'ಜನರಿಗೆ ಗುಂಡಿಕ್ಕುವುದನ್ನು ನಿಲ್ಲಿಸಿ': ಲೋಕಸಭೆಯಲ್ಲಿ ಗದ್ದಲ
ನವದೆಹಲಿ, ಫೆಬ್ರವರಿ 3: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರ ವಿರುದ್ಧ ಬಿಜೆಪಿ ಸಂಸದರು ನೀಡಿದ್ದ ಹೇಳಿಕೆ ಲೋಕಸಭೆಯಲ್ಲಿ ಸೋಮವಾರ ತೀವ್ರ ಕೋಲಾಹಲ ಸೃಷ್ಟಿಸಿತು.
ಅಧಿವೇಶನದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಮಾತನಾಡಲು ವಿರೋಧಪಕ್ಷದ ಸಂಸದರು ಆಸ್ಪದ ನೀಡಲಿಲ್ಲ. ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ್ದ ಅನುರಾಗ್ ಠಾಕೂರ್, 'ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿರಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಕ್ಕಾಗಿ ಚುನಾವಣಾ ಆಯೋಗ ಅವರನ್ನು ಚುನಾವಣಾ ಪ್ರಚಾರದಿಂದ 72 ಗಂಟೆ ನಿರ್ಬಂಧಿಸಿತ್ತು.
ಅನುರಾಗ್ ಠಾಕೂರ್ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ವಿರೋಧಪಕ್ಷಗಳು ಆಗ್ರಹಿಸಿದ್ದವು. ಸೋಮವಾರ ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಲು ಠಾಕೂರ್ ಎದ್ದು ನಿಂತಾಗ ವಿರೋಧಪಕ್ಷಗಳ ಮುಖಂಡರು, 'ಜನರಿಗೆ ಗುಂಡಿಕ್ಕುವುದನ್ನು ನಿಲ್ಲಿಸಿ', 'ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ' ಎಂದು ಘೋಷಣೆಗಳನ್ನು ಕೂಗಿದರು.

ಸಿಎಎ ಮತ್ತು ಎನ್ಆರ್ಸಿ ವಿಚಾರವಾಗಿ ಲೋಕಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು. ರಾಷ್ಟ್ರಪತಿಗಳ ಭಾಷಣಕ್ಕೆ ಅಭಿನಂದನೆ ಮಂಡಿಸುವ ವೇಳೆ ಮತ್ತೊಬ್ಬ ವಿವಾದಿತ ಸಂಸದ ಪರ್ವೇಶ್ ವರ್ಮಾ ಎದ್ದು ಮಾತು ಆರಂಭಿಸಿದಾಗ ವಿರೋಧಪಕ್ಷದ ಮುಖಂಡರು ಸದನದಿಂದ ಹೊರನಡೆಯಲು ಆರಂಭಿಸಿದರು.
ಯುವಜನರ ಕೌಶಲ ಅಭಿವೃದ್ಧಿಯಂತಹ ಮಹತ್ವದ ವಿಚಾರ ಚರ್ಚೆಗೆ ಬರಬೇಕಿರುವುದರಿಂದ ಎಲ್ಲರೂ ತಮ್ಮ ಆಸನದಲ್ಲಿ ಕುಳಿತುಕೊಂಡು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾ ಸೂಚನೆ ನೀಡಿದರು. ಪ್ರಶ್ನೋತ್ತರ ಸಮಯವು ಸುಗಮ ಸುಗಮವಾಗಿ ನಡೆಯಬೇಕು. ಪ್ರಶ್ನೋತ್ತರ ಕಲಾಪದ ಬಳಿಕ ಸದಸ್ಯರು ಸಮಸ್ಯೆಗಳನ್ನು ಪ್ರಸ್ತಾಪಿಸಲು ಶೂನ್ಯ ಅವಧಿಯಲ್ಲಿ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು. ಆದರೆ ವಿರೋಧಪಕ್ಷಗಳ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದರು.
ರಾಜ್ಯಸಭೆಯಲ್ಲಿ ಕೂಡ ಸಿಎಎ ಮತ್ತು ಎನ್ಆರ್ಸಿ ವಿಚಾರ ಚರ್ಚೆಗೆ ಬಂದಿತ್ತು. ಆದರೆ ವಿಪಕ್ಷಗಳ ಜೋರಾದ ಕೂಗಾಟದಿಂದಾಗಿ ಕಲಾಪ ಮುಂದುವರಿಸಲು ಕಷ್ಟವಾಗಿದ್ದರಿಂದ ಸದನವನ್ನು ಮುಂದೂಡಲಾಯಿತು.












Click it and Unblock the Notifications