ನಿಮ್ಮನ್ನು ದೇವರೇ ಕಾಪಾಡಬೇಕು: ಸಿಬಿಐ ಮಾಜಿ ಅಧಿಕಾರಿ ಮೇಲೆ ಸುಪ್ರೀಂಕೋರ್ಟ್ ಸಿಡಿಮಿಡಿ
ನವದೆಹಲಿ, ಫೆಬ್ರವರಿ 7: ಬಿಹಾರದಲ್ಲಿನ ಸರ್ಕಾರಿ ಆಶ್ರಯ ತಾಣಗಳಲ್ಲಿ ಬಾಲಕಿಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ನಡೆದ ಪ್ರಕರಣದ ತನಿಖೆಯಲ್ಲಿ ಅಜಾಗರೂಕತೆ ತೋರಿದ್ದಕ್ಕಾಗಿ ಸುಪ್ರೀಂಕೋರ್ಟ್ ಸಿಬಿಐನ ಮಾಜಿ ಮಧ್ಯಂತರ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರಿಂದ ವಿವರಣೆ ಕೇಳಿದೆ.
ಈ ಗಂಭೀರ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರುವ ಮೂಲಕ ನಾಗೇಶ್ವರ್ ರಾವ್ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಆಸ್ತಾನಾ ಅವರ ವಿವಾದದ ನಡುವೆ ಸಿಬಿಐನ ಅನೇಕ ಅಧಿಕಾರಿಗಳನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಲಾಗಿತ್ತು. ಅದರಲ್ಲಿ ಬಿಹಾರದ ಈ ಸೂಕ್ಷ್ಮ ಪ್ರಕರಣದ ತನಿಖೆ ನಡೆಸುತ್ತಿದ್ದ ಎ.ಕೆ. ಶರ್ಮಾ ಅವರೂ ಇದ್ದರು.

ಈ ಪ್ರಕರಣದ ತನಿಖೆಯ ಮುಖ್ಯಸ್ಥರಾಗಿ ಎ.ಕೆ. ಶರ್ಮಾ ಅವರೇ ಮುಂದುವರಿಯಬೇಕಿತ್ತು. ಈ ಪ್ರಮಾದಕ್ಕೆ ನಾಗೇಶ್ವರ ರಾವ್ ಹೊಣೆಗಾರ ಎಂದು ಹೇಳಿದೆ. ತನ್ನ ನಿರ್ಬಂಧಗಳ ನಡುವೆಯೂ ವರ್ಗಾವಣೆ ಮಾಡಲಾಗಿದೆ ಎಂದಿರುವ ಕೋರ್ಟ್, ವರ್ಗಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನಿರ್ದೇಶನ ರವಾನಿಸಲಾಗಿತ್ತೇ ಎಂದು ಪ್ರಶ್ನಿಸಿದೆ.
'ನಾಗೇಶ್ವರ ರಾವ್ ಮತ್ತು ವಿಚಾರಣೆಯ ಉಸ್ತುವಾರಿಯಾಗಿದ್ದ ಭಸುರಾನ್ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ. ನಮ್ಮ ಆದೇಶಗಳ ಜತೆ ನೀವು ಆಟವಾಡಿದ್ದೀರಿ. ನಿಮಗೆ ದೇವರೇ ಸಹಾಯ ಮಾಡಬೇಕು' ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅಸಮಾಧಾನದಿಂದ ಹೇಳಿದರು.
ಭ್ರಷ್ಟಾಚಾರ ನಿಗ್ರಹ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಎ.ಕೆ. ಶರ್ಮಾ ಅವರನ್ನು ವರ್ಗಾವಣೆ ಮಾಡಿರುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ, 'ಅವರನ್ನು ಬೇರೆಡೆ ವರ್ಗಾಯಿಸಬಾರದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿರುವಾಗ ಕೇಂದ್ರವು ಅವರನ್ನು ಹೇಗೆ ವರ್ಗಾವಣೆ ಮಾಡುತ್ತದೆ?' ಎಂದು ಪ್ರಶ್ನಿಸಿದರು.












Click it and Unblock the Notifications