ಮಾಜಿ ಸಂಸದ ಎಚ್.ವಿಶ್ವನಾಥ್ ದೆಹಲಿಯಲ್ಲೇನು ಮಾಡುತ್ತಿದ್ದಾರೆ?
ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಇಂದು ದೆಹಲಿಗೆ ತೆರಳಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ಕುತೂಹಲ ಕೆರಳಿಸಿದೆ.
ನವದೆಹಲಿ, ಏಪ್ರಿಲ್ 12: ಮಾಜಿ ಸಂಸದ ಎಚ್. ವಿಶ್ವನಾಥ್ ಇದ್ದಕ್ಕಿದ್ದಂತೆ ದೆಹಲಿಗೆ ತೆರಳಿರುವುದು ಯಾಕೆ? ರಾಜ್ಯ ಕಾಂಗ್ರೆಸ್ ನಾಯಕರು, ನಂಜನಗೂಡು ಮತ್ತು ಗುಂಡ್ಲೆಪೇಟೆ ಉಪಚುನಾವಣೆಯ ಫಲಿತಾಂಶ (ಏಪ್ರಿಲ್ 13)ದ ತಲೆಬಿಸಿಯಲ್ಲಿರುವಾಗ ಎಚ್.ವಿಶ್ವನಾಥ್ ಅವರ ದಿಡೀರ್ ದೆಹಲಿ ಪ್ರಯಾಣ ಅಚ್ಚರಿಯನ್ನುಂಟುಮಾಡಿರುವುದಂತೂ ಸತ್ಯ.
ಇಂದು ದೆಹಲಿಗೆ ತೆರಳಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿರುವ ಅಡಗೂರು ಎಚ್. ವಿಶ್ವನಾಥ್, ರಾಜ್ಯದಲ್ಲಿ ಪಕ್ಷದ ಸದ್ಯದ ಸ್ಥಿತಿ ಹೇಗಿದೆ ಎಂಬ ಬಗ್ಗೆ ಹೈ ಕಮಾಂಡ್ ಗೆ ಮಾಹಿತಿ ನೀಡಲು ತೆರಳಿದ್ದೇನೆ ಎಂದಿದ್ದಾರೆ.[ನನಗೆ ನೋಟೀಸ್ ನೀಡುವ ಅಧಿಕಾರ ನಿಮಗೆ ಕೊಟ್ಟವರ್ಯಾರು?: ಎಚ್.ವಿಶ್ವನಾಥ್ ಆಕ್ರೋಶ]

ಕಳೆದ ಕೆಲ ದಿನಗಳಿಂದ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ, ಹಿರಿಯ ನಾಯಕರುಗಳನ್ನ ನಡೆಸಿಕೊಳ್ಳುತ್ತಿರುವ ರೀತಿ ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ಯಾವ ರೀತಿಯ ಮಹತ್ವ ನೀಡಬೇಕು ಎಂಬುದರ ಬಗ್ಗೆ ಹೈ ಕಮಾಂಡ್ ಜತೆ ಚರ್ಚಿಸಲು ವಿಶ್ವನಾಥ್ ನಿರ್ಧರಿಸಿದ್ದಾರೆ.
'ನಾನು ಪಕ್ಷದ ಯಾವುದೇ ನಾಯಕರ ವಿರುದ್ಧ ದೂರು ನೀಡಲು ಬಂದಿಲ್ಲ. ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ, ಹಿರಿಯರನ್ನು ಕಡೆಗಣಿಸುತ್ತಿರುವ ರೀತಿ ಇದರಿಂದ ಕಾರ್ಯಕರ್ತರ ಮೇಲೆ ಉಂಟಾಗುವ ಪರಿಣಾಮ ಇವುಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಮಾತ್ರವಲ್ಲ, ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬೆಲ್ಲ ವಿಷಯಗಳ ಕುರಿತು ಹೈಕಮಾಂಡ್ ಗೆ ಮಾಹಿತಿ ನೀಡಲು ಬಂದಿದ್ದೇನೆ' ಎಂದವರು ಹೇಳಿದರು.[ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ?]
ಇಂದು ಸಂಜೆ ವೇಳೆಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡುವ ಬಗ್ಗೆ ಆಪ್ತಕಾರ್ಯದರ್ಶಿಗಳ ಜತೆ ಚರ್ಚಿಸಿ, ಸಮಯ ನಿಗದಿಪಡಿಸಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಇತ್ತೀಚೆಗಷ್ಟೇ ರಾಜ್ಯ ಕಾಂಗ್ರೆಸ್ ನ ಕೆಲ ನಾಯಕರು ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆಂದು ದೂರಿದ್ದ ಎಚ್. ವಿಶ್ವನಾಥ್ ಇದೀಗ ಹೈಕಮಾಂಡ್ ನತ್ತ ಮುಖ ಮಾಡಿರುವುದು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕುತೂಹಲ ಕೆರಳಿಸಿದೆ.












Click it and Unblock the Notifications