ಕೊರೊನಾದಿಂದ ಮೃತಪಟ್ಟ 67 ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು
ನವದೆಹಲಿ, ಮೇ 27: ಕೊರೊನಾ ವೈರಸ್ನಿಂದ ಮೃತಪಟ್ಟ 67 ಪತ್ರಕರ್ತರ ಕುಟುಂಬಕ್ಕೆ ನೆರವನ್ನು ನೀಡಲು ಗುರುವಾರ ಕೇಂದ್ರ ಸರ್ಕಾರ ಒಪ್ಪಿಗೆಯನ್ನು ನೀಡಿದೆ. ಪ್ರೆಸ್ ಇನ್ಫರ್ಮೇಶನ್ ಬ್ಯೂರೋ(ಪಿಐಬಿ)ದ ಪತ್ರಕರ್ತರ ಕಲ್ಯಾಣ ಸಮಿತಿ ಕೇಂದ್ರ ಸರ್ಕಾರದ ಮುಂದೆ ಕೊರೊನಾ ದಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದಕ್ಕೆ ಅನುಮೋದನೆ ದೊರೆತಿದೆ.
ಈ ಮೂಲಕ ಈ ವರ್ಷ ಕೊರೊನಾ ವೈರಸ್ಗೆ ಬಲಿಯಾದ 26 ಪತ್ರಕರ್ತರು ಹಾಗೂ 2020ರಲ್ಲಿ ಮೃತಪಟ್ಟ 41 ಪತ್ರಕರ್ತರು ಸೇರಿದಂತೆ ಒಟ್ಟು 67 ಪತ್ರಕರ್ತರ ಕುಟುಂಬಗಳಿಗೆ ಈ ಪರಿಹಾರ ಮೊತ್ತ ದೊರೆಯಲಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರ ಮಾರ್ಗದರ್ಶನದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಭಾರತ ಸರ್ಕಾರದ ವಾರ್ತಾ ಶಾಖೆ, ಕೋವಿಡ್ 19ರಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳನ್ನು ಸಂಪರ್ಕಿಸಿ, ಈ ಯೋಜನೆಯ ಬಗ್ಗೆ ತಿಳಿಸಿ, ಕ್ಲೇಮ್ ಗಾಗಿ ಅರ್ಜಿ ಸಲ್ಲಿಸಲು ಮಾರ್ಗದರ್ಶನ ಮಾಡಿದೆ. ಜೆಡಬ್ಲ್ಯುಎಸ್ ಅಡಿ ಆರ್ಥಿಕ ನೆರವು ಕೋರಿ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಜೆಡಬ್ಲ್ಯುಎಸ್ ಸಭೆಯನ್ನು ವಾರಕ್ಕೊಮ್ಮೆ ನಡೆಸಲು ಸಮಿತಿ ನಿರ್ಧರಿಸಿದೆ.

ಕೋವಿಡ್ -19 ಅಲ್ಲದೆ ಬೇರೆ ಕಾರಣದಿಂದ ಮೃತಪಟ್ಟ ಪತ್ರಕರ್ತರ ಕುಟುಂಬದಿಂದ ಬಂದಿದ್ದ 11 ಅರ್ಜಿಗಳನ್ನೂ ಇಂದು ನಡೆದ ಸಭೆ ಪರಿಗಣಿಸಿತು. ಜೆಡಬ್ಲ್ಯುಎಸ್ ಸಭೆಯಲ್ಲಿ ಪಿಐಬಿಯ ಪ್ರಧಾನ ಮಹಾ ನಿರ್ದೇಶಕ ಜೈದೀಪ್ ಭಟ್ನಾಗರ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್, ಸಮಿತಿಯ ಪತ್ರಕರ್ತರ ಪ್ರತಿನಿಧಿಗಳಾದ ಸಂತೋಷ್ ಠಾಕೂರ್, ಅಮಿತ್ ಕುಮಾರ್, ಉಮೇಶ್ವರ್ ಕುಮಾರ್, ಶ್ರೀಮತಿ ಸರ್ಜನ ಶರ್ಮಾ ಸಭೆಯಲ್ಲಿ ಭಾಗಿಯಾಗಿದ್ದರು. ಪತ್ರಕರ್ತರ ಕಲ್ಯಾಣ ಯೋಜನೆ ಅಡಿಯಲ್ಲಿ ಪತ್ರಕರ್ತರ ಕುಟುಂಬದವರು ಪಿಐಬಿ ಮೂಲಕ ಈ ವೆಬ್ ಸೈಟ್ ಲಿಂಕ್ ನಲ್ಲಿ ನೆರವಿಗೆ ಅರ್ಜಿ ಸಲ್ಲಿಬಹುದು.












Click it and Unblock the Notifications