ಹಳೆಯ ಮದ್ಯ ನೀತಿ ಮುಂದುವರಿಸಲು ದೆಹಲಿ ಸರ್ಕಾರ ನಿರ್ಧಾರ
ನವದೆಹಲಿ,ಜುಲೈ. 30: ಪ್ರಸ್ತುತ ಜಾರಿಯಲ್ಲಿರುವ ಅಬಕಾರಿ ನೀತಿಯ ಅವಧಿ ಮುಗಿಯಲು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ದೆಹಲಿ ಸರ್ಕಾರವು ಮುಂದಿನ ಆರು ತಿಂಗಳ ಕಾಲ ಚಿಲ್ಲರೆ ಮದ್ಯ ಮಾರಾಟದ ಹಳೆಯ ನೀತಿ ಮುಂದುವರಿಸಲು ನಿರ್ಧರಿಸಿದೆ.
ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದಿಂದ (ಇಒಡಬ್ಲ್ಯು) ನಡೆಯುತ್ತಿರುವ ತನಿಖೆ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ದೆಹಲಿ ಸರ್ಕಾರದ ನಡುವಿನ ಮುಖಾಮುಖಿಯ ನಡುವೆ ರಾಷ್ಟ್ರ ರಾಜಧಾನಿಯಲ್ಲಿನ ಮದ್ಯ ನೀತಿಯ ಸುದ್ದಿ ಹೊಸ ತಿರುವು ಪಡೆದುಕೊಂಡಿದೆ.
ಅಬಕಾರಿ ನೀತಿ 2021-22, ಮಾರ್ಚ್ 31 ರ ನಂತರ ತಲಾ ಎರಡು ತಿಂಗಳವರೆಗೆ ಎರಡು ಬಾರಿ ವಿಸ್ತರಿಸಲಾಗಿದ್ದು, ಜುಲೈ 31 ರಂದು ಮುಕ್ತಾಯಗೊಳ್ಳುತ್ತದೆ. ಆದರೆ, ಕರಡು ನೀತಿಯನ್ನು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಅನುಮೋದನೆಗಾಗಿ ಕಳುಹಿಸಬೇಕಿದೆ.
ಕಳೆದ ವಾರ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ದೆಹಲಿಯ ಅಬಕಾರಿ ನೀತಿ 2021-22 ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಇದರಿಂದ ಕೇಂದ್ರ ಮತ್ತು ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ನಡುವಿನ ಸಂಬಂಧವು ಬಿರುಕು ಕಂಡಿತ್ತು. ಅಬಕಾರಿ ಇಲಾಖೆಯ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಉಸ್ತುವಾರಿ ವಹಿಸಿದ್ದರು.
ಕೇಂದ್ರ ಸರ್ಕಾರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದ ಈ ಕ್ರಮದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಲೆಫ್ಟಿನೆಂಟ್ ಗವರ್ನರ್ ಅವರು ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಎಎಪಿ ನಾಯಕರು ಜೈಲಿಗೆ ಹೋಗುವುದಕ್ಕೂ ಹೆದರುವುದಿಲ್ಲ ಎಂದು ಹೇಳಿದರು.
ಮದ್ಯ ಮಾರಾಟ ಅಕ್ರಮ ಪರವಾನಗಿಗಳಿಗೆ ಅನುಕೂಲ
ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಈ ವಿಷಯದ ಬಗ್ಗೆ ಸಲ್ಲಿಸಿದ ವರದಿಯನ್ನು ಆಧಾರಿಸಿ ಲೆಫ್ಟಿನೆಂಟ್ ಗವರ್ನರ್ ಅವರು ಈ ಕ್ರಮಕ್ಕೆ ಒತ್ತಾಯಿಸಿದ್ದರು. ಜುಲೈ 8 ರಂದು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳುವ ವರದಿಯಲ್ಲಿ ಸಿಸೋಡಿಯಾ ಅವರು ಮದ್ಯ ಮಾರಾಟ ಅಕ್ರಮ ಪರವಾನಗಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ಕಮಿಷನ್ ಪಡೆದು ಇತ್ತೀಚಿನಿ ಪಂಜಾಬ್ ಚುನಾವಣೆಗೆ ಈ ಹಣವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಬಕಾರಿ ನೀತಿಯಲ್ಲಿನ ನಿಯಮಗಳ ಉಲ್ಲಂಘನೆ
ಜುಲೈ 25 ರಂದು ದೆಹಲಿ ಕಾಂಗ್ರೆಸ್ ಘಟಕವು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿತ್ತು. ಸರ್ಕಾರದ ಅಬಕಾರಿ ನೀತಿಯಲ್ಲಿನ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಆರೋಪದ ಮೇಲೆ ಸಿಸಿಡಿಯಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತು. ಪಟಪರ್ಗಂಜ್ನಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಿಸೋಡಿಯಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬ್ಯಾನರ್ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದರು.
ಭ್ರಷ್ಟಾಚಾರ ನಿಗ್ರಹ ದಳಕ್ಕೆ ಗವರ್ನರ್ ಸೂಚನೆ
ಮದ್ಯದ ರಿಟೇಲ್ ಗುತ್ತಿಗೆದಾರರೊಂದಿಗಿನ ಭ್ರಷ್ಟ ವ್ಯವಹಾರಗಳಿಗೆ ದೆಹಲಿ ಸರ್ಕಾರದ ಅಬಕಾರಿ ಇಲಾಖೆಯ ಉಸ್ತುವಾರಿ ಸಚಿವ ಸಿಸೋಡಿಯಾ ನೇರ ಹೊಣೆ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಆರೋಪಿಸಿದ್ದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಶುಕ್ರವಾರದಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಾರಿಗೆ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ ಸಂಬಂಧ ತನಿಕೆ ನಡೆಸುವಂತೆ ಹೇಳೀದ್ದರು. ಅಲ್ಲದೆ ಆಟೋ ಫೈನಾನ್ಸರ್ಗಳು, ಅನಧಿಕೃತ ಡೀಲರ್ಗಳು ಮತ್ತು ಸಾರಿಗೆ ಪ್ರಾಧಿಕಾರದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಗವರ್ನರ್ ಕಚೇರಿ ಮೂಲಗಳು ತಿಳಿಸಿದ್ದವು.
Recommended Video