಹೊಸ ಸಂಚಲನ ಮೂಡಿಸಿದೆ.












Click it and Unblock the Notifications